ಲೀಡ್ಸ್: ನೆದರ್ಲೆಂಡ್ಸ್ ವಿರುದ್ಧ 2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ (Women's T20 World Cup 2026) ಭಾರತ ಮಹಿಳಾ ತಂಡ 95 ರನ್ಗಳಿಂದ ಭರ್ಜರಿಯಾಗಿ ಗೆದ್ದರೂ, ಪ್ರಮುಖ ಆಟಗಾರ್ತಿ ಶ್ರೇಯಾಂಕ ಪಾಟೀಲ್ (Shreyanka Patil) ಅವರ ಗಾಯದ ಭೀತಿ ತಂಡಕ್ಕೆ ಎದುರಾಗಿದೆ. ನೆದರ್ಲೆಂಡ್ಸ್ ತಂಡದ ಚೇಸಿಂಗ್ ವೇಳೆ ಫೀಲ್ಡಿಂಗ್ನಲ್ಲಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಬಲಗಾಲಿನ ಪಾದ ಉಳುಕಿತು. ಇದರಿಂದಾಗಿ ಅವರು ತಕ್ಷಣ ನೆಲಕ್ಕೆ ಉರುಳಿದರು ಹಾಗೂ ನಂತರ ಅವರು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು.
ಬುಧವಾರ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಈ ಘಟನೆ ನಡೆಯಿತು. ನೆದರ್ಲೆಂಡ್ಸ್ ತಂಡದ ಚೇಸಿಂಗ್ ವೇಳೆ ಆರನೇ ಓವರ್ ಮೊದಲನೇ ಎಸೆತದಲ್ಲಿ ಕನ್ನಡತಿ ಗಾಯಕ್ಕೆ ತುತ್ತಾದರು. ಅವರು ಅರೌಂಡ್ ದಿ ವಿಕೆಟ್ ಬೌಲ್ ಮಾಡಿದರು ಹಾಗೂ ಫೋಬ್ ಮೊಕೆಬೊಯಾರ್ ಅವರು ಚೆಂಡನ್ನು ಆನ್ಸೈಡ್ ಹೊಡೆದರು. ಮಿಡ್ ವಿಕೆಟ್ನಲ್ಲಿದ್ದ ಫೀಲ್ಡರ್ ಚೆಂಡನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದರು, ಈ ವೇಳೆ ಸ್ವತಃ ಶ್ರೇಯಾಂಕ ಪಾಟೀಲ್ ಅವರೇ ಓಡಿ ಹೋಗಿ ಚೆಂಡನ್ನು ಹಿಡಿಯುವ ವೇಳೆ ಬಲಗಾಲಿ ಪಾದ ಉಳುಕಿ ನೆಲಕ್ಕೆ ಉರುಳಿದರು.
IND vs AFG: ಗಿಲ್-ಕಿಶನ್ ಶತಕ, 2ನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ವಶಪಡಿಸಿಕೊಂಡ ಭಾರತ!
ಈ ವೇಳೆ ಶ್ರೇಯಾಂಕ ಪಾಟೀಲ್ ನೋವು ತಾಳಲಾದರೆ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ನಂತರ ಸಹ ಆಟಗಾರ್ತಿ ಅವರನ್ನು ಹಾಗೆ ಉಳಿಯುವಂತೆ ತಿಳಿಸಿದರು. ಡ್ರೆಸ್ಸಿಂಗ್ ರೂಂ ಕಡೆಯಿಂದ ವೈದ್ಯಕೀಯ ತಂಡ ಮೈದಾನಕ್ಕೆ ಆಗಮಿಸಿ, ಪಾಟೀಲ್ ಅವರನ್ನು ತಪಾಸಣೆ ನಡೆಸಿದರು. ಬಳಿಕ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಭಾರತ ತಂಡದಲ್ಲಿ ಆತಂಕ ಮೂಡಿತ್ತು.
ಇದರ ಬೆನ್ನಲ್ಲೆ ಕೂಡ ಬಿಸಿಸಿಐ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿತು. ಶ್ರೇಯಾಂಕ ಪಾಟೀಲ್ ಅವರು ಗಾಯಕ್ಕೆ ತುತ್ತಾಗಿದ್ದಾರೆ ಹಾಗೂ ಅವರ ಗಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ನೀಡಲಾಗುವುದು. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಅಂದ ಹಾಗೆ ಶ್ರೇಯಾಂಕ ಪಾಟೀಲ್ ಅವರ ಓವರ್ ಅನ್ನು ಶಫಾಲಿ ವರ್ಮಾ ಮುಗಿಸಿದರು.
ಟಿ20 ವಿಶ್ವಕಪ್ ಟೂರ್ನಿಯಿಂದ ಕನ್ನಡತಿ ಔಟ್
ಸದ್ಯ ಶ್ರೇಯಾಂಕ ಪಾಟೀಲ್ ಅವರ ಗಾಯದ ಸ್ವರೂಪ ಯಾವ ರೀತಿ ಇದೆ ಎಂದು ಇನ್ನೂ ಬಹಿರಂಗವಾಗಿಲ್ಲ. ಬಹುಶಃ ಗುರುವಾರ ಇದರ ಬಗ್ಗೆ ಮಾಹಿತಿ ಹೊರಬೀಳಬಹುದು. ಅಂದ ಹಾಗೆ ಸದ್ಯದ ಶ್ರೇಯಾಂಕ ಪಾಟೀಲ್ ಅವರ ಪರಿಸ್ಥಿತಿಯನ್ನು ಗಮನಿಸಿದರೆ, ಅವರು ಮಹತ್ವದ ಟೂರ್ನಿಯ ಇನ್ನುಳಿದ ಭಾಗದಿಂದ ಹೊರಬೀಳುವ ಸಾಧ್ಯತೆ ಇದೆ. ಇದು ಭಾರತ ಮಹಿಳಾ ತಂಡ ಭಾರಿ ಹಿನ್ನಡೆಯನ್ನು ತಂದೊಡ್ಡಲಿದೆ.
ಭಾರತ ಮಹಿಳಾ ತಂಡ 95 ರನ್ ಜಯ
ಈ ಪಂದ್ಯದಲ್ಲಿ ಭಾರತ ನೀಡಿದ್ದ 210 ರನ್ಗಳ ಗುರಿಯನ್ನು ಹಿಂಬಾಲಿಸಿದ ನೆದರ್ಲೆಂಡ್ಸ್ ತಂಡ, ಶಫಾಲಿ ವರ್ಮಾ ಹಾಗೂ ಶ್ರೀಚರಣಿ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿತು. ಆ ಮೂಲಕ 17.3 ಓವರ್ಗಳಿಗೆ 114 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಭರ್ಜರಿ ಗೆಲುವು ಪಡೆಯಿತು.