ಚೆನ್ನೈ: ಭಾರತ ಅಂಡರ್-20 ತಂಡ, 2027ರ AFC U-20 ಏಷ್ಯನ್ ಕಪ್ ಫುಟ್ಬಾಲ್ ಅರ್ಹತಾ ಟೂರ್ನಿಯಲ್ಲಿ ಸೋಮವಾರ ಸಿರಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ತಾಷ್ಕೆಂಟ್ನ ದೋಸ್ತ್ಲಿಕ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಉಜ್ಬೇಕಿಸ್ತಾನಕ್ಕೆ ತೆರಳುವ ಮುನ್ನ ಭಾರತ ತಂಡ ಬೆಂಗಳೂರಿನಲ್ಲಿ ಸಿಂಗಾಪುರ ವಿರುದ್ಧ ಸ್ನೇಹಯುತ ಪಂದ್ಯಗಳನ್ನು ಆಡಿತ್ತು. ಜೂನ್ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಆರಂಭವಾದ ಬಳಿಕ ತಂಡ ಅರ್ಹತಾ ಪಂದ್ಯಗಳಿಗೆ ಸಿದ್ಧತೆ ನಡೆಸುತ್ತಿತ್ತು.
ಎರಡು ದಶಕಗಳ ಬಳಿಕ ಮತ್ತೆ ಏಷ್ಯನ್ ಕಪ್ಗೆ ಅರ್ಹತೆ ಪಡೆಯುವ ಗುರಿಯನ್ನು ಭಾರತ ತಂಡ ಹೊಂದಿದೆ. 1974ರಲ್ಲಿ ಇರಾನ್ ಜೊತೆ ಜಂಟಿ ಚಾಂಪಿಯನ್ ಆಗಿದ್ದ ಭಾರತ, ಇದಾದ ಬಳಿಕ ಈ ಟೂರ್ನಿಯಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ.
ಎಂಟು ಗುಂಪುಗಳ ವಿಜೇತರು ಹಾಗೂ ಅತ್ಯುತ್ತಮ ಏಳು ರನ್ನರ್ಅಪ್ ತಂಡಗಳು ಮಾತ್ರ ಏಷ್ಯನ್ ಕಪ್ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸಿರಿಯಾ ವಿರುದ್ಧದ ಮೊದಲ ಪಂದ್ಯ, ಕೋಚ್ ಮಹೇಶ್ ಗವಾಲಿ ಹಾಗೂ ಅವರ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
“ಅರ್ಹತಾ ಟೂರ್ನಿಯಲ್ಲಿ ಮೊದಲ ಪಂದ್ಯ ಯಾವಾಗಲೂ ಮುಖ್ಯವಾಗಿರುತ್ತದೆ. ನಾವು ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ ಮತ್ತು ಆಟಗಾರರು ಸಂಪೂರ್ಣ ಗಮನಹರಿಸಿದ್ದಾರೆ. ಒಂದು ಪಂದ್ಯಕ್ಕೆ ಮಾತ್ರ ಗಮನ ನೀಡಿ, ಶಿಸ್ತು ಕಾಪಾಡಿಕೊಂಡು ಮೈದಾನದಲ್ಲಿ ನಮ್ಮ ಶ್ರೇಷ್ಠ ಪ್ರದರ್ಶನ ನೀಡುವುದು ನಮ್ಮ ಗುರಿ. ನಾವು ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ. ಈಗ ನಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಬೇಕಿದೆ,” ಎಂದು ಗವಾಲಿ ತಿಳಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಭಾರತ ಅರ್ಹತೆಯ ಪಡೆಯುವಲ್ಲಿ ಅತ್ಯಂತ ಕಡಿಮೆ ಅಂತರದಿಂದ ವಿಫಲವಾಗಿತ್ತು. 2025ರ ಅರ್ಹತಾ ಪಂದ್ಯಗಳಲ್ಲಿ ಗೋಲು ವ್ಯತ್ಯಾಸದ ಆಧಾರದ ಮೇಲೆ ಅತ್ಯುತ್ತಮ ರನ್ನರ್ಅಪ್ ತಂಡಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ. 2007ರಲ್ಲಿ ಜನಿಸಿದ ಡಿಫೆಂಡರ್ ಮಲೆಮಂಗಂಬ ಸಿಂಗ್ ಥೋಕ್ಚೋಮ್ ಮಾತ್ರ ಆ ತಂಡದಿಂದ ಈಗಿನ ತಂಡದಲ್ಲೂ ಸ್ಥಾನ ಪಡೆದಿರುವ ಆಟಗಾರರಾಗಿದ್ದಾರೆ.
ಸಿಂಗಾಪುರ ಮತ್ತು ಯೆಮೆನ್ ವಿರುದ್ಧ ಆಡಿದ ಸ್ನೇಹಯುತ ಪಂದ್ಯಗಳು ವಿಭಿನ್ನ ರೀತಿಯ ಎದುರಾಳಿಗಳನ್ನು ಎದುರಿಸಲು ತಂಡಕ್ಕೆ ಸಹಾಯ ಮಾಡಿವೆ ಎಂದು ಗವಾಲಿ ಹೇಳಿದ್ದಾರೆ.
