ನವದೆಹಲಿ: ಕುತ್ತಿಗೆ ನೋವಿನಿಂದಾಗಿ ಸೌರಾಷ್ಟ್ರ ವಿರುದ್ಧದ ರಣಜಿ(Ranji Trophy) ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಇದೀಗ ಜ.30ರಂದು ನಡೆಯುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕಿಳಿಯುವುದು ಖಚಿತ ಎಂದು ಹೇಳಲಾಗಿದೆ.
ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವಾಡಿದ್ದು 2012ರಲ್ಲಿ. ಇದೀಗ ಅವರು ರೈಲ್ವೇಸ್ ವಿರುದ್ಧ ಕಣಕ್ಕಿಳಿದರೆ 13 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಿದಂತಾಗುತ್ತದೆ. ಮೂಲಗಳ ಪ್ರಕಾರ ಕೊಹ್ಲಿ ಕೊನೇ ಲೀಗ್ ಪಂದ್ಯದಲ್ಲಿ ಆಡಲು ತಾನು ಲಭ್ಯನಿದ್ದೇನೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಈಗಾಗಲೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ತವರಿನ ನ್ಯೂಜಿಲ್ಯಾಂಡ್ ಮತ್ತು ಆಸೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಇದೇ ಕಾರಣದಿಂದ ಬಿಸಿಸಿಐ ಹಿರಿಯ ಆಟಗಾರರು ಕೂಡ ದೇಶೀಯ ಪಂದ್ಯವನ್ನಾಡುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತಂದೆ.
ಈಗಾಗಲೇ ನಾಯಕ ರೋಹಿತ್ ಶರ್ಮ, ಶುಭಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಸೇರಿದಂತೆ ಕೆಲ ಆಟಗಾರರು ಜ.23 ರಿಂದ ಆರಂಭವಾಗುವ ರಣಜಿ ಪಂದ್ಯದಲ್ಲಿ ತಮ್ಮ ರಾಜ್ಯದ ಪರ ಆಡಲಿದ್ದಾರೆ. ಇದು ಇಂಗ್ಲೆಂಡ್ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಲಯಕ್ಕೆ ಮರಳಲು ಆಟಗಾರರಿಗೆ ಉತ್ತಮ ಅವಕಾಶವಾಗಿದೆ.