ಬೆಂಗಳೂರು, ಮಾ. 26: ಬಜೆಟ್ ಅಧಿವೇಶನದ ಕೊನೆಯ ದಿನವಾದ ಗುರುವಾರ (ಮಾರ್ಚ್ 26) ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಮತ್ತು ಬಿಜೆಪಿ ಶಾಸಕ ಮುನಿರತ್ನ (Munirathna) ನಡುವೆ ತೀವ್ರ ವಾಗ್ವಾದ ನಡೆದಿದೆ. ಬೆಂಗಳೂರು ನಗರದ ಚರ್ಚೆಯ ವೇಳೆ ಇಬ್ಬರು ನಾಯಕರ ಮಧ್ಯೆ ಜಟಾಪಟಿ ನಡೆದಿದೆ. ಇದು ವೈಯಕ್ತಿಕ ನಿಂದನೆ, ಆರೋಪ-ಪ್ರತ್ಯಾರೋಪಕ್ಕೆ ತಿರುಗಿತು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ್ ಅಸಹನೆಯಿಂದ ಮುನಿರತ್ನ ಅವರನ್ನು ಹೇ ರೇಪಿಸ್ಟ್, ಕುಳಿತುಕೋ ಎಂದು ಕಿಡಿಕಾರಿದರು. ಈ ವೇಳೆ ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದರು.