ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡ 8 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಪಂಜಾಬ್ ಫ್ರಾಂಚೈಸಿ ರಿಷಭ್ ಪಂತ್(Rishabh Pant) ಅವರನ್ನು ಟ್ರೋಲ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿದೆ. ತಂಡ ಗೆಲ್ಲುತ್ತಿದ್ದಂತೆ 'ಹರಾಜಿನಲ್ಲಿಯೇ ನಮ್ಮ ಟೆನ್ಶನ್ ಮುಗಿಯಿತು' ಎಂದು ಟ್ವೀಟ್ ಮಾಡಿದೆ.
ಪಂಜಾಬ್ ಪಂತ್ ಅವರನ್ನು ಟ್ರೋಲ್ ಮಾಡಲು ಕೂಡ ಒಂದು ಕಾರಣವಿದೆ. ಹೌದು ಐಪಿಎಲ್ ಆರಂಭಕ್ಕೂ ಮುನ್ನ ಪಂತ್ ಅವರು ಜಿಯೋಸ್ಟಾರ್ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ, ನನಗೆ ಒಂದು ಟೆನ್ಷನ್ ಇತ್ತು, ಅದು ಪಂಜಾಬ್ ನನ್ನನ್ನು ಆರಿಸಿಕೊಂಡರೆ ಎಂದು'( 'ಮೇರಾ ಏಕ್ ಹಿ ಟೆನ್ಷನ್ ಥಾ, ವೋ ಥಾ ಪಂಜಾಬ್) ಎಂದು ರಿಷಭ್ ಪಂತ್ ಎಲ್ಎಸ್ಜಿ ನಾಯಕನಾಗಿ ಆಯ್ಕೆಯಾದ ಬಳಿಕ ಹೇಳಿದ್ದರು.
ಇದೀಗ ಪಂತ್ ಹೇಳಿಕೆಗೆ ಪಂಜಾಬ್ ಕಿಂಗ್ಸ್ ಸೇಡು ತೀರಿಸಿಕೊಂಡಿದೆ. ಲಕ್ನೋ ತಂಡವನ್ನು ಅವರದೇ ತವರಿನಲ್ಲಿ ಮಣಿಸಿದ ಬಳಿಕ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಕಿಂಗ್ಸ್, 'ಹರಾಜಿನಲ್ಲಿಯೇ ನಮ್ಮ ಟೆನ್ಶನ್ ಮುಗಿಯಿತು!'('ಟೆನ್ಷನ್ ತೋ ಅಕ್ಷನ್ ಮೇ ಹಿ ಖತಮ್ ಹೋ ಗಯಿ ಥಿ) ಎಂದು ಬರೆದುಕೊಂಡಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತ್ತು. ಎಲ್ಎಸ್ಜಿ ತಂಡವು ಪಂತ್ ಅವರನ್ನು 27 ಕೋಟಿ ರೂ. ನೀಡಿ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪಂತ್ ಅತ್ಯಂತ ದುಬಾರಿ ಆಟಗಾರ, ಶ್ರೇಯಸ್ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಮಂಗಳವಾರ ಏಕಾನ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ತಂಡ 8 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತ್ತು. ಪಂತ್ ಈ ಪಂದ್ಯದಲ್ಲಿ 2 ರನ್ ಮಾತ್ರ ಗಳಿಸಿದ್ದರು. ಪಂತ್ ಔಟಾಗುತ್ತಿದ್ದಂತೆ ಸ್ವತಃ ಲಕ್ನೋ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ 27 ಕೋಟಿ ರೂ. ನೀರಲ್ಲಿ ಹೋಮವಾಯಿತು ಎಂದು ಕಿಡಿಕಾರಿದ್ದರು.
ಪಂದ್ಯದ ಸೋಲಿನ ಬಳಿಕ ಮೈದಾನಕ್ಕೆ ಬಂದ ಮಾಲಕರಾದ ಸಂಜೀವ್ ಗೋಯೆಂಕಾ ಅವರು ಪಂತ್ ಜತೆ ಮಾತುಕತೆ ನಡೆಸಿದರು. ಈ ವೇಳೆ ಗೋಯೆಂಕಾ ಮುಖದ ಹಾವಭಾವ ನೋಡುವಾಗ ಪಂತ್ ಜತೆ ಅಸಮಾಧಾನದಿಂದಲೇ ಮಾತನಾಡಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಕಾಣುತ್ತಿದೆ.