ಇಂದೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ (IND vs NZ) ಮೂರನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಯುವ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಆಡುತ್ತಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಅವರು ಈ ಪಂದ್ಯದ ತಮ್ಮ ಮೊದಲ ಓವರ್ನಲ್ಲಿಯೇ ಕಿವೀಸ್ ತಂಡದ ವಿಕೆಟ್ ಅನ್ನು ಕಿತ್ತರು. ಆ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ಅರ್ಷದೀಪ್ ಅವರ ಅದ್ಭುತ ಪ್ರದರ್ಶನದ ನಂತರ ಕ್ರೀಡಾಂಗಣವು ಚಪ್ಪಾಳೆಯಿಂದ ತುಂಬಿ ತುಳುಕುತ್ತಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸರಣಿ ನಿರ್ಣಾಯಕ ಪಂದ್ಯದಲ್ಲಿ ಪ್ರಸಿಧ್ ಕೃಷ್ಣ ಬದಲಿಗೆ ಅರ್ಷದೀಪ್ ಸಿಂಗ್ ಅವರನ್ನು ಸೇರಿಸಿಕೊಳ್ಳಲು ತಂಡದ ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿತು. ಈ ನಿರ್ಧಾರ ಸರಿ ಎಂದು ಸಾಬೀತುಪಡಿಸಲು ಅರ್ಷದೀಪ್ ಸಮಯ ತೆಗೆದುಕೊಳ್ಳಲಿಲ್ಲ. ನ್ಯೂಜಿಲೆಂಡ್ ಇನಿಂಗ್ಸ್ನ ತನ್ನ ಮೊದಲ ಓವರ್ನ ಎರಡನೇ ಎಸೆತದಲ್ಲಿ ಡೆವೋನ್ ಕಾನ್ವೇ ಬೌಂಡರಿ ಬಾರಿಸಿದರೂ, ಮುಂದಿನ ಕೆಲವು ಎಸೆತಗಳಲ್ಲಿ ಅರ್ಷದೀಪ್ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದರು. ಅವರು ಇನ್ಸ್ವಿಂಗರ್ನೊಂದಿಗೆ ಹೆನ್ರಿ ನಿಕೋಲ್ಸ್ ಅವರನ್ನು ಔಟ್ ಮಾಡಿದರು. ಚೆಂಡು ನಿಕೋಲ್ಸ್ ಬ್ಯಾಟ್ನ ಒಳ ಅಂಚನ್ನು ತಗುಲಿ ಸ್ಟಂಪ್ಗಳನ್ನು ಬಡಿಯಿತು. ಮೊದಲ ಓವರ್ನಲ್ಲಿಯೇ ಯಶಸ್ಸನ್ನು ಪಡೆಯುವ ಮೂಲಕ ಅರ್ಷ್ದೀಪ್ ತಾವು ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದರು.
ʻನನ್ನ ಅಪ್ಪನ ಮುಂದೆ ಪ್ರತಿ ದಿನ ಅಳುತ್ತಿದ್ದೆʼ: ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ನೆನೆದ ಹರ್ಷಿತ್ ರಾಣಾ!
ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಆಕ್ರೋಶ
ಅರ್ಷದೀಪ್ ವಿಕೆಟ್ ಪಡೆದ ತಕ್ಷಣ ಸೋಶಿಯಲ್ ಮೀಡಿಯಾದ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಟೀಕಿಸಿದರು. ಸರಣಿಯ ಮೊದಲ ಎರಡು ಪಂದ್ಯಗಳಿಂದ ಅರ್ಷದೀಪ್ರಂತಹ ವಿಕೆಟ್ ಪಡೆಯುವವರನ್ನು ಹೊರಗಿಡುವುದು ದೊಡ್ಡ ತಪ್ಪು ಎಂದು ಕ್ರಿಕೆಟ್ ಅಭಿಮಾನಿಗಳು ಹೇಳಿದ್ದಾರೆ. ಅಭಿಮಾನಿಗಳು ಗಂಭೀರ್ ಅವರ ಆಯ್ಕೆ ನೀತಿಯನ್ನು ಪ್ರಶ್ನಿಸಿದರು, ಅಂತಹ ಪ್ರತಿಭಾನ್ವಿತ ಬೌಲರ್ಗೆ ನಿಯಮಿತ ಅವಕಾಶಗಳನ್ನು ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದಿದ್ದಾರೆ.
ಒಬ್ಬ "ಅರ್ಷದೀಪ್ ಬಂದ ತಕ್ಷಣ ತಮ್ಮ ಸಾಮರ್ಥ್ಯವನ್ನು ತೋರಿಸಿದರು, ಆದರೂ ಗಂಭೀರ್ ಅವರನ್ನು ಬೆಂಚ್ನಲ್ಲಿ ಇರಿಸಿಕೊಂಡರು. ಇದು ಆಟಗಾರರ ಆತ್ಮವಿಶ್ವಾಸಕ್ಕೆ ಹೊಡೆತ," ಎಂದು ಬರೆದಿದ್ದಾರೆ.
ಅರ್ಷದೀಪ್ಗೆ ಅಶ್ವಿನ್ ಬೆಂಬಲ
ಅರ್ಷದೀಪ್ ಸಿಂಗ್ ಆಯ್ಕೆಯ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ದಂತಕಥೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹಳೆಯ ಹೇಳಿಕೆಯೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅರ್ಷದೀಪ್ ಸಿಂಗ್ ಅವರನ್ನು ಬಲವಾಗಿ ಬೆಂಬಲಿಸಿದ್ದರು. ಬೌಲರ್ಗಳು ಮಾತ್ರ ತಮ್ಮ ಸ್ಥಾನವನ್ನು ಸಾಬೀತುಪಡಿಸಲು ಏಕೆ ಇಷ್ಟೊಂದು ಕಷ್ಟಪಡಬೇಕು ಎಂದು ಅವರು ಪ್ರಶ್ನಿಸಿದರು.
"ಅರ್ಷದೀಪ್ ತಂಡಕ್ಕಾಗಿ ತುಂಬಾ ಕೆಲಸ ಮಾಡಿದ್ದಾರೆ, ಆದರೂ ಅವರು ಇನ್ನೂ ತಮ್ಮ ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ. ಅವರು ಬಹಳ ಸಮಯದ ನಂತರ ಆಡುವಾಗ, ಅವರು ಸ್ವಲ್ಪ ತುಕ್ಕು ಹಿಡಿದಂತೆ ಕಾಣುತ್ತಾರೆ. ಇದು ಆತ್ಮವಿಶ್ವಾಸದ ಆಟ. ಬ್ಯಾಟ್ಸ್ಮನ್ಗಳೊಂದಿಗೆ ಇದು ಎಂದಿಗೂ ಸಂಭವಿಸುವುದಿಲ್ಲ; ಬೌಲರ್ಗಳನ್ನು ಮಾತ್ರ ಏಕೆ ಗುರಿಯಾಗಿಸಿಕೊಳ್ಳಲಾಗುತ್ತದೆ?" ಎಂದು ಅವರು ಪ್ರಶ್ನೆ ಮಾಡಿದ್ದರು.