ಕ್ಯಾನ್ಬೆರಾ: ಭಾರತ ಹಾಗೂ ಆಸ್ಟ್ರೇಲಿಯಾ(AUS vs IND 1st T20I) ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರಿಂದ ಪಂದ್ಯಕ್ಕಾಗಿ ಕಾತರದಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು. ಎರಡನೇ ಪಂದ್ಯ ಅ.31, ಶುಕ್ರವಾರದಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ.
ಪಂದ್ಯಕ್ಕೂ ಮುನ್ನವೇ ಹವಾವಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 9.4 ಓವರ್ಗೆ ಒಂದು ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿತು.
ಒಂದು ಹಂತದಲ್ಲಿ ಮಳೆ ನಿಲ್ಲುವ ಸೂಚನೆ ನೀಡಿದಾದ ಪಂದ್ಯವನ್ನು 18 ಓವರ್ಗೆ ಕಡಿತ ಮಾಡುವ ಮೂಲಕ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ಆದರೆ ಮತ್ತೆ ಮಳೆ ಆರ್ಭಟ ಜೋರಾದ ಕಾರಣ ಅಂತಿಮವಾಗಿ ಅಂಪೈರ್ಗಳು ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. ಮಳೆಯಿಂದ ಒದ್ದೆಯಾಗಿದ್ದ ಪ್ರೇಕ್ಷಕರು ನಿರಾಸೆಯೊಂದಿಗೆ ಸ್ಟೇಡಿಯಂನಿಂದ ಹೊರಹೋದರು.
ಇದನ್ನೂ ಓದಿ Suryakumar Yadav: ರೋಹಿತ್ ಶರ್ಮ ಜತೆ ಎಲೈಟ್ ಪಟ್ಟಿ ಸೇರಿದ ಸೂರ್ಯಕುಮಾರ್
ಫಾರ್ಮ್ ಕಂಡುಕೊಂಡ ಸೂರ್ಯ
ಬ್ಯಾಟಿಂಗ್ ಲಯಕ್ಕೆ ಮರಳುವ ಒತ್ತಡದಲ್ಲಿದ್ದ ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸುವ ಮೂಲಕ ಗಮನಸೆಳೆದರು. ಆದರೆ ಇವರ ಬ್ಯಾಟಿಂಗ್ ಆರ್ಭಟಕ್ಕೆ ಮಳೆ ಬ್ರೇಕ್ ಹಾಕಿತು. ಆದರೂ ತಾನೆದುರಿಸಿದ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 39 ರನ್ ಕಲೆಹಾಕಿದರು. ಉಪನಾಯಕ ಶುಭಮನ್ ಗಿಲ್ 20 ಎಸೆತಗಳಲ್ಲಿ ಅಜೇಯ 37ರನ್ ಗಳಿಸಿದರು. ಆಸೀಸ್ ಪರ ನಥಾನ್ ಎಲ್ಲಿಸ್ ಒಂದು ವಿಕೆಟ್ ಕಿತ್ತರು. ಈ ವಿಕೆಟ್ ಅಭಿಷೇಕ್ ಶರ್ಮ(19) ಅವರದ್ದಾಗಿತ್ತು.