ಮುಂಬಯಿ, ಸೆ.13: ಭಾರತದ ದೇಶೀಯ ಕ್ರಿಕೆಟ್ನ ರಚನೆಯ ಬಗ್ಗೆ ಸುನಿಲ್ ಗವಾಸ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 20 ವಿಕೆಟ್ಗಳನ್ನು ಕಬಳಿಸಲು ಅಗತ್ಯವಿರುವ ಕೌಶಲಗಳನ್ನು ತಂಡಗಳು ಬೆಳೆಸಿಕೊಳ್ಳುವುದಕ್ಕೆ ಪ್ರಸ್ತುತ ಸ್ವರೂಪವು ಹೇಗೆ ಅಡ್ಡಿಯಾಗುತ್ತಿದೆ ಎಂಬುದಕ್ಕೆ ಅವರು 2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯವನ್ನು ಉದಾಹರಣೆಯಾಗಿ ನೀಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 708 ರನ್ ಗಳಿಸಿತು. ನಂತರ ದಕ್ಷಿಣ ವಲಯ 336 ರನ್ಗಳಿಗೆ ಆಲೌಟ್ ಆಯಿತು. ಬಳಿಕ ಪೂರ್ವ ವಲಯ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ 100 ಓವರ್ಗಳ ಕಾಲ ಬ್ಯಾಟಿಂಗ್ ನಡೆಸಿ, 7 ವಿಕೆಟ್ಗೆ 388 ರನ್ ಗಳಿಸಿತು. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಉಭಯ ತಂಡಗಳ ನಾಯಕರ ಪರಸ್ಪರ ಒಪ್ಪಂದದ ಮೇರೆಗೆ ಪಂದ್ಯವು ಕೊನೆಗೊಂಡಿತು. ಈ ನಿರ್ಧಾರವು ದೇಶೀಯ ಕ್ರಿಕೆಟ್ ಸ್ವರೂಪದ ಕುರಿತು ಗವಾಸ್ಕರ್ ಅವರ ಟೀಕೆಗೆ ಕಾರಣವಾಯಿತು.
ಗವಾಸ್ಕರ್ ಅವರ ಪ್ರಕಾರ, ಭಾರತದಲ್ಲಿನ ಪ್ರಥಮ ದರ್ಜೆ ಕ್ರಿಕೆಟ್ನ ರಚನೆಯು ತಂಡಗಳು ಪೂರ್ಣ ಎರಡು ಇನಿಂಗ್ಸ್ಗಳ ಪಂದ್ಯಗಳನ್ನು ಪೂರ್ಣಗೊಳಿಸಲು ಉತ್ತೇಜನ ನೀಡುವುದಿಲ್ಲ. ಉನ್ನತ ಮಟ್ಟದಲ್ಲಿ ಬೌಲಿಂಗ್ ಕೌಶಲಗಳನ್ನು ಬೆಳೆಸಿಕೊಳ್ಳಲು ಇಂತಹ ಪಂದ್ಯಗಳು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
"ನಿರಾಶಾದಾಯಕ ಸಂಗತಿಯೆಂದರೆ, 'ಪೂರ್ವ ವಲಯ' ತಂಡವು ಸಂಪೂರ್ಣ ಗೆಲುವಿಗಾಗಿ ಪ್ರಯತ್ನಿಸುವ ಬದಲು ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಅನಗತ್ಯವಾಗಿ ವಿಸ್ತರಿಸಿತು. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪಂದ್ಯವನ್ನು ಕೊನೆಗೊಳಿಸಲು ಎರಡೂ ತಂಡಗಳ ನಾಯಕರು ಒಪ್ಪಿಕೊಂಡಿದ್ದು ಕೂಡ ಸರಿಯಾದ ಕ್ರಮವೆನಿಸುವುದಿಲ್ಲ. ಪಂದ್ಯವನ್ನು ಬೇಗನೇ ನಿಲ್ಲಿಸುವುದೇ ಆಗಿದ್ದರೆ, ಅದನ್ನು ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲೇ ಏಕೆ ನಿಲ್ಲಿಸಲಿಲ್ಲ?, ಬಾಕಿ ಉಳಿದಿದ್ದ ಎರಡು ಅವಧಿಗಳಲ್ಲಿ 'ದಕ್ಷಿಣ ವಲಯ' ತಂಡವು 650ಕ್ಕೂ ಹೆಚ್ಚು ರನ್ಗಳ ಗುರಿಯನ್ನು ಬೆನ್ನಟ್ಟಿ ಗೆಲ್ಲುವುದು ಅಸಾಧ್ಯ ಎಂಬುದು ಆಗಲೇ ಸ್ಪಷ್ಟವಾಗಿತ್ತು," ಎಂದು ಗವಾಸ್ಕರ್ 'ಮಿಡ್-ಡೇ' ಪತ್ರಿಕೆಯ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ ಸ್ಟಾರ್ ಆಲ್ರೌಂಡರ್
"ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದರೆ ಸಾಕು ಎಂಬ ಮನಸ್ಥಿತಿಯೇ, ಉತ್ತಮ ಪಿಚ್ಗಳಲ್ಲೂ 20 ವಿಕೆಟ್ಗಳನ್ನು ಕಬಳಿಸಲು ಭಾರತಕ್ಕೆ ಕಷ್ಟವಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದೇಶೀಯ ಪಂದ್ಯವೊಂದರಲ್ಲಿ ಎರಡು ಇನ್ನಿಂಗ್ಸ್ಗಳಲ್ಲೂ ಬೌಲಿಂಗ್ ಮಾಡುವ ಅವಕಾಶ ಸಿಗದಿದ್ದರೆ, ಒಂದು ತಂಡವು 20 ವಿಕೆಟ್ಗಳನ್ನು ಪಡೆಯುವುದನ್ನು ಹೇಗೆ ಕಲಿಯಲು ಸಾಧ್ಯ? ಶ್ರೀಲಂಕಾದಲ್ಲಿ ನಡೆದ ಎರಡನೇ ಟೆಸ್ಟ್ನ ಅಂತಿಮ ದಿನದಂದು ಭಾರತವು ಗೆಲುವಿಗಾಗಿ ತೀವ್ರವಾಗಿ ಶ್ರಮಿಸಿದರೂ, ಕೊನೆಯ ನಾಲ್ಕು ವಿಕೆಟ್ಗಳನ್ನು ಪಡೆಯಲು ವಿಫಲವಾಯಿತು" ಎಂದು ಗವಾಸ್ಕರ್ ಹೇಳಿದರು.