ಅಹಮದಾಬಾದ್, ಜೂ.1: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Final) 2026 ರ ಫೈನಲ್ ಪಂದ್ಯದ ನಿರಾಶಾದಾಯಕ ಅಂತ್ಯದ ನಂತರ, ಗುಜರಾತ್ ಟೈಟಾನ್ಸ್ ತಂಡವು ದೊಡ್ಡ ಅಪಾಯದಿಂದ ಪಾರಾಯಿತು. ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ಬಳಿಕ ತಂಡದ ಆಟಗಾರರು ಹೊಟೇಲ್ಗೆ ತೆರಳುತ್ತಿದ್ದ ವೇಳೆ ತಂಡದ ಬಸ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಸದ್ಯ ಎಲ್ಲಾ ಆಟಗಾರರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ್ದರಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ.
ಭಾನುವಾರ ರಾತ್ರಿ ತಂಡದ ಬಸ್ ನರೇಂದ್ರ ಮೋದಿ ಕ್ರೀಡಾಂಗಣದಿಂದ ಅಹಮದಾಬಾದ್ನ ಹೋಟೆಲ್ಗೆ ಹಿಂತಿರುಗುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಆಟಗಾರರು ಮತ್ತು ಸಿಬ್ಬಂದಿಗಳನ್ನು ಬಸ್ನಿಂದ ಇಳಿಸಲಾಯಿತು. ಪರ್ಯಾಯ ಬಸ್ ಬರುವ ತನಕ ಆಟಗಾರರು ಸುಮಾರು ಒಂದು ಗಂಟೆ ಕಾಲ ರಸ್ತೆಯಲ್ಲೇ ಸಿಲುಕಿಕೊಂಡರು.
ಪಂದ್ಯದ ಬಗ್ಗೆ ಹೇಳುವುದಾದದರೆ, ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 155 ರನ್ ಗಳಿಸಿತು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (ಔಟಾಗದೆ 50; 37 ಎಸೆತ, 5 ಬೌಂಡರಿ) ಏಕಾಂಗಿ ಹೋರಾಟ ನೀಡಿದರು.
ಗೆಲುವಿಗೆ 156 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 18 ಓವರ್ಗಳಲ್ಲಿ 5 ವಿಕೆಟ್ಗೆ 161 ರನ್ ಗಳಿಸಿ ವಿಜಯಶಾಲಿಯಾಯಿತು. ಆರ್ಸಿಬಿ ಪವರ್-ಪ್ಲೇನಲ್ಲೇ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡಿತು. ವೆಂಕಟೇಶ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ, ಗುಜರಾತ್ ಬೌಲಿಂಗ್ ದಾಳಿಯನ್ನು ಪುಡಿಗುಟ್ಟಿದರು. ಪ್ರಮುಖವಾಗಿ ರಬಾಡಗೆ ಚಳಿ ಬಿಡಿಸಿದರು. 3 ಓವರಲ್ಲಿ ರಬಾಡ 44 ರನ್ ಚಚ್ಚಿಸಿಕೊಂಡರು. ವೆಂಕಿ 16 ಎಸೆತದಲ್ಲಿ 32 ರನ್ ಚಚ್ಚಿ ಔಟಾದರೆ, ಪಡಿಕ್ಕಲ್ ಹೆಚ್ಚು ಸದ್ದು ಮಾಡಲಿಲ್ಲ. ಪವರ್-ಪ್ಲೇನಲ್ಲೇ ಆರ್ಸಿಬಿ 2 ವಿಕೆಟ್ಗೆ 70 ರನ್ ದಾಖಲಿಸಿತು.
5ನೇ ಐಪಿಎಲ್ ಟ್ರೋಫಿ ಗೆದ್ದು ಧೋನಿಯ ದಾಖಲೆ ಸರಿಗಟ್ಟಿದ ಕೃನಾಲ್ ಪಾಂಡ್ಯ
ಆದರೆ ದೇವದತ್ತ ಪಡಿಕ್ಕಲ್ (1) ಬೆನ್ನುಬೆನ್ನಿಗೆ ಔಟಾದರು. ನಾಯಕ ರಜತ್ ಪಾಟಿದಾರ್ (15) ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ (1) ನಿರೀಕ್ಷಿತ ಬ್ಯಾಟಿಂಗ್ ನಡೆಸಲು ವಿಫಲರಾದರು. ನಂತರ ಕೊಹ್ಲಿ ಹಾಗೂ ಟಿಮ್ ಡೇವಿಡ್ (24; 17 ಎಸೆತ) RCBಯ ಗೆಲುವನ್ನು ಖಚಿತಪಡಿಸಿದರು. ಕೊಹ್ಲಿ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು.