ಕೊಲಂಬೊ, ಆ.11: ಭಾರತ ವಿರುದ್ಧದ ಟೆಸ್ಟ್ ಸರಣಿಗೆ (Test Series) ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೂ ಗಾಯದ ಭೀತಿ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ಗಳಾದ ಕುಸಲ್ ಮೆಂಡಿಸ್ ಮತ್ತು ಪಥುಮ್ ನಿಸ್ಸಂಕ ಗಾಯದಿಂದಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಆಟಗಾರರ ಲಭ್ಯತೆಯ ಗೊಂದಲದಿಂದಲೇ ಸರಣಿಗೆ ಶ್ರೀಲಂಕಾ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಾಗಿದೆ.
ಕುಸಲ್ ಮೆಂಡಿಸ್ ಮತ್ತು ಪಥುಮ್ ನಿಸ್ಸಂಕ ಇಬ್ಬರೂ ಇನ್ನೂ ಫಿಟ್ ಆಗಿಲ್ಲ ಎನ್ನಲಾಗಿದೆ. ಅವರಿಬ್ಬರ ಗೈರಿನಲ್ಲಿ ಲಂಕಾ ಆಯ್ಕೆಗಾರರು, ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ನಿರೋಶನ್ ಡಿಕ್ವೆಲ್ಲಾಗೆ ಅವಕಾಶ ಕಲ್ಪಿಸಲು ಬಯಸಿದ್ದಾರೆ. ಮೊದಲ ಆಯ್ಕೆಯ ವಿಕೆಟ್ ಕೀಪರ್ ಕೂಡ ಆಗಿದ್ದ ಕುಸಲ್ ಮೆಂಡಿಸ್ ಗೈರಿನಲ್ಲಿ ಆಯ್ಕೆಗಾರರು, 22 ವರ್ಷದ ಅಂಜಲ ಬಂಡಾರಗಿಂತ ಡಿಕ್ವೆಲ್ಲಾಗೆ ಆದ್ಯತೆ ನೀಡಲಿದ್ದಾರೆ ಎನ್ನಲಾಗಿದೆ.
ನಿಸ್ಸಂಕ ಗೈರಿನಲ್ಲಿ ನಿಶಾನ್ ಮಧುಷ್ಕ ಅಗ್ರ ಕ್ರಮಾಂಕದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಮಧುಷ್ಕ ಭಾರತ ತಂಡದ ಅಭ್ಯಾಸ ಪಂದ್ಯದಲ್ಲಿ ಲಂಕಾ ಇಲೆವೆನ್ ಪರ ಅವಳಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಭಾರತವೂ ಕೂಡ ಗಾಯದ ಸಮಸ್ಯೆಯ ಕಾರಣ ಅನುಭವಿ ಆಟಗಾರರ ಸೇವೆ ಕಳೆದುಕೊಂಡಿದೆ. ಜಸ್ಪ್ರೀತ್ ಬುಮ್ರಾ, ಸಾಯಿ ಸುದರ್ಶನ್ ತಂಡಕ್ಕೆ ಆಯ್ಕೆಯಾದರೂ ಆ ಬಳಿಕ ಫಿಟ್ ಆಗದ ಕಾರಣ ಹೊರಬಿದ್ದರು.
ಗಾಲೆ ತಲುಪಿದ ಭಾರತ ತಂಡ
ಮೊದಲ ಪಂದ್ಯವನ್ನಾಡಲು ಭಾರತೀಯ ಆಟಗಾರರು ಈಗಾಗಲೇ ಗಾಲೆಗೆ ತಲುಪಿದ್ದಾರೆ. ಬುಧವಾರ ಗಾಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದು ಗುರುವಾರದಿಂದ ಟೆಸ್ಟ್ ಸರಣಿಗೆ ಮತ್ತೆ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಗಾಲೆಯಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.
ಮತ್ತೆ ಗುಜರಾತ್ ಟೈಟಾನ್ಸ್ ಸೇರಲು ಮುಂದಾದ ಹಾರ್ದಿಕ್ ಪಾಂಡ್ಯ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಬಾಕಿ ಇರುವುದರಿಂದ, ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಈ ಸರಣಿ ಗೆಲುವು ಅನಿವಾರ್ಯವಾಗಿದೆ. ಸದ್ಯ ಭಾರತವು 48.15% ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 41.67% ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಆರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ 58.33% ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ.
ಶ್ರೀಲಂಕಾ ವಿರುದ್ಧ ಭಾರತ 2-0 ಅಂತರದಲ್ಲಿ ಸರಣಿ ಗೆದ್ದರೆ, ಅಂಕಗಳ ಶೇಕಡಾವಾರು 57.58 ಕ್ಕೆ ಏರುತ್ತದೆ. ಸರಣಿಯಿಂದ ಗಳಿಸಿದ 24 ಅಂಕಗಳು 11 ಟೆಸ್ಟ್ಗಳ ನಂತರ ಅವರ ಸಂಖ್ಯೆಯನ್ನು 76 ಕ್ಕೆ ಏರಿಸುತ್ತದೆ. ಸೋಲು ಕಂಡ ಶ್ರೀಲಂಕಾದ ಗೆಲುವಿನ ಶೇಕಡಾವಾರು ಪ್ರಮಾಣವು 27.78 ಕ್ಕೆ ಇಳಿಯುತ್ತದೆ.