ಕೋಲ್ಕತಾ, ಎ.7: ಸೋಮವಾರ ಸಂಜೆ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂಜಾಬ್ ಕಿಂಗ್ಸ್(KKR vs PBKS) ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸಹ-ಮಾಲೀಕ ಶಾರುಖ್ ಖಾನ್(Shah Rukh Khan) ನಿರಾಶೆಗೊಂಡಂತೆ ಕಂಡುಬಂದರು. ಕಳೆದ ವಾರ ವಾಂಖೆಡೆ ಕ್ರೀಡಾಂಗಣದಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ್ದರೂ, ಕೆಕೆಆರ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಸೋಲು ಕಂಡಿತ್ತು. ಈ ಋತುವಿನಲ್ಲಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 65 ರನ್ಗಳಿಂದ ಸೋತಿತ್ತು.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಕೋಲ್ಕತಾ ತಂಡ ಆರಂಭಿಕ ಆಘಾತ ಎದುರಿಸಿ ಅಗ್ರಸ್ಥಾನದಲ್ಲಿ ಸ್ಥಿರತೆ ಕಂಡುಕೊಳ್ಳಲು ವಿಫಲವಾಯಿತು. ಫಿನ್ ಅಲೆನ್ ಮತ್ತು ಕ್ಯಾಮರೂನ್ ಗ್ರೀನ್ ಕಡಿಮೆ ಸ್ಕೋರ್ಗಳಿಗೆ ನಿರ್ಗಮಿಸಿದರು. ಈ ವೇಳೆ ಸಹ-ಮಾಲೀಕ ಶಾರುಖ್ ಖಾನ್ ಫ್ರಾಂಚೈಸಿಯ ಸಿಇಒ ವೆಂಕಿ ಮೈಸೂರು ಅವರೊಂದಿಗೆ ಆಳವಾದ ಸಂಭಾಷಣೆಯಲ್ಲಿ ಕಾಣಿಸಿಕೊಂಡ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
25.20 ಕೋಟಿ ರೂ.ಗೆ ಖರೀದಿಸಲಾದ ಗ್ರೀನ್, ಮತ್ತೊಂದು ವೈಫಲ್ಯದೊಂದಿಗೆ ತನ್ನ ಕಳಪೆ ಪ್ಯಾಚ್ ಅನ್ನು ವಿಸ್ತರಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ(18) ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ(2) ರನ್ ಗಳಿಸಿದ್ದರು. ಗ್ರೀನ್ ವೈಫಲ್ಯದ ವಿಚಾರವಾಗಿಯೇ ವೆಂಕಿ ಮೈಸೂರು ಜತೆ ಶಾರುಖ್ ಖಾನ್ ಅಸಾಮಾಧಾನ ಹೊರಹಾಕಿದಂತಿದೆ.
ಮೊದಲ ಗೆಲುವಿನ ಹುಡುಕಾಟದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿತು. ಸ್ಪಿನ್ನರ್ಗಳಾದ ಸುನೀಲ್ ನರೇನ್, ವರುಣ್ ಚಕ್ರವರ್ತಿ ಕೈಬಿಟ್ಟಿತು.
ಒಂದಂಕ ಪಡೆದು ಆರ್ಸಿಬಿಯನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಪಂಜಾಬ್
ಮಳೆಯಿಂದ ವಿಳಂಬವಾದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 3.4 ಓವರ್ಗಳಲ್ಲಿ 2 ವಿಕೆಟ್ಗಳಿಗೆ 25 ರನ್ ಗಳಿಸಿದ ವೇಳೆ ಮತ್ತೆ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ರಾತ್ರಿ 11:14ರ ಕಟ್ ಆಫ್ಗೆ 40 ನಿಮಿಷಗಳ ಮೊದಲು ಮಳೆ ನಿಂತಿತು. ಆದರೆ, ಐದು ಓವರ್ಗಳ ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸಲು ಸಾಕಷ್ಟು ಸಮಯವಿರಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.