ಬೆಲ್ಫಾಸ್ಟ್, ಜೂ.26: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ್ದ 15 ವರ್ಷ ವೈಭವ್ ಸೂರ್ಯವಂಶಿ(Vaibhav Sooryavanshi) ಇಂದು ನಡೆಯುವ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಪಂದ್ಯಕ್ಕೂ ಮುನ್ನ ನಡೆದ ತಂಡದ ಬ್ಯಾಟಿಂಗ್ ಅಭ್ಯಾಸದ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದ್ದು, ಹದಿಹರೆಯದ ಆರಂಭಿಕ ಆಟಗಾರ ಭಾರತೀಯ ರಾಷ್ಟ್ರೀಯ ತಂಡದ ಬೌಲರ್ಗಳನ್ನು ಎದುರಿಸುತ್ತಿರುವುದು ಕಾಣಬಹುದು.
ಬಿಸಿಸಿಐ ಹಂಚಿಕೊಂಡಿರುವ ವೀಡಿಯೊದಲ್ಲಿ, ಸೂರ್ಯವಂಶಿ ಕೆಲವು ಅದ್ಭುತ ಹೊಡೆತಗಳನ್ನು ಹೊಡೆಯುತ್ತಿರುವುದನ್ನು ಕಾಣಬಹುದು. ಸೂರ್ಯವಂಶಿ ಬ್ಯಾಟಿಂಗ್ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಐರ್ಲೆಂಡ್ ತಂಡಕ್ಕೆ, ಸೂರ್ಯವಂಶಿಯಂತಹ ಕಿರಿಯ ಆಟಗಾರನಿಗೆ ತಯಾರಿ ನಡೆಸುವ ನಿರೀಕ್ಷೆಯು ಒಂದು ವಿಶಿಷ್ಟ ಅನುಭವವಾಗಿದೆ. ಆದರೆ, ಅವರಿಗಾಗಿ ಪ್ರತ್ಯೇಕ ಯೋಜನೆ ಇಲ್ಲ ಎಂದು ಐರ್ಲೆಂಡ್ ವಿಕೆಟ್-ಕೀಪರ್ ಬ್ಯಾಟ್ಸ್ಮನ್ ಬೆನ್ ಕ್ಯಾಲಿಟ್ಜ್ ಹೇಳಿದ್ದಾರೆ.
ಸೂರ್ಯವಂಶಿ ತಂಡದ ಆಟಗಾರರೊಂದಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಿದರೂ ಅವರಿಗೆ ಇಂದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಕ್, ತಂಡವು ಫಾರ್ಮ್ನಲ್ಲಿರುವ ಆಟಗಾರನನ್ನು ಕೈಬಿಡುವುದಿಲ್ಲ. ಸರಿಯಾದ ಸಮಯ ಬಂದಾಗ ಸೂರ್ಯವಂಶಿಗೆ ಅವಕಾಶ ಸಿಗುತ್ತದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹೊಸದಾಗಿ ನೇಮಕಗೊಂಡ ನಾಯಕ ಶ್ರೇಯಸ್ ಅಯ್ಯರ್ ಅವರು ಪ್ಲೇಯಿಂಗ್ XI ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಟಿ20 ವಿಶ್ವಕಪ್ನಲ್ಲಿ ಭಾರತೀಯ ದಾಖಲೆ ನಿರ್ಮಿಸಿದ ಶ್ರೀ ಚರಣಿ
'ಸೂರ್ಯವಂಶಿ ತುಂಬಾ ಪ್ರತಿಭಾನ್ವಿತ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಮತ್ತು ಅವರು ಐಪಿಎಲ್ ಮತ್ತು ಇತರ ಎಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರು ಸಾಕಷ್ಟು ನೈಸರ್ಗಿಕ ಸಾಮರ್ಥ್ಯಗಳನ್ನು ಹೊಂದಿದ್ದಾರೆಂದು ಹೇಳಬೇಕಾಗಿಲ್ಲ. ಆದರೆ ಸಮಯ ಬಂದಾಗ ಅವರಿಗೆ ಅವಕಾಶ ಸಿಗಲಿದೆ" ಎಂದು ಕೋಟಕ್ ಹೇಳಿದರು.
ಪಂದ್ಯಕ್ಕೆ ಮಳೆ ಭೀತಿ
ಬಿಬಿಸಿ ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ಆರಂಭಕ್ಕೂ ಮುನ್ನ ಹಗುರ ಮಳೆ ಮತ್ತು ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಮತ್ತು ಸಂಜೆ ಮಳೆಯಾಗುವ ಸಾಧ್ಯತೆಯಿದೆ. ನಿಗದಿತ ಪಂದ್ಯದ ಸಮಯದಲ್ಲಿ ಮಳೆಯ ಸಂಭವನೀಯತೆ ಶೇ. 30 ರಿಂದ 43 ರವರೆಗೆ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ.