ದುಬೈ, ಡಿ.21: ಭಾನುವಾರ ಭಾರತದ ವಿರುದ್ಧ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್ 2025 ರ ಫೈನಲ್(U19 Asia Cup final) ಪಂದ್ಯದ ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ(Mohsin Naqvi) ಅವರು ವಿಜೇತರ ಪದಕಗಳು ಮತ್ತು ಟ್ರೋಫಿಯನ್ನು ಪಾಕಿಸ್ತಾನಕ್ಕೆ ಪ್ರದಾನ ಮಾಡಿದರು. ಈ ಮೂಲಕ ಭಾರತದ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಸಮೀರ್ ಮಿನ್ಹಾಸ್ ಅವರ 172 ರನ್ಗಳ ನೆರವಿನಿಂದ 347 ರನ್ಗಳನ್ನು ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿ ಭಾರತ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡು 156 ರನ್ಗೆ ಸರ್ವಪತನ ಕಂಡು 191ರನ್ಗಳ ಸೋಲಿಗೆ ತುತ್ತಾಯಿತು.
ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಪ್ರತಿನಿಧಿ ಯಾರೂ ಇರಲಿಲ್ಲ. ಆಯುಷ್ ಮ್ಹಾತ್ರೆ ಅವರು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಿರ್ವೈಸ್ ಅಶ್ರಫ್ ಅವರಿಂದ ರನ್ನರ್ ಅಪ್ ಚೆಕ್ ಪಡೆದರು.
ಇತ್ತೀಗೆಚೆ ನಡೆದಿದ್ದ ಸೀನಿಯರ್ ತಂಡದ ಏಷ್ಯಾಕಪ್ ಫೈನಲ್ನಲ್ಲಿ ನಡೆದ ಟ್ರೋಫಿ ಹಸ್ತಾಂತರ ಹೈಡ್ರಾಮದಿಂದ ನಖ್ವಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿದ್ದರು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಆದರೆ ಟ್ರೋಫಿ ತನ್ನಿಂದಲೇ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ನಖ್ವಿ ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ಇದುವರೆಗೂ ಭಾರತಕ್ಕೆ ಟ್ರೋಫಿ ನೀಡಿಲ್ಲ.
ಅಂದು ಭಾರತ ತಂಡದಿಂದ ಆದ ಅವಮಾನಕ್ಕೆ ಸೇಡು ತೀರಿಸಲೆಂದೆ ಪಾಕಿಸ್ತಾನ ಕಿರಿಯರ ತಂಡಕ್ಕೆ ಟ್ರೋಫಿ ಮತ್ತು ಪದಕ ವಿತರಿಸುವ ಮೂಲಕ ಉದ್ಧಟತನ ತೋರಿದರು. ಟ್ವೀಟ್ ಕೂಡ ಮಾಡಿರುವ ನಖ್ವಿ,"ಪಾಕಿಸ್ತಾನ ಮತ್ತು ಮಂಡಳಿಗೆ ಎಂತಹ ಹೆಮ್ಮೆಯ ಕ್ಷಣ! ನಮ್ಮ ಕಿರಿಯರ ಪಾಕ್ ತಂಡ ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತವನ್ನು ಫೈನಲ್ನಲ್ಲಿ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಂದ್ಯದಲ್ಲಿ ಪ್ರಬಲ, ನಿರ್ಭೀತ ಮತ್ತು ಮರೆಯಲಾಗದ ಪ್ರದರ್ಶನ. ನಮ್ಮ ಯುವ ಆಟಗಾರರಿಂದ ಅದ್ಭುತ ಕ್ರಿಕೆಟ್, ಪಾಕಿಸ್ತಾನದ ಭವಿಷ್ಯವು ಉಜ್ವಲವಾಗಿ ಹೊಳೆಯುತ್ತಿದೆ. ತಂಡಕ್ಕೆ ಅಭಿನಂದನೆಗಳು!" ಎಂದು ನಖ್ವಿ X ನಲ್ಲಿ ಬರೆದಿದ್ದಾರೆ.