ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jhandu Kumar: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ತರಕಾರಿ ವ್ಯಾಪಾರಿ!

ಪ್ರಸ್ತುತ ನಡೆಯುತ್ತಿರುವ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ತನ್ನ ಖಾತೆಯನ್ನು ತೆರೆದಿದೆ. ಜುಲೈ 24 ರಂದು ಪುರುಷರ ಹೆವೀವೇಟ್‌ ವಿಭಾಗದಲ್ಲಿ ಪ್ಯಾರಾ ಪವರ್‌ ಲಿಫ್ಟರ್‌ ಝಂಡು ಕುಮಾರ್‌ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅಂದಹಾಗೆ ಝಂಡು ಕುಮಾರ್‌ ಅವರ ಬಗ್ಗೆ ಇಲ್ಲಿ ಆಸಕ್ತದಾಯಕ ಅಂಶಗಳನ್ನು ಇಲ್ಲಿ ವಿವರಿಸಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಝಂಡು ಕುಮಾರ್‌.

ಗ್ಲಾಸ್ಗೋ: ಇಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (CWG 2026) ಭಾರತ ಪದಕಗಳ ಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ. ಭಾರತದ ಪ್ಯಾರಾ ಪವರ್‌ಲಿಫ್ಟರ್‌ ಝಂಡು ಕುಮಾರ್‌ (Jhandu Kumar) ಅವರು ಜುಲೈ 24 ರಂದು ಶುಕ್ರವಾರ ಪುರುಷರ ಹೆವೀವೇಟ್‌ ವಿಭಾಗದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. 72.4 ಕೆಜಿ ತೂಕದ ಝಂಡು ಕುಮಾರ್‌ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 190 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಪದಕವನ್ನು ಖಚಿತಪಡಿಸಿದ್ದಾರೆ.

ಅಂದ ಹಾಗೆ ಮೂರನೇ ಪ್ರಯತ್ನದಲ್ಲಿ 196 ಕೆಜೆ ತೂಕವನ್ನು ಅವರು ಎತ್ತಲು ಪ್ರಯತ್ನ ನಡೆಸಿ ವಿಫಲರಾಗಿದ್ದರು. ಆ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಇದರೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದರು. ಇನ್ನು ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

CWG 2026: ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ತುಲಿಕಾ ಮಾನ್‌, ಭಾರತಕ್ಕೆ ಮತ್ತೊಂದು ಹಿನ್ನಡೆ!

ಝಂಡು ಕುಮಾರ್‌ ಯಾರು?

ಝಂಡು ಕುಮಾರ್‌ ಬಿಹಾರದ ನಳಂದಾ ಜಿಲ್ಲೆಯ ಹರನೌತ್ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದರು. ತಮ್ಮ ತಂದೆ ಹಾಗೂ ಕುಟುಂಬವನ್ನು ನೋಡಿ ಬೆಳೆದ ಝಂಡು, ಬದುಕಿನ ಕಷ್ಟ-ಸುಖಗಳು ಹೇಗಿರುತ್ತದೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಹುಟ್ಟಿದಾಗಿನಿಂದಲೇ ಅವರು ಪೋಲಿಯೊ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಥಿಕ ಸಮಸ್ಯೆ ಹಾಗೂ ದೈಹಿಕ ಸವಾಲುಗಳು ಅವರನ್ನು ವಿಶ್ವಮಟ್ಟದ ವೇದಿಕೆಯವರೆಗೂ ಹಿಂಬಾಲಿಸುತ್ತಲೇ ಬಂದವು.

ಅಂದ ಹಾಗೆ ಝಂಡು ಆರಂಭದಲ್ಲಿ ಪವರ್‌ಲಿಫ್ಟರ್ ಆಗಿರಲಿಲ್ಲ. 2017ರಿಂದ ಅವರು ಮೊದಲು ಶಾಟ್‌ಪುಟ್ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ಎಫ್55 ವಿಭಾಗದಲ್ಲಿ ಭಾಗವಹಿಸುತ್ತಿದ್ದರು. ಆ ಸಮಯದಲ್ಲೇ ಅವರು ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದರು.



ಸ್ಟ್ರೆನ್ತ್‌ ಟ್ರೈನಿಂಗ್‌ ಝಂಡು ಬದುಕನ್ನು ಬದಲಿಸಿತು

ಆದರೆ, ಜಿಮ್‌ನಲ್ಲಿ ನಡೆಸಿದ ಸ್ಟ್ರೆನ್ತ್‌ ಟ್ರೈನಿಂಗ್‌ ಝಂಡು ಅವರೊಳಗೆ ಹೊಸ ಆಸಕ್ತಿಯನ್ನು ಹುಟ್ಟುಹಾಕಿತು. ಶೀಘ್ರದಲ್ಲೇ, ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಅವರ ಸಾಮರ್ಥ್ಯವನ್ನು ಗಮನಿಸಿದ ಒಬ್ಬರು, ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದ್ದರು.

