ಲಾಹೋರ್, ಫೆ.2: ಭಾರತದ(India vs Pakistan) ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಸರ್ಕಾರದ ನಿರ್ಧಾರಕ್ಕೆ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಪ್ರತಿಕ್ರಿಯಿಸಿದ್ದಾರೆ. ಭಾನುವಾರ, ಪಾಕಿಸ್ತಾನ ಸರ್ಕಾರವು ತಮ್ಮ ತಂಡವು 2026 ರ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವುದಾಗಿ ದೃಢಪಡಿಸಿತು ಆದರೆ ಸಾಂಪ್ರದಾಯಿಕ ಎದುರಾಳಿ ಭಾರತದೊಂದಿಗಿನ ಪಂದ್ಯ ಬಹಿಷ್ಕರಿಸುವುದಾಗಿ ಪ್ರಕಟಿಸಿತು.
ಭಾರತ ವಿರುದ್ಧ ಗುಂಪು ಹಂತದ ಪಂದ್ಯವನ್ನು ಆಡಲ್ಲ ಎಂದು ಪಾಕಿಸ್ತಾನ ತಿಳಿಸಿದೆ. ಒಂದು ವೇಳೆ ಪಾಕ್ಗೆ ಸೂಪರ್-8 ಹಾಗೂ ನಾಕೌಟ್ ಹಂತದಲ್ಲಿ ಭಾರತ ವಿರುದ್ಧ ಪಂದ್ಯ ಸಿಕ್ಕರೆ ಆ ಪಂದ್ಯವನ್ನೂ ಬಹಿಷ್ಕರಿಸಲಿದೆಯೇ ಎಂಬುದನ್ನು ಪಾಕ್ ಸರ್ಕಾರ ಸ್ಪಷ್ಟಪಡಿಸಿಲ್ಲ.
"ಹೌದು, ಖಂಡಿತ ನಾವು ಟಿ20 ವಿಶ್ವಕಪ್ ಆಡುತ್ತೇವೆ. ಆದರೆ ಭಾರತ ವಿರದ್ಧ ಆಡದಿರುವುದು ನಮ್ಮ ನಿರ್ಧಾರವಲ್ಲ. ಮತ್ತು ನಾವು ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಮತ್ತು ನಮ್ಮ ಅಧ್ಯಕ್ಷರು ನಮಗೆ ಏನು ಮಾಡಬೇಕೆಂದು ಸೂಚಿಸುತ್ತಾರೋ ಅದನ್ನು ನಾವು ಅನುಸರಿಸಬೇಕು. ಮತ್ತು ನಾವು ಅದನ್ನು ಮಾಡುತ್ತೇವೆ" ಎಂದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಮೂರನೇ T20I ನಂತರ ಪತ್ರಿಕಾಗೋಷ್ಠಿಯಲ್ಲಿ ಆಘಾ ಹೇಳಿದರು.
ಈ ನಿರ್ಧಾರವು ಪಾಕಿಸ್ತಾನ ಆಟಗಾರರ ನಿಯಂತ್ರಣಕ್ಕೆ ಮೀರಿದ್ದು ಎಂದು ಆಘಾ ಹೇಳಿದರು. ತಂಡವು ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ನಿರ್ದೇಶನಗಳನ್ನು ಪಾಲಿಸುತ್ತದೆ. ವೈಯಕ್ತಿಕ ವಿವೇಚನೆಗೆ ಅವಕಾಶವಿಲ್ಲ. ಪಾಕಿಸ್ತಾನವು ಪಂದ್ಯಾವಳಿಯ ಉಳಿದ ಪಂದ್ಯಗಳಲ್ಲಿ ಸ್ಪರ್ಧಿಸುತ್ತದೆಯಾದರೂ, ಭಾರತದ ಪಂದ್ಯಕ್ಕೆ ಸಂಬಂಧಿಸಿದ ಸೂಚನೆಗಳನ್ನು ನಾವು ಪಾಲಿಸುತ್ತೇವೆ ಎಂದು ಅವರು ಹೇಳಿದರು.
ವೇಳಾಪಟ್ಟಿ ಪ್ರಕಾರ ಪಾಕಿಸ್ತಾನ ತಂಡವು ಫೆಬ್ರವರಿ 15 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತವನ್ನು ಎದುರಿಸಬೇಕಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯನ್ನು ಪಾಕಿಸ್ತಾನ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ವಿಶ್ವಕಪ್ ಪಂದ್ಯ ಬಹಿಷ್ಕರಿಸಿದ ಪಾಕ್; ಭಾರತದ ನಿಲುವೇನು?
ಬಹಿಷ್ಕಾರದ ಮೊದಲ ಪರಿಣಾಮ ಪಾಕ್ಗೇ ತಟ್ಟಲಿದೆ. ತಂಡ ನಾಕೌಟ್ಗೇರಲು ಉಳಿದ 3 ಪಂದ್ಯಗಳಲ್ಲೂ ಗೆಲ್ಲಬೇಕು. ಫೆ.7ಕ್ಕೆ ವಿಶ್ವಕಪ್ ಆರಂಭಗೊಳ್ಳಲಿದ್ದು, ಭಾರತದ 5, ಶ್ರೀಲಂಕಾದ 3 ನಗರ ಆತಿಥ್ಯ ವಹಿಸಲಿದೆ. ‘ಎ’ ಗುಂಪಿನಲ್ಲಿರುವ ಪಾಕ್ ಫೆ.7ಕ್ಕೆ ಕೊಲಂಬೊದಲ್ಲಿ ನೆದರ್ಲ್ಯಾಂಡ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಫೆ.10ಕ್ಕೆ ಯುಎಸ್ಎ, ಫೆ.18ಕ್ಕೆ ನಮೀಬಿಯಾ ವಿರುದ್ಧ ಆಡಲಿದೆ.