ಕ್ಯಾನ್ಬೆರಾ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭೀಕರ ಗಾಯದ ನಂತರ ಶ್ರೇಯಸ್ ಅಯ್ಯರ್(Shreyas Iyer injury) ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್(Suryakumar Yadav) ಹೇಳಿದ್ದಾರೆ. ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಅಲೆಕ್ಸ್ ಕ್ಯಾರಿ ಅವರ ಕ್ಯಾಚ್ ಹಿಡಿಯುವಾಗ ಶ್ರೇಯಸ್ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು.
ಮಂಗಳವಾರ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ಅಯ್ಯರ್ ಅವರ ಚೇತರಿಕೆಯ ಮಾಹಿತಿ ನೀಡಿದರು. 'ಅಯ್ಯರ್ ಇನ್ನೂ ಕೆಲವು ದಿನಗಳವರೆಗೆ ವೈದ್ಯರ ನಿಗಾದಲ್ಲಿ ಉಳಿಯುವ ನಿರೀಕ್ಷೆಯಿದೆ, ಆದರೆ ಪ್ರಸ್ತುತ ಅವರು ಅಪಾಯದಿಂದ ಪಾರಾಗಿದ್ದಾರೆ. ಫೋನ್ ಕರೆಗಳ ಮೂಲಕ ಮಾತನಾಡುತ್ತಿದ್ದಾರೆ' ಎಂದು ಸೂರ್ಯ ಹೇಳಿದರು.
"ಮೊದಲ ದಿನ, ಅವರು ಗಾಯಗೊಂಡಿದ್ದಾರೆಂದು ತಿಳಿದಾಗ, ನಾನು ಅವರಿಗೆ ಕರೆ ಮಾಡಿದೆ. ಅವರ ಬಳಿ ಫೋನ್ ಇಲ್ಲ ಎಂದು ನನಗೆ ತಿಳಿಯಿತು. ಹಾಗಾಗಿ, ನಾನು ಫಿಸಿಯೋಗೆ ಕರೆ ಮಾಡಿದೆ ಮತ್ತು ಅವರು ಸ್ಥಿರವಾಗಿದ್ದಾರೆ ಎಂದು ಹೇಳಿದರು. ಕಳೆದ ಎರಡು ದಿನಗಳಿಂದ ನಾನು ಅವರೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಅವರು ಫೋನ್ನಲ್ಲಿ ಉತ್ತರಿಸುತ್ತಿದ್ದಾರೆ. ಅವರು ಉತ್ತರಿಸುತ್ತಿದ್ದರೆ, ಅವರು ಸ್ಥಿರವಾಗಿದ್ದಾರೆ ಎಂದರ್ಥ. ಅವರು ಚೆನ್ನಾಗಿ ಕಾಣುತ್ತಿದ್ದಾರೆ, ವೈದ್ಯರು ಅವರೊಂದಿಗೆ ಇದ್ದಾರೆ. ಆದರೆ ಅವರು ಮುಂದಿನ ಕೆಲವು ದಿನಗಳವರೆಗೆ ಮೇಲ್ವಿಚಾರಣೆಯಲ್ಲಿರುತ್ತಾರೆ. ಸರಣಿಯ ನಂತರ ನಾವು ಅವರನ್ನು ಭಾರತಕ್ಕೆ ಕರೆದೊಯ್ಯುತ್ತೇವೆ" ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ಇದನ್ನೂ ಓದಿ IND vs AUS: ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಬಿಸಿಸಿಐ!
ಅಯ್ಯರ್ ಅಪಾಯದಿಂದ ಪಾರಾಗಿದ್ದಾರೆ ಮತ್ತು ಅವರನ್ನು ಐಸಿಯುನಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಖಾಸಗಿ ಕೋಣೆಗೆ ಸ್ಥಳಾಂತರಿಸಲಾಗಿದೆ ಮತ್ತು ವೈದ್ಯರು ಅವರ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಎಂದು ಶುಕ್ಲಾ ಖಚಿತಪಡಿಸಿದ್ದಾರೆ.