ನವದೆಹಲಿ, ಫೆ.15: ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೊಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ರೀಡಾಭಿಮಾನಿಗಳು ಭಾರತ ತಂಡದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಈ ಪಂದ್ಯವು ಅಪಾರ ಕುತೂಹಲ ಕೆರಳಿಸಿದೆ.
ಉತ್ತರ ಪ್ರದೇಶದ ಲಖನೌದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ವಿಶ್ವ ಹಿಂದೂ ರಕ್ಷಾ ಪರಿಷತ್ ಹಾಗೂ ಹಿಂದೂ ಪರಿಷತ್ ಸದಸ್ಯರು ಸ್ಥಳೀಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೋಮ, ಹವನ ನಡೆಸಿದರು. ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಾಲಯಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾರತದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಮಹಾ ಶಿವರಾತ್ರಿಯೂ ಆಗಿರುವ ಕಾರಣ ಅಭಿಮಾನಿಗಳು ಭಾರತ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೋಲ್ಕತ್ತ, ಪಟ್ನಾ, ಗುವಾಹಟಿ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಬೆಂಗಳೂರು, ಭೋಪಾಲ್, ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಾರತದ ಗೆಲುವಿಗಾಗಿ ದೇವಾಲಯಗಳಲ್ಲಿ ಅಭಿಮಾನಿಗಳು ಪೂಜೆ ನಡೆಸುತ್ತಿದ್ದಾರೆ.
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಗಮನಾರ್ಹ ಯಶಸ್ಸನ್ನು ಕಂಡಿದೆ. ಈ ಸ್ಥಳದಲ್ಲಿ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. 2009 ರಿಂದ, ಭಾರತ ಇಲ್ಲಿ 15 ಟಿ20 ಪಂದ್ಯಗಳನ್ನು ಆಡಿದ್ದು, ಈ ಪೈಕಿ 11 ಪಂದ್ಯ ಗೆದ್ದಿದೆ. ಮತ್ತು ಕೇವಲ ನಾಲ್ಕರಲ್ಲಿ ಸೋತಿದೆ. 2012ರಲ್ಲಿ ಇಲ್ಲೇ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿತ್ತು.
IND vs PAK: ಇಂದಿನ ಭಾರತ-ಪಾಕ್ ಪಂದ್ಯಕ್ಕೆ ಶೇ.50ರಿಂದ 70ರಷ್ಟು ಮಳೆ ಸಾಧ್ಯತೆ!
ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಚೇಸಿಂಗ್ ನಡೆಸಿದ ತಂಡಗಳೇ ಹೆಚ್ಚಾಗಿ ಗೆಲುವು ಕಂಡಿದೆ. ಇದುವರೆಗೂ ನಡೆದ 51 ಟಿ20ಐಗಳಲ್ಲಿ ಸರಾಸರಿ ಸ್ಕೋರ್ 152 ಆಗಿದ್ದು, 28 ಪಂದ್ಯಗಳಲ್ಲಿ ತಂಡಗಳು ಯಶಸ್ವಿಯಾಗಿ ಗುರಿಗಳನ್ನು ಬೆನ್ನಟ್ಟಿವೆ.