ಕೋಲ್ಕತಾ: ಹಾಲಿ ಆವೃತ್ತಿಯ ಐಪಿಎಲ್(IPl 2025) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್(Punjab Kings)ಗೆ ಕಪ್ ಗೆಲ್ಲುವ ಸಾಮರ್ಥ್ಯವಿದ್ದರೂ ಕೋಚ್ ರಿಕಿ ಪಾಂಟಿಂಗ್(Ricky Ponting) ಅವರ ವಿದೇಶಿ ಬ್ಯಾಟರ್ಗಳ ವ್ಯಾಮೋಹದಿಂದ ಕಪ್ ಗೆಲ್ಲುವುದಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಮನೋಜ್ ತಿವಾರಿ(Manoj Tiwary) ಆರೋಪಿಸಿದ್ದಾರೆ. ಕೋಲ್ಕತ್ತಾದಲ್ಲಿ ಮಳೆಯಿಂದ ರದ್ದಾದ ಕೆಕೆಆರ್ ಮತ್ತು ಪಿಬಿಕೆಎಸ್ ನಡುವಿನ ಪಂದ್ಯದ ನಂತರ ಮನೋಜ್ ತಿವಾರಿ ಟ್ವೀಟ್ ಮೂಲಕ ಈ ಆರೋಪ ಮಾಡಿದ್ದಾರೆ.
ಟ್ವಿಟರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ತಿವಾರಿ, 'ಈ ಆವೃತ್ತಿಯಲ್ಲಿ ಪಂಜಾಬ್ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ನನ್ನ ಒಳ ಮನಸ್ಸು ಹೇಳುತ್ತಿದೆ. ಇದಕ್ಕೆ ಕಾರಣ ಕೋಚ್ ರಿಕಿ ಪಾಂಟಿಂಗ್ ಅವರು ಭಾರತೀಯ ಬ್ಯಾಟ್ಸ್ಮನ್ಗಳಾದ ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅವರಂತಹ ಆಟಗಾರರನ್ನು ಕಡೆಗಣಿಸುತ್ತಿರುವುದು. ಆಸೀಸ್ ಆಟಗಾರರ ಮೇಲೆ ಹೆಚ್ಚಿನ ವ್ಯಾಮೋಹ ಇರುವಂತೆ ಕಾಣುತ್ತಿದೆ. ಇಲ್ಲವಾದಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಫಾರ್ಮ್ ಇಲ್ಲದಿದ್ದರೂ ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಮೊದಲು ಬ್ಯಾಟಿಂಗ್ಗೆ ಕಳುಹಿಸುತ್ತಿರಲಿಲ್ಲ. ಈ ರೀತಿಯ ವರ್ತನೆ ಮುಂದುವರಿದರೆ, ಪಂಜಾಬ್ ತಂಡ ಐಪಿಎಲ್ 2025 ಟ್ರೋಫಿಯನ್ನು ಎತ್ತಿ ಹಿಡಿಯುವುದು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಈಡನ್ ಗಾರ್ಡನ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಪ್ರಭ್ಸಿಮ್ರನ್ ಸಿಂಗ್ (83 ರನ್, 49 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಪ್ರಿಯಾಂಶ್ ಆರ್ಯ (69 ರನ್, 35 ಎಸೆತ, 8 ಬೌಂಡರಿ, 4 ಸಿಕ್ಸರ್) ಶತಕದ ಜತೆಯಾಟ ನೆರವಿನಿಂದ 4 ವಿಕೆಟ್ಗೆ 201 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು.
ಇದನ್ನೂ ಓದಿ IPL 2025: 'ಕ್ಯಾಶ್ ರಿಚ್' ಐಪಿಎಲ್ನಲ್ಲಿ ಅಂಪೈರ್ಗಳಿಗೆ ಸಿಗುವ ವೇತನವೆಷ್ಟು?
ಪ್ರತಿಯಾಗಿ ಚೇಸಿಂಗ್ನಲ್ಲಿ ಕೆಕೆಆರ್ ತಂಡ 1 ಓವರ್ಗೆ ವಿಕೆಟ್ ನಷ್ಟವಿಲ್ಲದೆ 7 ರನ್ಗಳಿಸಿದಾಗ ಮಳೆ ಆಡಚಣೆಯಿಂದ ಆಟ ನಿಲ್ಲಿಸಲಾಯಿತು. ಬಳಿಕ ಆಟ ಆರಂಭಿಸಲಾಗದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಫಲಿತಾಂಶವಿಲ್ಲದೇ ರದ್ದಗೊಂಡ ಮೊದಲ ಪಂದ್ಯ ಇದಾಯಿತು. ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಕಾರಣ ಉಭಯ ತಂಡಗಳು ತಲಾ ಒಂದು ಅಂಕ ನೀಡಲಾಯಿತು. ಒಂದು ಅಂಕ ಪಡೆದರೂ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿತು.