ಹೈದರಾಬಾದ್, ಏ. 20: ಐಪಿಎಲ್ (IPL) ಸೀಸನ್ ಶುರುವಾಯಿತು ಅಂದ್ರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಆ ತಂಡ-ಈ ತಂಡ ಎನ್ನುತ್ತ ತಮ್ಮ ತಂಡಗಳ ಗೆಲುವಿಗಾಗಿ ಅಭಿಮಾನಿಗಳು ಹುರಿದುಂಬಿಸುತ್ತಾರೆ. ಸಾಮಾಜಿಕ ಮಾಧ್ಯಮ (Social Media) ಐಪಿಎಲ್ ಸಂಬಂಧಿತ ಪೋಸ್ಟ್ನಿಂದ ತುಂಬಿರುತ್ತದೆ. ಕೆಲವರು ದೂರದರ್ಶನದಲ್ಲಿ ಪಂದ್ಯವನ್ನು ವೀಕ್ಷಿಸಿದರೆ, ಇನ್ನೂ ಅನೇಕರು ಮೈದಾನದಲ್ಲೇ ವೀಕ್ಷಿಸಲು ಇಷ್ಟಪಡುತ್ತಾರೆ. ಇದಕ್ಕಾಗಿ ಮುಂಗಡ ಟಿಕೆಟ್ ಖರೀದಿಯನ್ನೂ ಮಾಡುತ್ತಾರೆ. ಟಿಕೆಟ್ ಸಿಗದೆ ಪರದಾಡುವವರು ಕೂಡ ಅನೇಕರು. ಆದರೆ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್, ನಟಿಯೊಬ್ಬರು ಮೈದಾನದಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಆದರೆ ಈಕೆ ಸುದ್ದಿಯಾಗಿದ್ದು ಸ್ವಂತ ಹಣದಿಂದ ಟಿಕೆಟ್ ಖರೀದಿಸಿದ್ದಕ್ಕಲ್ಲ. ಬದಲಾಗಿ ಸಿಎಂ ವಿಐಪಿ ಟಿಕೆಟ್ (cm VIP ticket) ಮೂಲಕ ಒಳ ಹೋಗಿದ್ದಾರೆ. ಇದು ಈಗ ಚರ್ಚೆಯ ಕೇಂದ್ರಬಿಂದು ಎನಿಸಿಕೊಂಡಿದೆ.
ಕುಶಿತಾ ಸೋಶಿಯಲ್ ಮೀಡಿಯಾದಲ್ಲಿ ಬಹು ಜನಪ್ರಿಯ. ಅದರಲ್ಲೂ ತೆಲುಗು ಜನರಿಗೆ ಪರಿಚಿತ ಮುಖ. ಅವರು ಹೈದರಾಬಾದ್ನ ಪ್ರಸಿದ್ಧ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯ ವೀಕ್ಷಿಸಿದರು. ಈ ಪಂದ್ಯದ ಟಿಕೆಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಈ ಟಿಕೆಟ್ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೆಸರಲ್ಲಿದೆ. ಅದು ಹೇಗೆ ಕುಶಿತಾಗೆ ಸಿಕ್ತು ಅನ್ನೋದು ಇದೀಗ ಎಲ್ಲರ ಮುಂದಿರುವ ಪ್ರಶ್ನೆ.
ವೈರಲ್ ಪೋಸ್ಟ್:
ಅಂದಹಾಗೆ, ಈ ಒಂದು ಟಿಕೆಟ್ನ ಬೆಲೆ 40,000 ರೂಪಾಯಿ. ಅವರು ಒಬ್ಬರೇ ಹೋಗಿಲ್ಲ. ಗೆಳತಿಯನ್ನು ಸಹ ಕರೆದೊಯ್ದಿದ್ದಾರೆ. ಹೀಗಾಗಿ ಟಿಕೆಟ್ಗಳ ಬೆಲೆ 80,000 ರುಪಾಯಿ. ಟಿಕೆಟ್ ಮೇಲೆ ಗೌರವಾನ್ವಿತ ಮುಖ್ಯಮಂತ್ರಿಗೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದರೆ ಈ ವಿಐಪಿ ಟಿಕೆಟ್ನಲ್ಲಿ ಪಂದ್ಯ ನೋಡಿದ್ದು, ಸಿಎಂ ಅಲ್ಲ ಬದಲಾಗಿ, ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗಳು.
ಸೋಲಿನ ಬಳಿಕ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ; ಸಂತೈಸಿದ ಕೆಕೆಆರ್ ಆಟಗಾರ
ಹೀಗಾಗಿ ನೆಟ್ಟಿಗರು ಕೆರಳಿ ಕೆಂಡವಾಗಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಸರ್ಕಾರವನ್ನು ವಿರುದ್ಧ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಇದು ಟಿಕೆಟ್ ವಿಷಯವಲ್ಲ. ಸರ್ಕಾರದ ಶಿಷ್ಟಾಚಾರ ಹಾಗೂ ನಿಯಮಾವಳಿಯನ್ನೇ ಪ್ರಶ್ನಿಸುವಂತಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಸಿಎಂಗಾಗಿ ಮೀಸಲಾಗಿರುವ ಟಿಕೆಟ್ ಆಕೆಯ ಕೈಗೆ ಸೇರಿದ್ದು ಹೇಗೆ ಅನ್ನೋದು ಜನರ ಪ್ರಶ್ನೆ.
ಮುಖ್ಯಮಂತ್ರಿ ಕಚೇರಿಗೆ ನೇಮಕಗೊಂಡಿದ್ದ ಟಿಕೆಟ್ಗಳನ್ನು ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗೆ ಹಸ್ತಾಂತರಿಸಿದ್ದಕ್ಕಾಗಿ ಜನರು ಕ್ರೀಡಾಂಗಣದ ಅಧಿಕಾರಿಗಳು ಮತ್ತು ಫ್ರಾಂಚೈಸಿ ನಿರ್ವಹಣೆಯತ್ತ ಬೆರಳು ತೋರಿಸುತ್ತಿದ್ದಾರೆ. ಸಿಎಂ ಅವರಿಗೆ ಪಂದ್ಯ ವೀಕ್ಷಿಸಲು ಹೋಗಲು ಸಮಯವಿರದಿದ್ದರೆ ಬೇರೆ ಯಾರಾದರೂ ಗಣ್ಯ ವ್ಯಕ್ತಿಗಳಿಗೆ ನೀಡಬಹುದಿತ್ತು ಅಥವಾ ಟಿಕೆಟ್ ಹಿಂತಿರುಗಿಸಬಹುದಿತ್ತು. ಆದರೆ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗೆ ಕೊಟ್ಟಿದ್ದು ಏನಕ್ಕೆ ಎಂಬುದು ಜನರ ಪ್ರಶ್ನೆ.
ಇನ್ನು ಈ ವಿಷಯವನ್ನು ಪ್ರತಿಪಕ್ಷ ಬಿಆರ್ಎಸ್ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಶಿಷ್ಟಾಚಾರವನ್ನು ಪ್ರಶ್ನಿಸಿದೆ.