ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ZIM: ಭಾರತದ ಪರ ಎರಡನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್‌ ಠಾಕೂರ್‌ ಯಾರು?

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಜುಲೈ 25 ರಂದು ಶನಿವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತದ ಪರ ಯುವ ವೇಗಿ ಯಶ್‌ ಠಾಕೂರ್‌ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಮೊದಲನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶೋಕ್‌ ಶರ್ಮಾ ಅವರ ಸ್ಥಾನದಲ್ಲಿ ಎರಡನೇ ಪಂದ್ಯವನ್ನು ಆಡುವ ಅವಕಾಶವನ್ನು ಯಶ್‌ ಠಾಕೂರ್‌ ಪಡೆದರು.

ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್‌ ಠಾಕೂರ್‌ ಯಾರು?

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವೆ ಸದ್ಯ ಮೂರು ಪಂದ್ಯಗಳ ಟಿ20ಐ ಸರಣಿ (IND vs ZIM) ನಡೆಯುತ್ತಿದೆ. ಜುಲೈ 25 ರಂದು ಶನಿವಾರ ಇಲ್ಲಿನ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ ತಂಡ ಒಂದು ಬದಲಾವಣೆಯನ್ನು ಮಾಡಿಕೊಂಡು ಕಣಕ್ಕೆ ಇಳಿಯಿತು. ಮೊದಲನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶೋಕ್‌ ಶರ್ಮಾ ಅವರ ಬದಲು ಎರಡನೇ ಪಂದ್ಯದಲ್ಲಿ ಯುವ ವೇಗಿ ಯಶ್‌ ಠಾಕೂರ್‌ಗೆ (Yash Thakur) ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶವನ್ನು ನೀಡಲಾಯಿತು. ಅದರಂತೆ ಯುವ ವೇಗಿ ಒಂದು ವಿಕೆಟ್‌ ಪಡೆಯುವ ಮೂಲಕ ಗಮನ ಸೆಳೆದರು.

ಈ ಪಂದ್ಯದಲ್ಲಿ ಟಾಸ್‌ ಗೆದದ ಆತಿಥೇಯ ಜಿಂಬಾಬ್ವೆ ನಾಯಕ ಸಿಕಂದರ್‌ ರಾಝಾ ಅವರು ಮೊದಲು ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಈ ವೇಳೆ ಅವರು ತಮ್ಮ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ ಎಂದು ರಾಝಾ ಮಾಹಿತಿ ನೀಡಿದ್ದರು. ಇದಾದ ಬಳಿಕ ಮಾತನಾಡಿದ್ದ ಭಾರತದ ನಾಯಕ ಶ್ರೇಯಸ್‌ ಅಯ್ಯರ್‌, ತಮ್ಮ ತಂಡದಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ ಎಂದು ಹೇಳಿದರು. ಅಶೋಕ್‌ ಶರ್ಮಾ ಬದಲು ಈ ಪಂದ್ಯದಲ್ಲಿ ಯಶ್‌ ಠಾಕೂರ್‌ ಆಡುತ್ತಿದ್ದಾರೆಂದು ತಿಳಿಸಿದ್ದಾರೆ.

IND vs ZIM 2nd T20I: ಟಾಸ್‌ ಗೆದ್ದು ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಜಿಂಬಾಬ್ವೆ!

