ಲಖನೌ: ಗುಜರಾತ್ ಟೈಟನ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಬಹುಬೇಗ ವಿಕೆಟ್ ಒಪ್ಪಿಸಿದ ಲಖನೌ ಸೂಪರ್ ಜಯಂಟ್ಸ್ (LSG) ನಾಯಕ ರಿಷಭ್ ಪಂತ್ (Rishabh Pant), ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ. ಭಾನುವಾರ ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಪಂತ್, 11 ಎಸೆತಗಳಲ್ಲಿ 18 ರನ್ ಗಳಿಸಿದ ಬಳಿಕ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಸುಲಭವಾಗಿ ವಿಕೆಟ್ ಒಪ್ಪಿಸಿದರು.
ಕ್ರೀಸ್ಗೆ ಬಂದ ಆರಂಭದಲ್ಲಿ ರಿಷಭ್ ಪಂತ್ ಉತ್ತಮ ಹೊಡೆತಗಳನ್ನು ಹೊಡೆಯುವ ಮೂಲಕ ಭರವಸೆ ಮೂಡಿಸಿದ್ದರು. ವಿಶ್ವ ದರ್ಜೆಯ ವೇಗಿ ಕಗಿಸೊ ರಬಾಡ ಅವರಿಗೆ ಎರಡು ಅದ್ಭುತ ಬೌಂಡರಿಗಳನ್ನು ಬಾರಿಸಿದ್ದರು. ಮೊಹಮ್ಮದ್ ಸಿರಾಜ್ ವಿರುದ್ಧವೂ ಅವರು ಸಮಯೋಜಿತ ಆಟವನ್ನು ಆಡುತ್ತಿದ್ದರು ಹಾಗೂ ಸ್ಟ್ರೈಕ್ ರೊಟೇಟ್ ಮಾಡುತ್ತಿದ್ದರು. ರಬಾಡಗೆ ಫ್ಲ್ಯಾಟ್ ಸಿಕ್ಸರ್ ಕೂಡ ಬಾರಿಸಿದ್ದರು. ಆದರೆ, ತಮ್ಮ ಆಕ್ರಮಣಕಾರಿ ಹೊಡೆತಗಳಿಗಾಗಿ ಅಪಾಯವನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದರು.
IPL 2026: ಸಿಎಸ್ಕೆ ತೆಗೆದುಕೊಂಡ ʻರಿಟೈರ್ಡ್ ಔಟ್ʼ ನಿರ್ಧಾರದ ಬಗ್ಗೆ ಆಯುಷ್ ಮ್ಹಾತ್ರೆ ಪ್ರಾಮಾಣಿಕ ಅಭಿಪ್ರಾಯ!
ಆದರೆ, ಅವರು ಐದನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಅವರ ಲೆನ್ತ್ ಅನ್ನು ಸರಿಯಾಗಿ ಅರಿಯುವಲ್ಲಿ ವಿಫಲರಾಗಿ ಕುರುಡುತನದಿಂದ ಶಾಟ್ಗೆ ಕೈ ಹಾಕಿದರು. ಆದರೆ, ರಾಹುಲ್ ತೇವಾಟಿಯಾ ಅವರು ಸುಲಭವಾಗಿ ಕ್ಯಾಚ್ ಪಡೆದರು. ಆ ಮೂಲಕ ಎಲ್ಎಸ್ಜಿ ನಾಯಕನ ಇನಿಂಗ್ಸ್ ಮುಕ್ತಾಯವಾಯಿತು. 4.1 ಓವರ್ಗಳಿಗೆ ಲಖನೌ ತಂಡ 45 ರನ್ಗಳಿಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಅಂದ ಹಾಗೆ ಏಡೆನ್ ಮಾರ್ಕ್ರಮ್ ಅವರ ಜೊತೆಗೆ ಪಂತ್ ಎರಡನೇ ವಿಕೆಟ್ಗೆ 31 ರನ್ ಜೊತೆಯಾಟವನ್ನು ಆಡಿದ್ದರು.
ಸುಲಭವಾಗಿ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕೆಲವರು, ವೈಟ್ಬಾಲ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಅತ್ಯಂತ ಕೆಟ್ಟ ಬ್ಯಾಟ್ಸ್ಮನ್ ಎಂದು ದೂರಿದ್ದಾರೆ. 27 ಕೋಟಿ ರು ಪಡೆದು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ಪಂತ್, ತಮ್ಮ ಬೆಲೆಗೆ ಮೌಲ್ಯವನ್ನು ತಂದುಕೊಡಬೇಕೆಂದು ಆಗ್ರಹಿಸಿದ್ದಾರೆ.
ಪಂತ್ ಅವರು 2026ರ ಐಪಿಎಲ್ ಟೂರ್ನಿಯಲ್ಲಿ ಮಿಶ್ರ ಪ್ರದರ್ಶನ ನೀಡಿದ್ದಾರೆ. ಕೆಲವೊಮ್ಮೆ ಅದ್ಭುತ ಆಟವಾಡಿದರೆ, ಕೆಲವೊಮ್ಮೆ ಅಸ್ಥಿರತೆ ತೋರಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಅವರು 103 ರನ್ಗಳನ್ನು 34.33ರ ಸರಾಸರಿಯಲ್ಲಿ ಮತ್ತು 130.37 ಸ್ಟ್ರೈಕ್ ರೇಟ್ನಲ್ಲಿ ಗಳಿಸಿದ್ದಾರೆ. ಇದಕ್ಕೂ ಮೊದಲು, ಅವರು 68 ರನ್ಗಳ ಪರಿಣಾಮಕಾರಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ರನ್ ಚೇಸ್ ಮಾಡಲು ನೆರವು ನೀಡಿದ್ದರು.
ಆದರೆ, ಅವರ ಒಟ್ಟಾರೆ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇತ್ತೀಚಿನ ಪಂದ್ಯಗಳಲ್ಲಿ ಪಂತ್ ಸ್ಥಿರ ಪ್ರದರ್ಶನಕ್ಕಾಗಿ ಹೋರಾಟ ನಡೆಸಿದ್ದು, 7, 68, 10 ಮತ್ತು 18 ರನ್ಗಳಂತೆ ಅಲ್ಪ ಮೊತ್ತಗಳನ್ನು ಗಳಿಸಿದ್ದಾರೆ. ಇದು ಉತ್ತಮ ಆರಂಭವನ್ನು ದೊಡ್ಡ ಇನಿಂಗ್ಸ್ಗಳಾಗಿ ಪರಿವರ್ತಿಸಲು ವಿಫಲವಾಗಿರುವುದನ್ನು ತೋರಿಸುತ್ತದೆ. ಅವರ ಸ್ಟ್ರೈಕ್ ರೇಟ್ ಏರಿಳಿತ ಕಂಡಿದ್ದು, ಆಕ್ರಮಣಕಾರಿ ಆಟದ ಶೈಲಿಯನ್ನು ತೋರಿದರೂ, ಕೆಲವೊಮ್ಮೆ ಅಪಾಯಕಾರಿಯಾಗಿ ವಿಕೆಟ್ ಒಪ್ಪಿಸಿದ್ದಾರೆ.
ಏಪ್ರಿಲ್ 15ರಂದು ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.