ಹರಾರೆ ಜು.24: ಗುರುವಾರ ನಡೆದಿದ್ದ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡ 7 ವಿಕೆಟ್ ಅಂತರದ ಸೋಲು ಕಂಡಿತ್ತು. ತಂಡದ ಈ ಸೋಲಿಗೆ ಕಳಪೆ ಪಿಚ್ ಕಾರಣ ಎಂದು ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಹೇಳಿದ್ದಾರೆ.
ಭಾರತ ಸರಣಿಗೂ ಮುನ್ನ, ಜಿಂಬಾಬ್ವೆ ಇದೇ ಸ್ಥಳದಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯನ್ನು ಆಯೋಜಿಸಿತ್ತು. ಗುರುವಾರ ನಡೆದ ಮೊದಲ T20I ಪಂದ್ಯದ ವೇಳೆ ಪಿಚ್ ಹೇಗೆ ವರ್ತಿಸಿತ್ತೋ ಅದಕ್ಕಿಂತ ಬಾಂಗ್ಲಾದೇಶ ವಿರುದ್ಧದ ಪಿಚ್ ಹೆಚ್ಚು ಕಾಲ ತೇವಾಂಶವನ್ನು ಉಳಿಸಿಕೊಂಡಿತ್ತು ಎಂದು ರಜಾ ಹೇಳಿದರು.
"ಮತ್ತೊಮ್ಮೆ, ಪಿಚ್ ಗುಣಮಟ್ಟಕ್ಕೆ ತಕ್ಕಂತೆ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪಂದ್ಯ ಆರಂಭಕ್ಕೂ ಮುನ್ನ ಬೆಳಿಗ್ಗೆ, ತೇವಾಂಶವು ಖಂಡಿತವಾಗಿಯೂ ಒಂದು ಪಾತ್ರವನ್ನು ವಹಿಸಲಿದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ಸಂಭವಿಸಿಲ್ಲ. ಹೊಸ ಚೆಂಡಿನೊಂದಿಗೆ ಅದು ಕಠಿಣವಾಗಿ ಉಳಿಯಿತು ಎಂದು ನಾನು ಭಾವಿಸಿದೆ" ಎಂದು ಪಂದ್ಯದ ಬಳಿಕ ಸಿಕಂದರ್ ರಾಜಾ ಹೇಳಿದರು.
"ದುರದೃಷ್ಟವಶಾತ್, ನಾವು ಆರಂಭದಲ್ಲಿ ಹೆಚ್ಚಿನ ಬೌಂಡರಿಗಳನ್ನು ಹೊಡೆಯಲಿಲ್ಲ, ಆದ್ದರಿಂದ ಚೆಂಡು ಹೊಸದಾಗಿಯೇ ಇತ್ತು, ಮತ್ತು ಅದರಿಂದಾಗಿ, ಮಧ್ಯಮ ಕ್ರಮಾಂಕದಲ್ಲಲ ಬ್ಯಾಟಿಂಗ್ ಇನ್ನಷ್ಟು ಕಠಿಣಗೊಂಡಿತು ಎಂದು ನಾನು ಭಾವಿಸಿದೆ" ಎಂದು ಅವರು ಹೇಳಿದರು.
ಲಾರ್ಡ್ಸ್ ಅಲ್ಲ!; 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೈದಾನ ದೃಢಪಡಿಸಿದ ಐಸಿಸಿ
"ಬಾಂಗ್ಲಾದೇಶದ ಏಕದಿನ ಸರಣಿಯ ಸಮಯದಲ್ಲಿ, ಸಾಕಷ್ಟು ತೇವಾಂಶ ಇತ್ತು ಎಂದು ನಾನು ಭಾವಿಸಿದೆ, ಆದರೆ ಈ ಪಂದ್ಯದ ಮೊದಲ ಎಂಟರಿಂದ ಹತ್ತು ಅಥವಾ 12 ಓವರ್ಗಳವರೆಗೆ ತೇವಾಂಶ ಇತ್ತು ಎಂದು ನಾನು ಭಾವಿಸಿದೆ, ಮತ್ತು ಅದನ್ನು ಹೊರತುಪಡಿಸಿ, ಭಾರತ ಬ್ಯಾಟಿಂಗ್ ಮಾಡಲು ಬಂದಾಗ, ವಿಕೆಟ್ ತುಂಬಾ ಉತ್ತಮವಾಗಿತ್ತು. ಆದ್ದರಿಂದ, ಮುಂದಿನ ಪಂದ್ಯಕ್ಕೆ ನಮಗೆ ಉತ್ತಮ ವಿಕೆಟ್ ಸಿಗುತ್ತದೆ ಎಂದು ಆಶಿಸುತ್ತೇವೆ" ಎಂದು ಅವರು ಹೇಳಿದರು.
ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಯಂಕ್ ದಾಳಿಯ ಮುಂದೆ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 125 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡವು ವೈಭವ್ ಸೂರ್ಯವಂಶಿ (50; 19ಎ) ಬೀಸಾಟದ ಬಲದಿಂದ 13.2 ಓವರ್ಗಳಲ್ಲಿ 3 ವಿಕೆಟ್ಗಳಿಗೆ 126 ರನ್ ಗಳಿಸಿ ಗೆದ್ದಿತು.
ಸಂಕ್ಷಿಪ್ತ ಸ್ಕೋರು
ಜಿಂಬಾಬ್ವೆ: 20 ಓವರ್ಗಳಲ್ಲಿ 7ಕ್ಕೆ125 (ರಿಯಾನ್ ಬುರಿ 26, ವೆಸ್ಲಿ ಮದೆವೆರೆ 39, ತಡಿವನಾಶೆ ಮೆರುಮನಿ 27, ಮಯಂಕ್ ಯಾದವ್ 18ಕ್ಕೆ2, ಪ್ರಿನ್ಸ್ ಯಾದವ್ 19ಕ್ಕೆ2, ಶಿವಂ ದುಬೆ 32ಕ್ಕೆ1, ರವಿ ಬಿಷ್ಣೋಯಿ 24ಕ್ಕೆ1).
ಭಾರತ: 13.2 ಓವರ್ಗಳಲ್ಲಿ 3ಕ್ಕೆ126 (ವೈಭವ್ ಸೂರ್ಯವಂಶಿ 50, ಇಶಾನ್ ಕಿಶನ್ 35, ಶ್ರೇಯಸ್ ಅಯ್ಯರ್ ಔಟಾಗದೇ 28, ಬ್ಲೆಸಿಂಗ್ ಮುಝರಬಾನಿ 26ಕ್ಕೆ2, ರಿಚರ್ಡ್ ಎನ್ಗರಾವಾ 30ಕ್ಕೆ1) ಭಾರತ ತಂಡಕ್ಕೆ 7 ವಿಕೆಟ್ ಜಯ.