“ಸ್ನೇಹಪೂರ್ವಕ ಪಂದ್ಯಗಳು ನಮಗೆ ಬಹಳ ಉಪಯುಕ್ತವಾಗಿದ್ದವು. ತಂಡವನ್ನು ಪರಿಶೀಲಿಸಲು, ಎಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಆಟಗಾರರು ಒಟ್ಟಿಗೆ ಆಡುವ ಅವಕಾಶ ಪಡೆಯಲು ಸಾಧ್ಯವಾಯಿತು. ಅರ್ಹತಾ ಪಂದ್ಯಗಳಿಗೆ ಉತ್ತಮವಾಗಿ ಸಿದ್ಧರಾಗುವುದು ನಮ್ಮ ಪ್ರಮುಖ ಗುರಿಯಾಗಿತ್ತು. ಈ ಪಂದ್ಯಗಳು ಅದಕ್ಕೆ ಸಹಾಯ ಮಾಡಿವೆ,” ಎಂದು ಅವರು ತಿಳಿಸಿದ್ದಾರೆ.
Duleep Trophy: ಇಶಾನ್ ಕಿಶನ್ಗೆ ಗಾಯ, ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿ ನಾಯಕ!
ಆಗಸ್ಟ್ 27ರಂದು ಭಾರತ ತಂಡ ತಾಷ್ಕೆಂಟ್ ತಲುಪಿದೆ. ಹವಾಮಾನ ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ತಂಡಕ್ಕೆ ಹಲವು ದಿನಗಳ ಸಮಯ ಸಿಕ್ಕಿದೆ. ಆಗಸ್ಟ್ 28 ಮತ್ತು 29ರಂದು ಎರಡು ತರಬೇತಿ ಅವಧಿಗಳನ್ನು ನಡೆಸಿರುವ ತಂಡ, ಸಿರಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಭಾನುವಾರ ಸಂಜೆ ಅಂತಿಮ ಅಭ್ಯಾಸ ನಡೆಸಲಿದೆ.
ನೆದರ್ಲೆಂಡ್ನ ಅರ್ನೋ ಬ್ಯುಟೆನ್ವೆಗ್ ಅವರ ಕೋಚ್ ಆಗಿರುವ ಸಿರಿಯಾ ಭಾರತಕ್ಕೆ ಕಠಿಣ ಆರಂಭಿಕ ಎದುರಾಳಿಯಾಗಲಿದೆ. ಭಾರತ ಇರುವ ಗುಂಪಿನಲ್ಲಿ ಉಜ್ಬೇಕಿಸ್ತಾನ ಮತ್ತು ಬಾಂಗ್ಲಾದೇಶ ಕೂಡ ಇರುವುದರಿಂದ ಯಾವುದೇ ತಪ್ಪಿಗೆ ಹೆಚ್ಚಿನ ಅವಕಾಶವಿಲ್ಲ.
“ಸಿರಿಯಾ ಉತ್ತಮ ತಂಡವಾಗಿದ್ದು, ಈ ಮಟ್ಟದಲ್ಲಿ ಸಾಕಷ್ಟು ಅನುಭವ ಹೊಂದಿದೆ. ನಾವು ಅವರನ್ನು ಗೌರವಿಸುತ್ತೇವೆ. ಅವರ ಆಟವನ್ನು ಅಧ್ಯಯನ ಮಾಡಿದ್ದೇವೆ ಮತ್ತು ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ನಮಗೆ ಮಾಹಿತಿ ಇದೆ. ಆದರೆ ನಮ್ಮ ಮುಖ್ಯ ಗಮನ ನಮ್ಮ ಆಟದ ಮೇಲೆಯೇ ಇರುತ್ತದೆ. ಚೆಂಡು ನಮ್ಮ ಬಳಿ ಇಲ್ಲದಾಗ ಸಂಘಟಿತವಾಗಿ ಆಡಬೇಕು ಮತ್ತು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದು ಸ್ಪರ್ಧಾತ್ಮಕ ಪಂದ್ಯವಾಗಿರಲಿದೆ. ಎಲ್ಲಾ 90 ನಿಮಿಷಗಳ ಕಾಲ ನಾವು ಏಕಾಗ್ರತೆ ಕಾಯ್ದುಕೊಳ್ಳಬೇಕು,” ಎಂದು ಗವಾಲಿ ಹೇಳಿದ್ದಾರೆ.
ಸಿರಿಯಾ ಈ ವಯೋಮಾನದ ಮಟ್ಟದಲ್ಲಿ ಉತ್ತಮ ದಾಖಲೆ ಹೊಂದಿದೆ. 1994ರಲ್ಲಿ ಅವರು AFC U-19 ಚಾಂಪಿಯನ್ಶಿಪ್ ಗೆದ್ದಿದ್ದರು. ಇತ್ತೀಚಿನ ಎರಡು AFC U-20 ಏಷ್ಯನ್ ಕಪ್ಗಳಿಗೂ ಸಿರಿಯಾ ಅರ್ಹತೆ ಪಡೆದಿತ್ತು. ಹೀಗಾಗಿ ಆರಂಭಿಕ ಪಂದ್ಯದಲ್ಲೇ ಭಾರತಕ್ಕೆ ಬಲಿಷ್ಠ ಎದುರಾಳಿ ಎದುರಾಗಲಿದೆ.