ಮುಂಬಯಿ, ಎ.13: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ನ 20 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮಧ್ಯೆ ಉದ್ವಿಗ್ನ ವಾತಾವರಣ ಕಂಡು ಬಂದಿತು.
ಹಾರ್ದಿಕ್ ಬ್ಯಾಟಿಂಗ್ ವೇಳೆ ಅಣ್ಣನಾದ ಕೃನಾಲ್ ಬೌನ್ಸರ್ ಮೂಲಕ ಸ್ವಾಗತಿಸಿದರು. ಜಾಕೋಬ್ ಡಫಿಗೆ ಹಾರ್ದಿಕ್ ಔಟಾದಾಗ ಕ್ರುನಾಲ್ ತೀವ್ರವಾಗಿ ಆಚರಿಸುತ್ತಿರುವುದು ಕಂಡುಬಂದಿತು. ಕೃಣಾಲ್ ಸಂಭ್ರಮಾಚರಣೆ ಕಂಡು ಹಾರ್ದಿಕ್ ದಿಟ್ಟಿಸಿ ನೋಡುವ ದೃಶ್ಯವನ್ನು ಕಾಣಬಹುದು. ಮಾತ್ರವಲ್ಲದೆ ಪಂದ್ಯದ ಮುಕ್ತಾಯದ ಬಳಿಕ ಪರಸ್ಪರ ಕೈಕುಲುಕುವುದನ್ನು ತಪ್ಪಿಸಿದರು.
ಟಿ20 ವಿಶ್ವಕಪ್ ಮುಗಿದಾಗಿನಿಂದ ಇಬ್ಬರು ಸಹೋದರರ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹಬ್ಬಿದ್ದವು. ಹಾರ್ದಿಕ್ ಅವರ ಯಶಸ್ವಿ ಅಭಿಯಾನಕ್ಕೆ ಅವರ ಹಿರಿಯ ಸಹೋದರ ಕೃನಾಲ್ ಅಭಿನಂದನೆ ಸಲ್ಲಿಸದಿದ್ದಾಗಲೇ ಹಲವರು ಇವರ ಅನ್ಯೋನ್ಯ ಬಾಂಧವ್ಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನ ಬಳಿಕ ಹಾರ್ದಿಕ್ ಹಾಗೂ ಕೃನಾಲ್ ಸಂಬಂಧ ಹಳಸಿದೆ ಎನ್ನಲಾಗಿದೆ. ನತಾಶ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿ ಈಗಲೂ ಆತ್ಮೀಯವಾಗಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ಅಂತರ ಉಂಟುಮಾಡಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಹಾರ್ದಿಕ್ ಪಾಂಡ್ಯ ಅಥವಾ ಕೃನಾಲ್ ಪಾಂಡ್ಯ ಇಬ್ಬರೂ ವದಂತಿಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ.
ಹೊಸ ಗೆಳತಿ ಮತ್ತು ಫ್ಯಾಷನ್ ಮಾಡೆಲ್ ಮಹೀಕಾ ಶರ್ಮಾ ಅವರೊಂದಿಗಿನ ಹಾರ್ದಿಕ್ನ ವಿಶೇಷ ಬಾಂಧವ್ಯ ಸಹೋದರ ವಿರುದ್ಧದ ಮುನಿಸಿಗೆ ಕಾರಣವಾಗಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. 25 ವರ್ಷದ ಮಹೀಕಾ ಟಿ 20 ವಿಶ್ವಕಪ್ನಾದ್ಯಂತ 32 ವರ್ಷದ ಹಾರ್ದಿಕ್ ಜೊತೆ ಪ್ರಯಾಣಿಸುತ್ತಿದ್ದರು ಮತ್ತು ಕ್ರೀಡಾಂಗಣದಲ್ಲಿ ಅವರಿಗೆ ಉತ್ಸಾಹದಿಂದ ಹುರಿದುಂಬಿಸುತ್ತಿದ್ದರು. ಹಾರ್ದಿಕ್ ತನ್ನ ಎಲ್ಲಾ ಪ್ರವಾಸಗಳಲ್ಲಿ ಮಹೀಕಾ ಅವರೊಂದಿಗಿನ ಪೋಸ್ಟ್ ಹಂಚಿಕೊಂಡಿದ್ದರು. ಐಪಿಎಲ್ನಲ್ಲಿಯೂ ಮಹಿಕಾ ಪಾಂಡ್ಯ ಜತೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾಂಡ್ಯ ಗೆಳತಿಗಾಗಿ 12 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫೆರಾರಿ 12 ಸಿಲಿಂಡ್ರಿಯ(Ferrari 12Cilindri) ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಬ್ಯಾಟ್ ಪರೀಕ್ಷಿಸಲು ಪೇಚಾಡಿದ ಅಂಪೈರ್ ಮೇಲೆ ಗರಂ ಆದ ರೋಹಿತ್; ವಿಡಿಯೊ ವೈರಲ್
ಪಂದ್ಯ ಸೋತ ಮುಂಬೈ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಶರಣಾಯಿತು. ಮುಂಬೈ ಆಡಿದ ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ತಂಡದ ಈ ಕಳಪೆ ಪ್ರದರ್ಶನ ಕಂಡು ಅಭಿಮಾನಿಗಳು ಪಾಂಡ್ಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು ಅವರನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ.