ಅಹಮದಾಬಾದ್, ಮಾ.9: ಟಿ20 ವಿಶ್ವಕಪ್ 2026(T20 World Cup 2026 final) ಗೆಲುವಿನ ನಂತರ, ಎಂ.ಎಸ್. ಧೋನಿ(MS Dhoni) ಅವರು ಭಾರತ ತಂಡದ ಕೋಚ್ ಗೌತಮ್ ಗಂಭೀರ್(Gautam Gambhir) ಅವರ ನಗುವನ್ನು ಶ್ಲಾಘಿಸಿ ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಧೋನಿ ಗಂಭೀರ್ ಅವರನ್ನು "ಕೋಚ್ ಸಾಹಬ್" ಎಂದು ಕರೆದು, ನಗು ಮತ್ತು ತೀವ್ರತೆಯ ಸಂಯೋಜನೆಯನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಈ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ (2011 ವಿಶ್ವಕಪ್ ಗೆಲುವಿನ ಕ್ರೆಡಿಟ್ ವಿಚಾರ), ಈ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಧೋನಿ ಗಂಭೀರ್ ಅವರನ್ನು ಅಭಿನಂದಿಸಿ, ವಿವಾದಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ. ಸದ್ಯ ಧೋನಿಯ ಈ ಪೋಸ್ಟ್ ಇಬ್ಬರ ನಡುವಿನ ಸಕಾರಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸಿದೆ.
2011ರ ಏಕದಿನ ವಿಶ್ವಕಪ್ ಗೆಲುವಿನ ಕ್ರೆಡಿಟ್ ವಿಚಾರದಲ್ಲಿ ಗೌತಮ್ ಗಂಭೀರ್ ಹಲವು ಬಾರಿ ಬಹಿರಂಗವಾಗಿಯೇ ಧೋನಿ ವಿರುದ್ಧ ಕಿಡಿಕಾರಿದ್ದರು. ವಿಶ್ವಕಪ್ ಗೆದ್ದದ್ದು ಧೋನಿಯ ಸಿಕ್ಸರ್ನಿಂದಲ್ಲ ಬದಲಾಗಿ ತಂಡದ ಎಲ್ಲ ಆಟಗಾರರ ಶ್ರಮದಿಂದ ಎಂದು ಹೇಳಿದ್ದರು. ಅಲ್ಲದೆ ಗೆಲುವಿನ ನಿಜವಾದ ಶ್ರೇಯ ಯುವರಾಜ್ ಸಿಂಗ್ಗೆ ಸಲ್ಲಬೇಕು ಎಂದಿದ್ದರು. ಧೋನಿ ವಿರುದ್ಧ ಗಂಭೀರ್ ಮುನಿಸು ತೋರುತ್ತಲೇ ಬರುತ್ತಿದ್ದರು. ಆದರೆ ಧೋನಿ ಮಾತ್ರ ಎಲ್ಲೂ ಗಂಭೀರ್ ವಿರುದ್ಧ ಯಾವುದೇ ಟೀಕೆಗಳನ್ನು ಮಾಡಿರಲಿಲ್ಲ. ಇದೀಗ ಟಿ20 ವಿಶ್ವಕಪ್ ಗೆದ್ದಗಲೂ ಧೋನಿ ಅವರು ಕೋಚ್ ಆಗಿರುವ ಗಂಭೀರ್ ಅವರನ್ನು ಶ್ಲಾಘಿಸಿದ್ದಾರೆ.
"ಕೋಚ್ ಸಾಹಬ್ ನಗು ನಿಮಗೆ ಚೆನ್ನಾಗಿ ಕಾಣುತ್ತದೆ. ನಗುವಿನೊಂದಿಗೆ ತೀವ್ರತೆಯು ಒಂದು ಗೆಲುವಿನ ಸಂಯೋಜನೆಯಾಗಿದೆ. ಅಹಮದಾಬಾದ್ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಮತ್ತು ವಿಶ್ವಾದ್ಯಂತ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಅಭಿಮಾನಿಗಳಿಗೆ ಅಭಿನಂದನೆಗಳು. ನಿಮ್ಮೆಲ್ಲರ ಆಟವನ್ನು ನೋಡಲು ತುಂಬಾ ಸಂತೋಷವಾಗಿದೆ" ಎಂದು ಧೋನಿ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಗಂಭೀರ್ ಆಟಗಾರನಾಗಿ ಎರಡು ಮತ್ತು ಕೋಚ್ ಆಗಿ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೋಚಿಂಗ್ ಜವಾಬ್ದಾರಿ ಹೊರುವ ಮುನ್ನವೇ, ಗಂಭೀರ್ ದೊಡ್ಡ ಪಂದ್ಯಗಳ ಹೀರೋ ಎನಿಸಿಕೊಂಡಿದ್ದರು. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ 54 ಎಸೆತಗಳಲ್ಲಿ 75 ರನ್ ಬಾರಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ಒತ್ತಡದ ನಡುವೆಯೂ 97 ರನ್ ಗಳಿಸಿ ಭಾರತಕ್ಕೆ ಕಪ್ ತಂದುಕೊಟ್ಟಿದ್ದರು.
ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ನಿರ್ಮಿಸಿದ ವಿಶ್ವ ದಾಖಲೆಗಳ ಪಟ್ಟಿ ಹೀಗಿದೆ
2024ರ ಟಿ20 ವಿಶ್ವಕಪ್ ಗೆಲುವಿನ ನಂತರ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಗಂಭೀರ್ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. 2025ರಲ್ಲಿ ಗಂಭೀರ್ ಮಾರ್ಗದರ್ಶನದಲ್ಲಿ ಕಣಕ್ಕಿಳಿದ ಭಾರತ, 12 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.