ಅವರ ಹೋರಾಟ ಎಂದಿಗೂ ನಿಲ್ಲಲಿಲ್ಲ. ಸರಿಯಾದ ಪೌಷ್ಟಿಕ ಆಹಾರ ದುಬಾರಿಯಾಗಿತ್ತು ಮತ್ತು ಝಂಡು ಅವರಿಗೆ ಅದನ್ನು ಭರಿಸುವಷ್ಟು ಆರ್ಥಿಕ ಸಾಮರ್ಥ್ಯ ಇರಲಿಲ್ಲ. ವೀಲ್‌ಚೇರ್ ಇಲ್ಲದಿದ್ದರೂ, ಸುಮಾರು 20 ಕಿಲೋಮೀಟರ್ ದೂರದ ಮಾರುಕಟ್ಟೆಗಳಿಗೆ ತೆರಳಿ ತರಕಾರಿ ಮಾರಾಟ ಮಾಡುತ್ತಿದ್ದರು. ನಂತರ ಜೀವನ ನಿರ್ವಹಣೆಗೆ ಸಹಾಯವಾಗಬಹುದು ಎಂಬ ಆಶಯದಿಂದ ಸ್ನೇಹಿತರಿಂದ ಹಣ ಸಾಲ ಪಡೆದು ಇ-ರಿಕ್ಷಾ ಖರೀದಿಸಿದರು. ಆದರೆ ಬಳಿಕ ಕೋವಿಡ್-19 ಮಹಾಮಾರಿ ಬಂದು ಅವರ ಯೋಜನೆಗಳನ್ನು ಉಲ್ಟಾ ಮಾಡಿದವು.



ರಾಜಿಂದರ್‌ ಸಿಂಗ್‌ ಗರಡಿಯಲ್ಲಿ ಪಳಗಿದ್ದ ಝಂಡು ಕುಮಾರ್‌

ಅವರ ಮೊದಲ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪದಕದೊಂದಿಗೆ ಅಂತ್ಯಗೊಂಡಿರಲಿಲ್ಲ. ಆದರೆ ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಿಜೇತ ರಾಜಿಂದರ್ ಸಿಂಗ್ ರಹೇಲು ಅವರು ಝಂಡು ಅವರಲ್ಲಿದ್ದ ಅಪಾರ ಪ್ರತಿಭೆಯನ್ನು ಗುರುತಿಸಿದರು. ರಾಜಿಂದರ್ ಅವರು ತರಬೇತಿಗಾಗಿ ಝಂಡು ಅವರನ್ನು ಗಾಂಧಿನಗರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಕರೆತಂದರು.

ರಾಜಿಂದರ್ ಅವರ ಮಾರ್ಗದರ್ಶನದಲ್ಲಿ ಝಂಡು ಅವರ ಪ್ರದರ್ಶನದಲ್ಲಿ ದೊಡ್ಡ ಬದಲಾವಣೆ ಕಂಡುಬಂತು. 2025ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 205 ಕೆ.ಜಿ. ತೂಕ ಎತ್ತುವ ಮೂಲಕ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಕೆಲವೇ ತಿಂಗಳುಗಳ ಬಳಿಕ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ 206 ಕೆ.ಜಿ. ತೂಕ ಎತ್ತುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದರು.



ಕಾಮನ್‌ವೆಲ್ತ್ ಗೇಮ್ಸ್‌ನ ಪದಕ ವೇದಿಕೆಗೆ ತಲುಪುವ ವೇಳೆಗೆ, ಝಂಡು ಅವರು ಈಗಾಗಲೇ 2025ರ ಬೀಜಿಂಗ್ ವಿಶ್ವಕಪ್‌ ಟೂರ್ನಿಯಲ್ಲಿ ಹಾಗೂ 2026ರ ಏಷ್ಯನ್ ಮತ್ತು ಓಷಿಯಾನಿಯಾ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು. ಝಂಡು ಅವರ ಕಥೆ ಎಂದರೆ, ಪರಿಸ್ಥಿತಿಗಳು ಎಷ್ಟೇ ಕಠಿಣವಾಗಿದ್ದರೂ ಸೋಲನ್ನು ಒಪ್ಪಿಕೊಳ್ಳದೆ ಮುನ್ನಡೆಯುವ ಹೋರಾಟದ ಕಥೆಯಾಗಿದೆ. ಅವರ ಸಾಧನೆಯ ಹಿಂದೆ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸವಾಲುಗಳನ್ನು ಎದುರಿಸುವ ದೃಢ ಸಂಕಲ್ಪವಿದೆ.