ಶ್ರೇಯಸ್‌ ಅಯ್ಯರ್‌ ಹೇಳಿಕೆ

"ನಾವು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ್ದೇವೆ. ಈ ಪಿಚ್ ಮೊದಲ ಪಂದ್ಯಕ್ಕಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತಿದೆ. ಮೊದಲ ಪಂದ್ಯದಷ್ಟು ನಿಧಾನವಾಗಿಲ್ಲ. ಇದು ಬ್ಯಾಟಿಂಗ್‌ಗೆ ಉತ್ತಮ ಪಿಚ್ ಆಗಿರಲಿದೆ ಎಂದು ನಾವು ಭಾವಿಸಿದ್ದೇವೆ. ಪ್ರಸ್ತುತ ಕ್ಷಣದ ಮೇಲೆ ಗಮನ ಕೇಂದ್ರೀಕರಿಸಿ ಎಂದು ನಮ್ಮ ಆಟಗಾರರಿಗೆ ನಾವು ಒಂದೇ ಸಂದೇಶ ನೀಡಿದ್ದೇವೆ. ಆ ಕ್ಷಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಅತ್ಯಂತ ಮುಖ್ಯ. ನಮ್ಮ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದೇವೆ. ಅಶೋಕ್‌ ಶರ್ಮಾ ಬದಲು ಯಶ್‌ ಠಾಕೂರ್‌ ತಂಡದಲ್ಲಿ ಚೊಚ್ಚಲ ಅವಕಾಶವನ್ನು ಪಡೆದಿದ್ದಾರೆ," ಎಂದು ಟಾಸ್‌ ವೇಳೆ ಶ್ರೇಯಸ್‌ ಅಯ್ಯರ್‌ ಹೇಳಿದ್ದರು.



ಯಶ್‌ ಠಾಕೂರ್‌ ಯಾರು?

ಜಿಂಬಾಬ್ವೆ ವಿರುದ್ಧದ ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಮಹತ್ವದ ಬದಲಾವಣೆ ಮಾಡಿದ್ದು, ಪ್ರತಿಭಾವಂತ ವೇಗದ ಬೌಲರ್ ಯಶ್ ಠಾಕೂರ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿತು. ಅಶೋಕ್ ಶರ್ಮಾ ಈ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ, ಯಶ್ ಠಾಕೂರ್ ಅವರಿಗೆ ಭಾರತ ತಂಡದ ಪರ ಚೊಚ್ಚಲ ಪಂದ್ಯ ಆಡುವ ಅವಕಾಶ ಲಭಿಸಿತು.

ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಯಶ್ ಠಾಕೂರ್ ಅವರ ವೃತ್ತಿಜೀವನವನ್ನು ಗಮನಿಸಿದರೆ, ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸಿ ವಿಜಯ್ ಹಝಾರೆ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಇದರ ಜೊತೆಗೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿಯೂ ಯಶ್ ಠಾಕೂರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರು 2023ರ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ಪರ ಚೊಚ್ಚಲ ಪಂದ್ಯವಾಡಿದ್ದು, ಬಳಿಕ 2025ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ (PBKS) ಪರ ಉತ್ತಮ ಪ್ರದರ್ಶನ ನೀಡಿದ್ದಾರೆ.



ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ವೈಭವ್‌ ಸೂರ್ಯವಂಶಿ, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್)‌, ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ರಿಂಕು ಸಿಂಗ್‌, ಶಿವಂ ದುಬೇ, ರವಿ ಬಿಷ್ಣೋಯ್‌, ಪ್ರಿನ್ಸ್‌ ಯಾದವ್‌, ಯಶ್‌ ಠಾಕೂರ್‌, ಮಯಾಂಕ್‌ ಯಾದವ್‌

ಜಿಂಬಾಬ್ವೆ: ಬ್ರಿಯಾನ್‌ ಬೆನೆಟ್‌, ಬೆನ್‌ ಕರನ್‌, ಡಿಯಾನ್‌ ಮಾಯರ್ಸ್‌, ಸಿಕಂದರ್‌ ರಾಝಾ (ನಾಯಕ), ರಯಾನ್‌ ಬರ್ಲ್‌, ವೆಸ್ಲೀ ಮಾಧೆವೆರೆ, ತಡವಾಣಷಿ ಮಾರುಮಣಿ (ವಿಕೆಟ್‌ ಕೀಪರ್‌), ಬ್ರಾಡ್‌ ಎವಾನ್ಸ್‌, ನ್ಯೂವ್ಮಾನ್‌ ಎನ್‌ಯಮ್ಹುರಿ, ರಿಚರ್ಡ್‌ ಎನ್‌ಗರವ, ಬ್ಲೆಸಿಂಗ್‌ ಮುಝರಾಬಾನಿ