ಶಿವಮೊಗ್ಗ, ಏ. 22: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ (McGann Hospital) ನೀಡಿದ ಅನುದಾನದ ಬಗ್ಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ (B.Y. Raghavendra) ಸುದ್ದಿಗೊಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ʼʼಈ ಹಿಂದೆ ಮೆಗ್ಗಾನ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿತ್ತು. ಆ ಸಮಯದಲ್ಲಿ ವೈದ್ಯರು, ಮಕ್ಕಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿ ಯಾವುದೇ ಪ್ರಾಣಾಪಾಯವಾಗದಂತೆ ನೋಡಿಕೊಂಡಿದ್ದರು. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ, ಪ್ರಸ್ತುತ ಇರುವ 30 ಬೆಡ್ಗಳ NICU ಘಟಕವನ್ನು ವಿಸ್ತರಿಸುವ ಅಗತ್ಯವಿತ್ತು. ಹೀಗಾಗಿ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ, ಅವರು ಕೂಡಲೇ ಸ್ಪಂದಿಸಿ ತಮ್ಮ ಸಂಸದರ ನಿಧಿಯ (MP LAD) ಪೂರ್ಣ 5 ಕೋಟಿ ರುಪಾಯಿಯನ್ನು ಶಿವಮೊಗ್ಗದ ಈ ಯೋಜನೆಗೆ ನೀಡಿದ್ದಾರೆʼʼ ಎಂದು ರಾಘವೇಂದ್ರ ಹೇಳಿದರು. ಕೇವಲ ಒಂದು ವಾರದಲ್ಲಿ ತಮ್ಮ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ರಾಘವೇಂದ್ರ ಧನ್ಯವಾದ ಅರ್ಪಿಸಿದ್ದಾರೆ.