ಬೆಂಗಳೂರು, ಎ. 4: ಕ್ರಿಕೆಟ್ ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಕಾದು ಕುಳಿತಿರುವ ಚೆನ್ನೈ ಸೂಪರ್ ಕಿಂಗ್ಸ್(RCB vs CSK) ಮತ್ತು ಆರ್ಸಿಬಿ ನಡುವಣ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಇತ್ತಂಡಗಳ ಮೊದಲ ಮುಖಾಮುಖಿಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಅಣಿಯಾಗಿದೆ. ಭಾನುವಾರ ರಾತ್ರಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದ ಪಿಚ್(RCB vs CSK Pitch Report), ಸಂಭಾವ್ಯ ತಂಡ ಮತ್ತು ಹವಾಮಾನ(RCB vs CSK Weather Report) ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಬೆಂಗಳೂರಿನಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ಅನುಕೂಲಕರವಾದ ಮೈದಾನವನ್ನು ಒದಗಿಸುತ್ತದೆ. ಕ್ರೀಡಾಂಗಣದ ಸಣ್ಣ ಬೌಂಡರಿಗಳು ಈ ಟ್ರ್ಯಾಕ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ಇನ್ನಷ್ಟು ಅನುಕೂಲಕರವಾಗಿಸುತ್ತದೆ. ವೇಗಿಗಳಿಗಿಂತ ಸ್ಪಿನ್ನರ್ಗಳಿಗೆ ಸ್ವಲ್ಪ ತಿರುವು ಮತ್ತು ಸಹಾಯ ಸಿಗಲಿದೆ. ಈ ಸಮತಟ್ಟಾದ ಮೈದಾನದಲ್ಲಿ ವಿಕೆಟ್ಗಳನ್ನು ಪಡೆಯಲು ವೇಗದ ಬೌಲರ್ಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.
ಮಳೆ ಭೀತಿ ಇಲ್ಲ
ರಾಜ್ಯದ ಕೆಲವೆಡೆ ಭಾರೀ ಮಳೆಯಾಗುತ್ತಿದ್ದರೂ ಭಾನುವಾರ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯದ ದಿನದಂದು ತಾಪಮಾನವು ಸುಮಾರು 23°C ಆಗುವ ನಿರೀಕ್ಷೆಯಿದೆ. ಗಾಳಿಯ ವೇಗ ಗಂಟೆಗೆ 13.6 ಕಿ.ಮೀ. ಮತ್ತು ಗೋಚರತೆ 10 ಕಿ.ಮೀ. ಇರಲಿದೆ. ಮೋಡ ಕವಿದ ವಾತಾವರಣ ಇದ್ದರೂ ಮಳೆ ಸಾಧ್ಯತೆ ಕಡಿಮೆ. ಒಂದೊಮ್ಮೆ ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ದಾಖಲೆಗಳು
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ 46 ಪಂದ್ಯಗಳು ನಡೆದಿದ್ದು, ಈ ಪೈಕಿ ಚೇಸಿಂಗ್ ನಡೆಸಿದ ತಂಡಗಳೇ ಹೆಚ್ಚಾಗಿ ಗೆಲುವು ಸಾಧಿಸಿದೆ. 24 ಸಲ ಚೇಸಿಂಗ್ ತಂಡ ಗೆದ್ದಿದೆ. 18 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಿಸಿದೆ.
2 ಕೆಟ್ಟ ಇನ್ನಿಂಗ್ಸ್ಗಳಿಂದ ಸಂಜು ಸ್ಯಾಮ್ಸನ್ರನ್ನು ಟೀಕಿಸಲು ಸಾಧ್ಯವಿಲ್ಲ: ಸಿಎಸ್ಕೆ ಕೋಚ್
ಮುಖಾಮುಖಿ
ಆರ್ಸಿಬಿ ಮತ್ತು ಚೆನ್ನೈ ಸೂಪರ್ಕಿಂಗ್ಸ್ ತಂಡಗಳು ಇದುವರೆಗಿನ ಐಪಿಎಲ್ ಮುಖಾಮುಖಿಯಲ್ಲಿ 35 ಬಾರಿ ಕಾದಾಟ ನಡೆಸಿದೆ. ಚೆನ್ನೈ ಗರಿಷ್ಠ 21 ಪಂದ್ಯ ಗೆದ್ದರೆ, ಆರ್ಸಿಬಿ 13 ಪಂದ್ಯ ಮಾತ್ರ ಗೆದ್ದಿದೆ. ಆದರೆ ಹಾಲಿ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ನೋಡುವಾಗ ಆರ್ಸಿಬಿ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು.
ಸಂಭಾವ್ಯ ಆಡುವ ಬಳಗ
ಆರ್ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್/ಸುಯಶ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್ (ವಿ.ಕೀ.), ಋತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮಾತ್ರೆ, ಸರ್ಫರಾಜ್ ಖಾನ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ನೂರ್ ಅಹ್ಮದ್, ಅಂಶುಲ್ ಕಾಂಬೋಜ್, ಮ್ಯಾಟ್ ಹೆನ್ರಿ, ಖಲೀಲ್ ಅಹಮದ್.