ಧರ್ಮಶಾಲಾ, ಜೂ.12: ಐದು ತಿಂಗಳ ಬಳಿಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಪ್ರವಾಸಿ ಅಫ್ಘಾನಿಸ್ತಾನ(India vs Afghanistan) ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಶನಿವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮೊದಲ್ಗೊಳಲ್ಲಿದೆ. ಅನುಭವಿ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗಾಯದಿಂದ ಈ ಸರಣಿಯಲ್ಲಿ ಆಡುತ್ತಿಲ್ಲ. ರೋಹಿತ್ ಶರ್ಮ ಮತ್ತು ಕೆ.ಎಲ್ ರಾಹುಲ್ ಹೊರತುಪಡಿಸಿದರೆ ಉಳಿದೆಲ್ಲರೂ ಯುವ ಆಟಗಾರರಾಗಿದ್ದಾರೆ.
ಕಳೆದ ಐದು ಏಕದಿನ ಪಂದ್ಯಗಳಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿದ್ದು, ಕೇವಲ ಒಂದನ್ನು ಮಾತ್ರ ಗೆದ್ದಿದೆ. 2027 ರ ವಿಶ್ವಕಪ್ ವೇಗವಾಗಿ ಸಮೀಪಿಸುತ್ತಿರುವುದರಿಂದ, ಈ ಸರಣಿಯು ತಮ್ಮ ತಪ್ಪುಗಳನ್ನು ಮೆಟ್ಟಿನಿಂತು ಸಮತೋಲಿತ ತಂಡವನ್ನು ರೂಪಿಸಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರಿಗೂ ವಿಶ್ರಾಂತಿ ನೀಡಲಾಗಿರುವುದರಿಂದ ಅನನುಭವಿ ವೇಗಿಗಳು ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದೆ. ಅರ್ಶ್ದೀಪ್ ಸಿಂಗ್ ಜತೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಫಿನ್ಸ್ ಯಾದವ್ ಕಾಣಿಸಿಕೊಳ್ಳಬಹುದು. ಫಿನ್ಸ್ ಯಾದವ್ ಆಡಿದರೆ ಅವರಿಗೆ ಪದಾರ್ಪಣ ಪಂದ್ಯವಾಗಲಿದೆ.
ಟೆಸ್ಟ್ ಪಂದ್ಯದಲ್ಲಿ ಸೋತಿದ್ದರೂ, ಅಫ್ಘಾನಿಸ್ತಾನ ಏಕದಿನ ಕ್ರಿಕೆಟ್ನಲ್ಲಿ ಬಲಿಷ್ಠವಾಗಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ಅವರು ಅಜೇಯರಾಗಿ ಉಳಿದಿದ್ದಾರೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಭಾರತೀಯ ನೆಲದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತು ಇಲ್ಲಿ ಆಡುವ ಪ್ರಾಯೋಗಿಕ ಅನುಭವವನ್ನು ಪಡೆಯಲು ಆಶಿಸುತ್ತಿದೆ. ಏಕೆಂದರೆ ಇದು ಮುಂದಿನ ಕೆಲವು ವರ್ಷಗಳ ಕಾಲ ಅವರ ತವರು ಆಗಲಿದೆ. ಹೌದು ಆಫ್ಘಾನ್ ತನ್ನ ದಿಪಕ್ಷೀಯ ಸರಣಿಯನ್ನು ಭಾರತದ ನೆಲದಲ್ಲಿ ಆಡಲಿದೆ.
ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ವಿಳಂಬ ಸಾಧ್ಯತೆ
ಪಿಚ್ ರಿಪೋರ್ಟ್
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣವು ಸಾಮಾನ್ಯವಾಗಿ ಬ್ಯಾಟಿಂಗ್ ಮಾಡಲು, ವಿಶೇಷವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಅನುಕೂಲಕರವಾದ ಟ್ರ್ಯಾಕ್ ಅನ್ನು ಒದಗಿಸುತ್ತದೆ. ಸಣ್ಣ ಬೌಂಡರಿ ಆಯಾಮಗಳು ಮತ್ತು ಅದ್ಭುತವಾದ ವೇಗದ ಔಟ್ಫೀಲ್ಡ್ ರನ್ ಗಳಿಸಲು ಪೂರಕವಾಗಿದೆ. ಆದಾಗ್ಯೂ, ಇಲ್ಲಿ ಬೌನ್ಸ್ ಹೇರಳವಾಗಿದೆ. ಇದು ವೇಗದ ಬೌಲರ್ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಟಾಸ್ ಗೆದ್ದ ಯಾವುದೇ ತಂಡವು ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 360-380 ಅಧಿಕ ಹೆಚ್ಚಿನ ಮೊತ್ತವನ್ನು ದಾಖಲಿಸಬೇಕು.
ಮುಖಾಮುಖಿ ದಾಖಲೆ
ಅಪ್ಘಾನಿಸ್ತಾನ ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿದೆ. ಆಡಿದ 4 ಏಕದಿನ ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಇತ್ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು 2023ರ ಏಕದಿನ ವಿಶ್ವಕಪ್ ವೇಳೆ.
ಸಂಭಾವ್ಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷ್ದೀಪ್ ಸಿಂಗ್, ಕುಲದೀಪ್ ಯಾದವ್.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಮೊಹಮ್ಮದ್ ಸಲೀಮ್, ಎ.ಎಂ. ಗಜನ್ಫರ್, ಜಿಯಾವುರ್ ರೆಹಮಾನ್.