ಗಾಲೆ, ಆ.15: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಗಾಲೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ಗೆ ಮಳೆ ಅಡ್ಡಿಪಡಿಸಿದ್ದು ಪಂದ್ಯ ಸ್ಥಗಿತಗೊಳಿಸಲಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಸದ್ಯ ಬ್ಯಾಟಿಂಗ್ ನಡೆಸುತ್ತಿರುವ ಭಾರತ ಭೋಜನ ವಿರಾಮದ ವೇಳೆಗೆ ಒಂದು ವಿಕೆಟ್ಗೆ 101 ರನ್ ಗಳಿಸಿದೆ.
ಮೊದಲ ಸೆಸನ್ ಯಾವುದೇ ಅಡೆತಡೆಯಿಲ್ಲದೆ ಪಂದ್ಯ ಸಾಗಿತು. ಭೋಜನ ವಿರಾಮದ ನಂತರ ಇನ್ನೇನು ಆಟ ಆರಂಭಿಸಬೇಕು ಎನ್ನುವಾಗ ಜೋರಾಗಿ ಮಳೆ ಸುರಿಯಲಾರಂಭಿಸಿತು. ಸದ್ಯ ಮೈದಾನಕ್ಕೆ ಕವರ್ಗಳನ್ನು ಹೊದಿಸಲಾಗಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಹುಲ್ 32 ಮತ್ತು ಪಡಿಕ್ಕಲ್ 35 ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಂವಹನ ಕೊರತೆಯಿಂದ 32 ರನ್ ಗಳಿಸಿದ್ದ ವೇಳೆ ರನೌಟ್ ಆಗಿ ವಿಕೆಟ್ ಕಳೆದುಕೊಂಡರು.
ಶುಕ್ರವಾರವೇ ಗಾಲೆಯಲ್ಲಿ ಮಳೆ ಸುರಿದಿತ್ತು. ಹೀಗಾಗಿ ಭಾರತದ ಅಭ್ಯಾಸ ಕೂಡ ಮೊಡಕುಗೊಂಡಿತ್ತು. ಅಕ್ಯೂವೆದರ್ ಮುನ್ಸೂಚನೆಯು ಶೇ. 90 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದಿತ್ತು. ಜೊತೆಗೆ 5.6 ಮಿಮೀ ನಿರೀಕ್ಷಿತ ಮಳೆ, ಶೇ. 92 ರಷ್ಟು ಮೋಡ ಕವಿದ ಮತ್ತು ಗಾಳಿಯು ಗಂಟೆಗೆ ಸುಮಾರು 20 ಕಿ.ಮೀ ವೇಗದಲ್ಲಿ ಬೀಸುವ ನಿರೀಕ್ಷೆಯಿದ್ದು, ಗಂಟೆಗೆ 43 ಕಿ.ಮೀ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ ಎಂದು ಮುನ್ಸೂಚನೆ ನೀಡಿತ್ತು.
ಗಾಲೆ ಟೆಸ್ಟ್ನಲ್ಲಿ ಮಹತ್ವದ ದಾಖಲೆ ಬರೆಯಲು ಸಜ್ಜಾದ ರವೀಂದ್ರ ಜಡೇಜಾ
ಪಂದ್ಯಕ್ಕೂ ಮುನ್ನ ಗಾಲೆಯಲ್ಲಿ ಟೀಮ್ ಇಂಡಿಯಾ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಮತ್ತು ಇತರ ತಂಡದ ಸದಸ್ಯರು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದ ವಿಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
"ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಟೀಮ್ ಇಂಡಿಯಾ ಮೊದಲ ಟೆಸ್ಟ್ಗೆ ಮುಂಚಿತವಾಗಿ ತ್ರಿವರ್ಣ ಧ್ವಜ ಹಾರಿಸಲು ಗಾಲೆಯಲ್ಲಿ ಒಟ್ಟುಗೂಡಿತು" ಎಂದು ಬಿಸಿಸಿಐ ಎಕ್ಸ್(ಟ್ವಿಟರ್) ನಲ್ಲಿ ಬರೆದಿದೆ.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್(ನಾಯಕ), ದೇವದತ್ ಪಡಿಕ್ಕಲ್, ರಿಷಬ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಕುಲದೀಪ್ ಯಾದವ್,ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಹಿರು ಉದಾರ, ನಿಶಾನ್ ಮದುಷ್ಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ.), ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೋ.