ನವದೆಹಲಿ, ಜು.26: ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಟೀಮ್ ಇಂಡಿಯಾದ ಆಯ್ಕೆಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಂಗಳವಾರ ಸಭೆ ಸೇರಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ಕಾರ್ಯದೊತ್ತಡ ನಿರ್ವಹಣೆ ಜತೆಗೆ ಫಿಟ್ನೆಸ್, ಸಭೆಯ ಪ್ರಮುಖ ಅಜೆಂಡಾವಾಗಿರಲಿದೆ. ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಎಡ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿರುವ ಬುಮ್ರಾ ಮೂರನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಬುಮ್ರಾ ಚೇತರಿಕೆ ಹಾದಿಯ ಮೇಲೆ ಗಮನ ಇಡಲಾಗಿದ್ದು ಅಷ್ಟರೊಳಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಕೆಯಿದೆ ಎನ್ನಲಾಗಿದೆ.
ಆಗಸ್ಟ್ 4ರಂದು ಭಾರತ ಟೆಸ್ಟ್ ತಂಡ ಲಂಕಾಗೆ ಪ್ರಯಾಣಿಸಲಿದ್ದು, ಬುಮ್ರಾ ನಂತರ ಕೂಡಿಕೊಳ್ಳುವ ಸಾಧ್ಯತೆಗಳಿವೆ. 37 ವರ್ಷದ ಜಡೇಜಾ ರಾಷ್ಟ್ರೀಯ ತಂಡಕ್ಕೆ ಮರಳುವ ಸಾಧ್ಯತೆಗಳಿದ್ದು, ಜನವರಿಯಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದರು. ಬುಮ್ರಾ ಜತೆಗೆ ಮೊಹಮದ್ ಸಿರಾಜ್, ಪ್ರಸಿದ್ಧ ಕೃಷ್ಣ ವೇಗಿಗಳಾಗಿದ್ದು, ತಜ್ಞ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಸ್ಥಾನ ಪಡೆಯಲ್ಲಿದ್ದಾರೆ ಎನ್ನಲಾಗಿದೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ವಾಷಿಂಗ್ಟನ್ ಸುಂದರ್ ಅನುಮಾನ
2017ರಲ್ಲಿ ಕೊನೆಯದಾಗಿ ಟೆಸ್ಟ್ ಸರಣಿಗೆ ಲಂಕಾಕ್ಕೆ ತೆರಳಿದ್ದ ಭಾರತ ತಂಡ 2008ರಿಂದ ಟೆಸ್ಟ್ ಸರಣಿ ಸೋಲದ ದಾಖಲೆ ಹೊಂದಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲುೃಟಿಸಿ) 4ನೇ ಆವೃತ್ತಿಯ ಭಾಗವಾಗಿರುವ ಸರಣಿಯ ಮೊದಲ ಟೆಸ್ಟ್ಗೆ (ಆ.15-19) ಗಾಲೆ ಆತಿಥ್ಯ ವಹಿಸಿದರೆ, ಕೊಲಂಬೊದಲ್ಲಿ (ಆ.23-27) 2ನೇ ಟೆಸ್ಟ್ ನಿಗದಿಯಾಗಿದೆ.
ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ವಾಷಿಂಗ್ಟನ್ ಸುಂದರ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲವಾದರೆ, ಹರ್ಷ್ ದುಬೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೋ ಅಥವಾ ಆಯ್ಕೆದಾರರು ಆಫ್-ಸ್ಪಿನ್ನರ್ ಸರಾಂಶ್ ಜೈನ್ ಅವರನ್ನು ಆಯ್ಕೆ ಮಾಡಿ ಸ್ಪಿನ್ ವಿಭಾಗಕ್ಕೆ ವೈವಿಧ್ಯತೆಯನ್ನು ಸೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.