ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2026) 19ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 28ರಂದು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಕಾದಾಟ ನಡೆಸಲಿವೆ. ಈ ಪಂದ್ಯದ ಟಿಕೆಟ್ಗಳು ಆನ್ಲೈನ್ನಲ್ಲಿ ಈಗಾಗಲೇ ಸೋಲ್ಡ್ ಆಗಿವೆ. ಆದರೆ, ಆನ್ಲೈನ್ನಲ್ಲಿ ಟಿಕೆಟ್ ಖರೀದಿಸುವಲ್ಲಿ ವಿಫಲರಾದ ಅಭಿಮಾನಿಗಳು ಆರ್ಸಿಬಿ (RCB Bengaluru) ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ದಿನವೀಡಿ ಕಾದು ಕುಳಿತರೂ ಆನ್ಲೈನ್ನಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂಬಂತೆ ಕೆಲ ಅಭಿಮಾನಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
2025ರ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಚೊಚ್ಚಲ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಆರ್ಸಿಬಿಯ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು. ಇದರಿಂದಾಗಿ ಈ ಬಾರಿ ಹೆಚ್ಚಿನ ಭದ್ರತೆ ಹಾಗೂ ಕಟ್ಟು ನಿಟ್ಟಿನ ನಿಯಮಗಳ ಅಡಿಯಲ್ಲಿ ಆರ್ಸಿಬಿಯ ಐದು ಪಂದ್ಯಗಳನ್ನು ಆಡಿಸಲಾಗುತ್ತಿದೆ. ತವರಿನ ಏಳು ಪಂದ್ಯಗಳ ಪೈಕಿ ಕೇವಲ 5 ಪಂದ್ಯಗಳನ್ನು ಮಾತ್ರ ಇಲ್ಲಿ ಆಡಿಸಿ, ಇನ್ನುಳಿದ ಎರಡು ತವರು ಪಂದ್ಯಗಳನ್ನು ರಾಯ್ಪುರದಲ್ಲಿ ಆಡಿಸಲಾಗುತ್ತಿದೆ. ಹಾಗಾಗಿ ಆರ್ಸಿಬಿ ತಂಡದ ಪಂದ್ಯಗಳ ಟಿಕೆಟ್ಗಳಿಗಾಗಿ ಭಾರಿ ಬೇಡಿಕೆ ಉಂಟಾಗಿದೆ.
IPL 2026: ಕಾಲ್ತುಳಿದಲ್ಲಿ ಮೃತರಾದವರಿಗೆ ಗೌರವಾರ್ಥವಾಗಿ 11 ಆಸನಗಳನ್ನು ಕಾಯ್ದಿರಿಸಿದ ಆರ್ಸಿಬಿ!
ಆರ್ಸಿಬಿ ಹಾಗೂ ಎಸ್ಆರ್ಎಚ್ ನಡುವಣ ಪಂದ್ಯಕ್ಕೆ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಅಂದರೆ, ಆರ್ಸಿಬಿ ಅಧಿಕೃತ ವೆಬ್ಸೈಟ್ನಲ್ಲಿ ಮಾರ್ಚ್ 24 ರಂದು ಬಿಡುಗಡೆ ಮಾಡಲಾಗುವುದು ಎಂದು ಬೆಂಗಳೂರು ಫ್ರಾಂಚೈಸಿ ಮಂಗಳವಾರ ಬೆಳಿಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿತ್ತು. ಆದರೆ, ಸಮಯದ ಮಾಹಿತಿ ನೀಡಿರಲಿಲ್ಲ. ಇದಕ್ಕೆ ಅಭಿಮಾನಿಗಳು ಸಮಯವನ್ನು ಕೂಡ ಉಲ್ಲೇಖ ಮಾಡಿ ಎಂದು ಆಗ್ರಹಿಸಿದ್ದಾರೆ. ಕೆಲವರು ಟಿಕೆಟ್ ಬುಕ್ ಮಾಡಲು ಎಷ್ಟೇ ಹರ ಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಇದರ ಸ್ಕ್ರೀನ್ ಶಾಟ್ ಅನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಹಾಕಿದ್ದಾರೆ.
ಟಿಕೆಟ್ ಪಡೆಯುವಲ್ಲಿ ವಿಫಲರಾದ ಅಭಿಮಾನಿಗಳು ದಿನವೀಡಿ ಆರ್ಸಿಬಿ ವೆಬ್ಸೈಟ್ ರಿಫ್ರೆಷ್ ಮಾಡಿದರೂ ಟಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ತುಂಬಾ ನಿರಾಶೆಯಾಗಿದೆ. ಕೆಲವರು ಆರ್ಸಿಬಿ ತಂಡವನ್ನು ಬಾಯ್ಕಟ್ ಮಾಡಿ, ಪ್ರಾಮಾಣಿಕ ಅಭಿಮಾನಿಗಳಿಗೆ ಟಿಕೆಟ್ ಪಡೆಯುವ ವಿಷಯದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಲು ಇದು ಒಳ್ಳೆಯ ಮಾರ್ಗ. ಸಮಯದ ಮಾಹಿತಿ ಸೇರಿದಂತೆ ಎಲ್ಲದರ ಮಾಹಿತಿಯನ್ನು ರಹಸ್ಯವಾಗಿ ಒಳಗೆ ಇರುವವರಿಗೆ ಹಾಗೂ ಬ್ಲ್ಯಾಕ್ ನಲ್ಲಿರುವವರಿಗೆ ನೀಡಲಾಗುತ್ತಿದೆ. ಟಿಕೆಟ್ಗಳನ್ನು ಬಿಟ್ಟ ಕೆಲವೇ ನಿಮಷಗಳಲ್ಲಿ ಎಲ್ಲವೂ ಸೋಲ್ಡ್ ಆಗಿವೆ. ನಿಜವಾದ ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಕಿಡಿಕಾರಿದ್ದಾರೆ.
ನಿಮ್ಮ ಬ್ಲ್ಯಾಕ್ ಮಾರ್ಕೆಟಿಂಗ್ಗಾಗಿ, ಟಿಕೆಟ್ಗಳಿಗಾಗಿ ನಿಜವಾದ ಅಭಿಮಾನಿಗಳನ್ನು ಕಿರುಕುಳ ಮತ್ತು ಮಾನಸಿಕವಾಗಿ ಹಿಂಸಿಸುತ್ತಿರುವುದಕ್ಕೆ ಆರ್ಸಿಬಿಗೆ ನಾಚಿಕೆಯಾಗಬೇಕು ಎಂದು ಮತ್ತೊಬ್ಬರು ಟೀಕಿಸಿದ್ದಾರೆ.