ಅಹಮದಾಬಾದ್, ಮಾ.8: ಐಸಿಸಿ ಟಿ20 ವಿಶ್ವಕಪ್ ಸಮರದ ‘ಫೈನಲ್ ವಾರ್’ಗೆ ಕ್ಷಣಗಣನೆ ಶುರುವಾಗಿದೆ. ಒಂದೆಡೆ ಸತತ 2ನೇ ಬಾರಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಆತಿಥೇಯ ಭಾರತ ತನ್ನ ತವರಿನಲ್ಲೇ ಆಡಲು ಸಜ್ಜಾಗಿದ್ದರೆ, ಹಾಲಿ ಚಾಂಪಿಯನ್ನರನ್ನು ಸದೆಬಡಿದು ಚೊಚ್ಚಲ ಕಪ್ ಗೆಲ್ಲಲು ನ್ಯೂಜಿಲೆಂಡ್ ಕಾಯುತ್ತಿದೆ. ಇಂದು ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲಿ ಎಂದು ದೇಶಾದ್ಯಂತ ಅಭಿಮಾನಿಗಳು ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವ್ಯಾಪಕವಾಗಿ ಹೋಮ, ಹವನ, ಪೂಜೆ ಮಾಡುವ ಮುಖೇನ ತಂಡದ ಗೆಲುವಿನ ಜಪ ಮಾಡುತ್ತಿದ್ದಾರೆ.
ಮಧುರೈ, ಉತ್ತರ ಪ್ರದೇಶದ ವಾರಾಣಸಿಯ ದೇವಸ್ಥಾನದಲ್ಲಿ ನೂರಾರು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳ್ಳಾರಿಯಲ್ಲಿ ನಗರದ ವಾಸವಿ ಶಾಲೆಯ ಮಕ್ಕಳು ಭಾರತ ಗೆಲುವಿಗೆ ಪ್ರಾರ್ಥನೆ ಮಾಡಿದ್ದಾರೆ.
ಕ್ರಿಕೆಟ್ ಬ್ಯಾಟ್, ಬಾಲ್, ವಿಕೆಟ್ ಜೊತೆಗೆ ವಾಸವಿ ಮಾತೆಯ ಪೂಜೆ ಸಲ್ಲಿಸಿ, ಭಾರತದ ಭಾವುಟ ಹಿಡಿದು ಆಟಗಾರರು ಪೋಟೋ ಹಿಡಿದು ಶುಭಾಶಯ ಕೋರಿದರು. ಭಾರತೀಯ ಆಟಗಾರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಜಯ ಘೋಷಣೆ ಹಾಕಿದರು. ಯುವತಿಯೊಬ್ವಳು ಭಾರತ ಮಾತೆಯ ವೇಷ ತೊಟ್ಟು ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭಾಷಯ ಹೇಳಿದ್ದು ವಿಶೇಷವಾಗಿತ್ತು.
ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಕಿವೀಸ್ ವಿರುದ್ಧ ಒಂದು ಪಂದ್ಯದಲ್ಲೂ ಗೆದ್ದಿಲ್ಲ. ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದಿದೆ. ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡೇ ಈ ಬಾರಿ ಟೂರ್ನಿಗೆ ಕಾಲಿಟ್ಟಿರುವ ಟೀಂ ಇಂಡಿಯಾ, ಫೈನಲ್ನಲ್ಲೂ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ಸದಾ ಸವಾಲೊಡ್ಡುವ ಕಿವೀಸ್ ತಂಡವೇನೂ ಸುಲಭದಲ್ಲಿ ಕಪ್ ಬಿಟ್ಟುಕೊಡುವುದಿಲ್ಲ ಎಂಬುದು ಖಚಿತ.
ದುಬಾರಿಯಾಗುತ್ತಿರುವ ವರುಣ್ ಚಕ್ರವರ್ತಿ ಬದಲು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಅಧಿಕ. ಹಾಲಿ ಆವೃತ್ತಿಯಲ್ಲಿ ಪಾಕ್ ವಿರುದ್ಧ ಏಕೈಕ ಪಂದ್ಯ ಆಡಿದ್ದ ಅವರು 14 ರನ್ 3 ವಿಕೆಟ್ ಕಿತ್ತಿದ್ದರು. ಟೀಮ್ ಮ್ಯಾನೆಜ್ಮೆಂಟ್ ಇದೀಗ ಈ ಅಸ್ತ್ರವನ್ನು ಫೈನಲ್ನಲ್ಲಿ ಕಣಕ್ಕಿಳಿಸುವ ಯೋಜನೆಯಲ್ಲಿದೆ. ಒಂದೊಮ್ಮೆ ಅರ್ಶ್ದೀಪ್ ಸಿಂಗ್ ಬದಲು ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಿದರೂ ಅಚ್ಚರಿಯಿಲ್ಲ. ಸಿರಾಜ್ ಐಪಿಎಲ್ನಲ್ಲಿ ಗುಜರಾತ್ ತಂಡದ ಪರ ಆಡುವ ಕಾರಣ ಅವರಿಗೆ ಈ ಪಿಚ್ನಲ್ಲಿ ಆಡಿದ ಅಪಾರ ಅನುಭವವೂ ಇದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಅಭಿಷೇಕ್, ಸಂಜು, ಇಶಾನ್, ತಿಲಕ್, ಸೂರ್ಯಕುಮಾರ್(ನಾಯಕ), ಹಾರ್ದಿಕ್, ಶಿವಂ ದುಬೆ, ಅಕ್ಷರ್, ಅರ್ಶ್ದೀಪ್, ಬೂಮ್ರಾ, ವರುಣ್/ಸಿರಾಜ್/ಕುಲ್ದೀಪ್.
ನ್ಯೂಜಿಲೆಂಡ್: ಸೀಫರ್ಟ್, ಆ್ಯಲೆನ್, ರಚಿನ್, ಗ್ಲೆನ್ ಫಿಲಿಪ್ಸ್, ಚಾಪ್ಮನ್, ಡ್ಯಾರಿಲ್, ಸ್ಯಾಂಟ್ನರ್(ನಾಯಕ), ಕೋಲ್ ಮೆಕಾಂಚಿ, ನೀಶಮ್/ಡಫಿ, ಮ್ಯಾಟ್ ಹೆನ್ರಿ, ಫರ್ಗ್ಯೂಸನ್.