ಅಹಮದಾಬಾದ್: ಏಷ್ಯಾಕಪ್ ಮುಕ್ತಾಯಗೊಂಡರೂ ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್(Gautam Gambhir) ಮತ್ತು ಆಟಗಾರರಿಗೆ ವಿಶ್ರಾಂತಿಯೇ ಇಲ್ಲದಂತಾಗಿದೆ. ಅ.2 ರಿಂದ ಆರಂಭವಾಗಲಿರುವ ಪ್ರವಾಸಿ ವೆಸ್ಟ್ ಇಂಡೀಸ್(India vs West Indies Tests) ವಿರುದ್ಧದ ಸರಣಿಗೆ ಸಜ್ಜಾಗಬೇಕಿದೆ. ಸೋಮವಾರ ತಡರಾತ್ರಿಯೇ ಟೆಸ್ಟ್ ತಂಡದ ಭಾಗವಾಗಿರುವ ಆಟಗಾರರು ಕೋಚ್ ಗಂಭೀರ್ ಜತೆ ಅಹಮದಾಬಾದ್ ತಲುಪಿದ್ದು ಮಂಗಳವಾರ ಲಘು ಅಭ್ಯಾಸ ಆರಂಭಿಸಿದ್ದಾರೆ.
ಬುಧವಾರ ಪೂರ್ಣ ಪ್ರಮಾಣದ ಅಭ್ಯಾಸ ನಡೆಸಿ ಗುರುವಾರ ಪಂದ್ಯವನ್ನಾಡಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಭಾಗವಾಗಿರುವ ಈ ಟೆಸ್ಟ್ ಸರಣಿಯನ್ನು ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸುವುದು ಭಾರತದ ಪ್ರಮುಖ ಗುರಿಯಾಗಿದೆ. ಸದ್ಯ ಭಾರತ ಅಂಕಪಟ್ಟಿಯಲ್ಲಿ 46 ಗೆಲುವಿನ ಪ್ರತಿಶತದೊಂದಿಗೆ ಮೂರನೇ ಸ್ಥಾನದಲ್ಲಿದೆ. ವಿಂಡೀಸ್ ಆಡಿದ ಮೂರು ಟೆಸ್ಟ್ನಲ್ಲಿ ಸೋಲು ಕಂಡು ಕೊನೆಯ ಸ್ಥಾನದಲ್ಲಿದೆ.
ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ 'ಎ' ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ಪರ ಮಿಂಚಿದ್ದ ಪಡಿಕ್ಕಲ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಖಚಿತವಾಗಿದೆ. ಕರುಣ್ ನಾಯರ್ ಅವರ ಸ್ಥಾನದಲ್ಲಿ ಪಡಿಕ್ಕಲ್ ಆಡಬಹುದು. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಈ ಸರಣಿಯಲ್ಲೂ ಮುಂದುವರಿಯಲಿದ್ದಾರೆ. ಜಸ್ಪ್ರೀತ್ ಬುಮ್ರಾ ಸರಣಿಯ ಎರಡೂ ಪಂದ್ಯಕ್ಕೆ ಲಭ್ಯ ಇರುವುದಾಗಿ ತಿಳಿಸಿದ್ದಾರೆ.
ಭಾರತ ತಂಡ
ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಎನ್. ಜಗದೀಸನ್.
ಇದನ್ನೂ ಓದಿ Suryakumar Yadav: ಏಷ್ಯಾ ಕಪ್ ಪಂದ್ಯದ ವೇತನವನ್ನು ಪಹಲ್ಗಾಮ್ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