ಪಾಟ್ನಾ, ಸೆ. 9: ಬಿಹಾರದ ಭಾಗಲ್ಪುರ ಜಿಲ್ಲೆಯ ರಘೋಪುರ ಪ್ರದೇಶದಲ್ಲಿದ್ದ ಸುಮಾರು 100 ವರ್ಷ ಹಳೆಯ ಚೈತಿ ದುರ್ಗಾ ದೇವಸ್ಥಾನ (Bihar Chaiti Durga Temple) ಮಂಗಳವಾರ (ಸೆಪ್ಟೆಂಬರ್ 1) ತೀವ್ರ ನದಿ ತೀರದ ಸವೆತದಿಂದಾಗಿ ಕೊಚ್ಚಿಹೋಗಿದೆ. ನದಿ ತೀರದ ಭೂಮಿ ವೇಗವಾಗಿ ಸವೆಯುತ್ತಿರುವ ದೃಶ್ಯಗಳ ನಡುವೆ ದೇವಸ್ಥಾನ ಕುಸಿದು ಗಂಗಾ ನದಿಗೆ ಬೀಳುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ದೇವಸ್ಥಾನವು ನದಿಯ ದಡದ ಸಮೀಪ ನಿಂತಿರುವುದು ಕಾಣಿಸುತ್ತದೆ. ಬಳಿಕ ಗಂಗೆಯ ರಭಸದ ನೀರಿನ ಹರಿವು ದೇವಸ್ಥಾನದ ಕೆಳಭಾಗದ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿದ್ದಂತೆ, ಕೆಲವೇ ಕ್ಷಣಗಳಲ್ಲಿ ಇಡೀ ದೇವಸ್ಥಾನ ನದಿಯಲ್ಲಿ ಮುಳುಗಿದೆ.
ರಘೋಪುರದಲ್ಲಿ ಗಂಗೆಯ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಯ ಪ್ರಬಲ ಹರಿವು ತೀರದ ಮಣ್ಣನ್ನು ನಿರಂತರವಾಗಿ ಕೊಚ್ಚಿಕೊಂಡು ಹೋಗಿದೆ. ದೇವಸ್ಥಾನ ನದಿಯ ದುರ್ಬಲ ತೀರದ ಸಮೀಪದಲ್ಲಿದ್ದ ಕಾರಣ, ಅದರ ಅಡಿಪಾಯದ ಕೆಳಗಿನ ಭೂಮಿ ಕ್ರಮೇಣ ಸವೆದುಹೋಗಿತ್ತು.
ತೀವ್ರ ಸವೆತದಿಂದ ದೇವಸ್ಥಾನಕ್ಕೆ ಅಗತ್ಯವಾದ ಸ್ಥಿರ ಅಡಿಪಾಯ ಇಲ್ಲದಂತಾಗಿ, ಅಂತಿಮವಾಗಿ ಕಟ್ಟಡವೇ ಗಂಗಾ ನದಿಗೆ ಕುಸಿದುಬಿದ್ದಿದೆ. ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭೂಮಿ ನದಿ ಪಾಲಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವೈರಲ್ ವಿಡಿಯೊ ವಿಡಿಯೊ ಇಲ್ಲಿದೆ:
ರಘೋಪುರದಲ್ಲಿ ತೀವ್ರ ನದಿ ಸವೆತ
ರಘೋಪುರದ ಪರಿಸ್ಥಿತಿ ಸವಾಲಿನಿಂದ ಕೂಡಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ. ತೀವ್ರ ನದಿ ಸವೆತದಿಂದ ಉಂಟಾಗಿರುವ ಹಾನಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಜಿಲ್ಲಾಡಳಿತವು ಸೂಕ್ಷ್ಮ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಅಗತ್ಯವಿದ್ದಲ್ಲಿ ರಕ್ಷಣೆ, ಪರಿಹಾರ ಹಾಗೂ ಸ್ಥಳಾಂತರ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಭಾಗಲ್ಪುರ ಜಿಲ್ಲಾಧಿಕಾರಿ ಅಲಂಕೃತಾ ಪಾಂಡೆ ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಕುಟುಂಬ ಸದಸ್ಯರು, ಅಗತ್ಯ ವಸ್ತುಗಳು ಮತ್ತು ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ. ಅಲ್ಲದೆ, ವದಂತಿಗಳನ್ನು ನಂಬದಂತೆ ಅಥವಾ ಹರಡದಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.
ವಿಡಿಯೊ ನೋಡಿ:
ದೇವಸ್ಥಾನ ಕೊಚ್ಚಿಹೋದ ವಿಡಿಯೊ ವೈರಲ್
ಚೈತಿ ದುರ್ಗಾ ದೇವಸ್ಥಾನ ಗಂಗಾ ನದಿಗೆ ಕೊಚ್ಚಿಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೊ ನೋಡಿದ ಹಲವರು ದುಃಖ ವ್ಯಕ್ತಪಡಿಸಿದ್ದು, ನದಿಯ ಶಕ್ತಿ ಮತ್ತು ತೀರ ಪ್ರದೇಶಗಳಲ್ಲಿ ವಾಸಿಸುವ ಜನರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!
ಸ್ಥಳೀಯ ನಿವಾಸಿಗಳಿಗೆ ಇದು ಕೇವಲ ಹಳೆಯ ಕಟ್ಟಡದ ನಷ್ಟವಲ್ಲ. ಹಲವು ದಶಕಗಳಿಂದ ಪೂಜಾ ಸ್ಥಳವಾಗಿ ಹಾಗೂ ಸ್ಥಳೀಯರ ನೆನಪುಗಳ ಭಾಗವಾಗಿದ್ದ ದೇವಸ್ಥಾನ ಕಣ್ಮರೆಯಾಗಿರುವುದು ಅವರಲ್ಲಿ ಭಾವನಾತ್ಮಕ ನೋವು ಮೂಡಿಸಿದೆ. ಗಂಗೆಯ ತೀವ್ರ ಸವೆತದಿಂದ ಉಂಟಾದ ಈ ಘಟನೆ, ನದಿ ತೀರದಲ್ಲಿ ವಾಸಿಸುವ ಸಮುದಾಯಗಳು ಎದುರಿಸುತ್ತಿರುವ ಅಪಾಯದ ಮತ್ತೊಂದು ಸ್ಪಷ್ಟ ಉದಾಹರಣೆ ಎನಿಸಿಕೊಂಡಿದೆ.