ಮುಂಬಯಿ: ಈ ಬಾರಿಯ ಏಷ್ಯಾಕಪ್ ಟಿ20(Asia Cup 2025 final) ಟೂರ್ನಿಯಲ್ಲಿ ಅಜೇಯ ಸಾಧನೆಯೊಂದಿಗೆ ಟ್ರೋಫಿ ಗೆಲ್ಲಿಸಿಕೊಟ್ಟ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav)ಗೆ ತವರಿನಲ್ಲಿ ಅದ್ದೂರಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು. ದುಬೈನಿಂದ ಮುಂಬೈಗೆ ಆಗಮಿಸಿದ ಸೂರ್ಯ ಅವರಿಗೆ ವಿಮಾನ ನಿಲ್ದಾಣದಲ್ಲಿ ಅವರ ಅಭಿಮಾನಿಗಳು ಶಾಲು ಹೊದಿಸಿ, ಭಾರತದ ಧ್ವಜವನ್ನು ನೀಡಿ ಸ್ವಾಗತಿಸಿದರು.
ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್ ಅಂತರದಿಂದ ಬಗ್ಗುಬಡಿದು 9ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಲೀಗ್, ಸೂಪರ್ ಫೋರ್ ಮತ್ತು ಫೈನಲ್ ಮೂರೂ ಪಂದ್ಯಗಳಲ್ಲಿಯೂ ಪಾಕ್ಗೆ ಭಾರತ ಸೋಲಿನ ರುಚಿ ತೋರಿಸಿತ್ತು.
ಫೈನಲ್ ಬಳಿಕ ಮಾತನಾಡಿದ್ದ ಸೂರ್ಯಕುಮಾರ್, ಕಿರಿಯರ ಕ್ರಿಕೆಟ್ ಸೇರಿ 20 ವರ್ಷಗಳಿಂದ ನಾನು ಕ್ರಿಕೆಟ್ ಆಡುತ್ತಿದ್ದೇನೆ. ಏಷ್ಯಾಕಪ್ ನನ್ನ ಜೀವನದ ಅತ್ಯಂತ ಕಠಿಣ ಟೂರ್ನಿಗಳಲ್ಲಿ ಒಂದು. ಕ್ರಿಕೆಟ್ ಜೊತೆಗೆ ಹಲವು ಬೇರೆ ಬೇರೆ ವಿಚಾರಗಳಿಂದಲೂ ಈ ಟೂರ್ನಿ ಮಹತ್ವದ್ದಾಗಿತ್ತು. ಎಲ್ಲವನ್ನೂ ಮೀರಿ ನಾವು ಚಾಂಪಿಯನ್ ಆಗಿದ್ದೇವೆ. ನಾಯಕನಾಗಿ ನಾನು ನಿರಾಳನಾಗಿದ್ದೇನೆ! ಎಂದು ಹೇಳಿದ್ದರು.
ಏಷ್ಯಾಕಪ್ನ ಮ್ಯಾಚ್ ಫೀಯನ್ನು ಭಾರತೀಯ ಸೇನೆಗೆ, ಪಹಲ್ಗಾಂ ಸಂತ್ರಸ್ತರಿಗೆ ಅರ್ಪಿಸಬೇಕು ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ಮೊದಲ ದಿನ ನಾನು ಬಹಿರಂಗವಾಗಿ ಹೇಳಿಕೆ ನೀಡಿ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ಅದಕ್ಕಿಂತ ಹೆಚ್ಚು ಮಾಡಬಹುದು ಎನಿಸಿತು. ಪಂದ್ಯದ ಸಂಭಾವನೆಯನ್ನು ಸೇನೆ, ಪಹಲ್ಗಾಂ ಸಂತ್ರಸ್ತರಿಗೆ ಕೊಡಲು ನಿರ್ಧರಿಸಿದೆ ಎಂದು ಸೂರ್ಯ ಹೇಳಿದರು.