ಬೆಂಗಳೂರು, ಡಿ.17: ರಾಜ್ಯಾದ್ಯಂತ ಕ್ರೀಡೆಯ ಗುಣಮಟ್ಟವನ್ನು ಸುಧಾರಿಸಲು ಕೆಎಸ್ಸಿಎ ರಚಿಸಿದ(KSCA Cricket Advisory Committee) ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯಲ್ಲಿ ಭಾರತದ ಮಾಜಿ ಕ್ರಿಕೆಟ್ ತಾರೆಯರಾದ ಅನಿಲ್ ಕುಂಬ್ಳೆ(Anil Kumble), ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ ಮತ್ತು ವಿಜಯ್ ಭಾರದ್ವಾಜ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಅನುಭವಿ ಆಡಳಿತಾಧಿಕಾರಿ ಜಯಶ್ರೀ ದೊರೈಸ್ವಾಮಿ ಕೂಡ ಸಿಎಸಿಯ ಭಾಗವಾಗಿದ್ದಾರೆ. ಸಿಎಸಿ ತನ್ನ ಮೊದಲ ಸಭೆಯಲ್ಲಿ, ವಿವಿಧ ರಾಜ್ಯ ತಂಡಗಳಿಗೆ ಅಸ್ತಿತ್ವದಲ್ಲಿರುವ ತರಬೇತಿ ಮತ್ತು ಆಯ್ಕೆ ಸಮಿತಿಗಳಲ್ಲಿ ಹಲವಾರು ಬದಲಾವಣೆಗಳನ್ನು ಶಿಫಾರಸು ಮಾಡಿತು.
"ತನ್ನ ಮೊದಲ ಸಭೆಯಲ್ಲಿ, ಕ್ರಿಕೆಟ್ ಸಲಹಾ ಸಮಿತಿಯು ಪ್ರಸ್ತುತ ಋತುವಿಗಾಗಿ ಆಯ್ಕೆ ಸಮಿತಿಗಳಿಗೆ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳನ್ನು ವ್ಯವಸ್ಥಾಪಕ ಸಮಿತಿಯು ಸರಿಯಾಗಿ ಅನುಮೋದಿಸಿದೆ" ಎಂದು ಕೆಎಸ್ಸಿಎಯ ಹೊಸದಾಗಿ ನೇಮಕಗೊಂಡ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ನಡೆಸುವಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ತರಲು ಕೆಎಸ್ಸಿಎ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಭರವಸೆ ನೀಡಿದ ಕ್ರಮಗಳಲ್ಲಿ ಇದು ಒಂದು.
ಇದನ್ನೂ ಓದಿ ಮುಷ್ತಾಕ್ ಅಲಿ ಪಂದ್ಯದ ವೇಳೆ ಆಸ್ಪತ್ರೆಗೆ ದಾಖಲಾದ ಯಶಸ್ವಿ ಜೈಸ್ವಾಲ್
ಪುರುಷರ ಸೀನಿಯರ್ ಮತ್ತು 23 ವರ್ಷದೊಳಗಿನವರ ಸಮಿತಿಯ ಮುಖ್ಯಸ್ಥರಾಗಿ ಕರ್ನಾಟಕ ತಂಡದ ಮಾಜಿ ಆಟಗಾರ ಅಮಿತ್ ವರ್ಮಾ ಅವರನ್ನು ನೇಮಕ ಮಾಡಲಾಯಿತು. 23 ವರ್ಷದೊಳಗಿನವರ ತಂಡದ ತರಬೇತುದಾರರಾಗಿ ಗಣೇಶ್ ಸತೀಶ್ ಮತ್ತು ದೀಪಕ್ ಚೌಗುಲೆ ಅವರನ್ನು ನೇಮಕ ಮಾಡಲಾಯಿತು. ಇದಕ್ಕೂ ಮುನ್ನ ಸೋಮಶೇಖರ್ ಶಿರಗುಪ್ಪಿ ಮತ್ತು ಎಸ್.ಆರ್. ದೀಪು ಅವರು ಈ ಸ್ಥಾನಗಳಲ್ಲಿದ್ದರು. ಇದೇ ಸಂದರ್ಭದಲ್ಲಿ ವಿನಯ್ ಮೃತ್ಯುಂಜಯ ಅವರನ್ನು ಕೆಎಸ್ಸಿಎ ವಕ್ತಾರರನ್ನಾಗಿ ನೇಮಿಸಲಾಯಿತು.
ಸಮಿತಿಗಳು ಹೀಗಿವೆ
ಕ್ರಿಕೆಟ್ ಸಲಹಾ ಸಮಿತಿ: ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವಿಜಯ್ ಭಾರದ್ವಾಜ್, ಜಯಶ್ರೀ ದೊರೈಸ್ವಾಮಿ.
ಪುರುಷರು: ಸೀನಿಯರ್ ಮತ್ತು 23 ವರ್ಷದೊಳಗಿನವರ ಆಯ್ಕೆ ಸಮಿತಿ: ಅಮಿತ್ ವರ್ಮಾ (ಮುಖ್ಯಸ್ಥ), ಎಸ್. ಪ್ರಕಾಶ್, ತೇಜಪಾಲ್ ಕೊಠಾರಿ, ಸುನಿಲ್ ರಾಜು.
ಜೂನಿಯರ್ ಸಮಿತಿಗಳು (19, 16 ಮತ್ತು 14 ವರ್ಷದವರು): ಜಿ.ಕೆ. ಅನಿಲ್ ಕುಮಾರ್ (ಮುಖ್ಯಸ್ಥ), ಸಿ. ರಾಘವೇಂದ್ರ, ಜಿ.ಎನ್. ಉಮೇಶ್, ಡಿ.ಎಸ್. ಅನಂತ್.
ಕೋಚ್(23 ವರ್ಷದೊಳಗಿನ ಪುರುಷರ ತಂಡ): ಗಣೇಶ್ ಸತೀಶ್ ಮತ್ತು ದೀಪಕ್ ಚೌಗುಲೆ.