ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಎಂಎಸ್ ಧೋನಿಯ(MS Dhoni) ಹುಟ್ಟು ಹಬ್ಬದ ನಿಮಿತ್ತ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಹೃದಯ ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಜಯ್ ಅವರು ಹೃದಯ ಸ್ಪರ್ಶಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಿಎಸ್ಕೆ ಅಭಿಮಾನಿಗಳ ಪಾಲಿಗೆ ಥಲಾಗೆ ವಿಶೇಷ ಗೌರವವನ್ನು ಅರ್ಪಿಸಿದ್ದಾರೆ. ಎಂಎಸ್ ಧೋನಿ ಸಿಎಸ್ಕೆ ತಂಡದಲ್ಲಿ ದೀರ್ಘಾವಧಿ ಆಡುವ ಮೂಲಕ ತಮಿಳುನಾಡಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಅವರು ಸಂಪಾದಿಸಿದ್ದಾರೆ.
ಜುಲೈ 7 ರಂದು ಎಂಎಸ್ ಧೋನಿ ಹುಟ್ಟುಹಬ್ಬ ಹಾಗೂ ಭಾರತದಾದ್ಯಂತ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಆಟಗಾರನಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕೂಡ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ, ತಮಿಳು ನಟ ಹಾಗೂ ಸಿಎಂ ವಿಜಯ್ ಅವರ ಶುಭಾಶಯ ಕೋರಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
IND vs ZIM: ಭಾರತ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಹೆಡ್ ಕೋಚ್? ಗೌತಮ್ ಗಂಭೀರ್ ಇಲ್ಲ!
"ನಿಮ್ಮ ಹೆಸರನ್ನು ಮೊಳಗಿಸುವ ಪ್ರತಿಯೊಂದು ಸೀಟಿಯ ಸದ್ದು ಮತ್ತು ನೀವು ಪ್ರೇರೇಪಿಸಿರುವ ಅಸಂಖ್ಯಾತ ಅಭಿಮಾನಿಗಳ ಹೃದಯಗಳಲ್ಲಿ ನಿಮ್ಮ ಪಯಣ ತಮಿಳುನಾಡಿನ ಕ್ರೀಡಾ ಭಾವನೆಯ ಅವಿಭಾಜ್ಯ ಅಂಗವಾಗಿದೆ."
'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಅದ್ಭುತ ಕ್ರಿಕೆಟ್ ಪರಂಪರೆ, ಶಾಂತ ನಾಯಕತ್ವ ಹಾಗೂ ವಿನಮ್ರ ವ್ಯಕ್ತಿತ್ವವು ತಲೆಮಾರುಗಳಿಗೆ ಸ್ಫೂರ್ತಿಯಾಗಿದೆ. ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇವೆ. ನಿಮಗಾಗಿ ಮೊಳಗುವ ಸೀಟಿಗಳ ಸದ್ದು ಇನ್ನಷ್ಟು ಹೆಚ್ಚಾಗಲಿ," ಎಂದು ಸಿಎಂ ವಿಜಯ್ ಎಕ್ಸ್ ಖಾತೆಯಲ್ಲಿ ಎಂಎಸ್ ಧೋನಿ ಜೊತೆಗಿನ ಫೋಟೋವನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ.
ತಮಿಳುನಾಡು ಜೊತೆಗೆ ಎಂಎಸ್ ಧೋನಿ ವಿಶೇಷ ಬಾಂಧವ್ಯ
ಎಂಎಸ್ ಧೋನಿ 2008ರಿಂದ ಇಲ್ಲಿಯವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಮಿಳುನಾಡು ಫ್ರಾಂಚೈಸಿ ಸಿಎಸ್ಕೆಗೆ ಅವರು ಒಟ್ಟು ಐದು ಬಾರಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ತಂಡ ಎಂಬ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಜತೆಗೆ ಸಿಎಸ್ಕೆ ಹಂಚಿಕೊಂಡಿದ್ದಾರೆ. ಈ ಐದೂ ಟ್ರೋಫಿಗಳು ಎಂಎಸ್ ಧೋನಿ ನಾಯಕತ್ವದಲ್ಲಿಯೇ ಮೂಡಿ ಬಂದಿರುವುದು ವಿಶೇಷ.
ಎಂಎಸ್ ಧೋನಿ ಮೂಲತಃ ಜಾರ್ಖಂಡ್ ರಾಂಚಿ ಮೂಲದವರಾದರೂ ಅವರು ತಮಿಳುನಾಡು ಅವರಿಗೆ ಒಂದು ರೀತಿಯ ತವರು ರಾಜ್ಯದಂತೆ. ಸಿಎಸ್ಕೆ ಅಭಿಮಾನಿಗಳು ಎಂಎಸ್ ಧೋನಿ ಅವರನ್ನು ಥಲಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ಅದರಂತೆ ಎಂಎಸ್ ಧೋನಿ, ತಮ್ಮ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಚೆನ್ನೈನಲ್ಲಿ ನಡೆಯವ ಪ್ರತಿಯೊಂದು ಪಂದ್ಯದಲ್ಲಿಯೂ ಅಭಿಮಾನಿಗಳು ಥಲಾ ಅಥವಾ ಧೋನಿ ಎಂದು ಕೂಗುವ ಮೂಲಕ ಪ್ರೋತ್ಸಾಹವನ್ನು ನೀಡುತ್ತಾರೆ.
ʻಅದು ನನ್ನ ಹೇಳಿಕೆಯಲ್ಲʼ: ಭಾರತ ನಾಯಕತ್ವದಿಂದ ತೆಗೆದ ಬಗ್ಗೆ ಸೂರ್ಯಕುಮಾರ್ ಪ್ರತಿಕ್ರಿಯೆ!
ಆದರೆ, ಎಂಎಸ್ ಧೋನಿ ಸದ್ಯ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದಾರೆ. ಅವರು ಬಹುಶಃ ತಮ್ಮ ಐಪಿಎಲ್ ವೃತ್ತಿ ಜೀವನಕ್ಕೆ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಐಪಿಎಲ್ ಟೂರ್ನಿಯ ವೇಳೆ ವಿದಾಯ ಹೇಳಬಹುದು. ಅದರಲ್ಲಿಯೂ ವಿಶೇಷವಾಗಿ ಅವರು ತವರು ಅಂಗಣ ಎಂಎ ಚಿದಂಬರಂ ಅಂಗಣದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಿವೃತ್ತಿ ಘೋಷಿಸಲು ಎದುರು ನೋಡುತ್ತಿರಬಹುದು.