ಮುಂಬೈ, ಜು. 16: ಕೇವಲ ಒಂದು ಪ್ಲೇಟ್ ಸಮೋಸಕ್ಕೆ ಮಾರಾಮಾರಿ ನಡೆದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮೊದಲು ಬಂದ ಗ್ರಾಹಕರಿಗೆ ಸಮೋಸ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಈ ಜಗಳ ಆರಂಭವಾಗಿದೆ. ಈ ಘಟನೆ ಜುಲೈ 13ರಂದು ಸಂಜೆ 5 ಗಂಟೆ ಸುಮಾರಿಗೆ ಶಿವಶಕ್ತಿ ಸ್ವೀಟ್ ಹೋಂನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಶಿರೂರ್ ತಾಲೂಕಿನ ಕರೇಗಾಂವ್ ಗ್ರಾಮದ ಸ್ವೀಟ್ ಅಂಗಡಿಯಲ್ಲಿ ಸಮೋಸವನ್ನು ಮೊದಲು ಯಾರಿಗೆ ನೀಡಬೇಕೆಂಬ ವಿವಾದ ಹಿಂಸಾಚಾರಕ್ಕೆ ತಿರುಗಿದೆ. ಅಂಗಡಿಯ ಉದ್ಯೋಗಿ ರಾಜು ಲಾಬುರಾಮ್ ದೇವಸಿ ಸಲ್ಲಿಸಿದ ದೂರಿನ ಆಧಾರದ ಮೇಲೆ ರಂಜನ್ಗಾಂವ್ ಎಂಐಡಿಸಿ ಪೊಲೀಸರು ಕರೇಗಾಂವ್ ನಿವಾಸಿಗಳಾದ ಈಶ್ವರ್ ರಂಗನಾಥ್ ನವಲೆ ಮತ್ತು ಸಾಯಿ ಲಕ್ಷ್ಮಣ್ ನವಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೊ ನೋಡಿ:
ಅಂಗಡಿಗೆ ಆಗಮಿಸಿದ ಇಬ್ಬರು ಗ್ರಾಹಕರು ಸಮೋಸ ಆರ್ಡರ್ ಮಾಡಿ ಕಾಯುತ್ತಿದ್ದರು. ಆದಾಗ್ಯೂ ಮೊದಲು ಬಂದ ಗ್ರಾಹಕರಿಗಿಂತ ಇನ್ನೊಬ್ಬ ಗ್ರಾಹಕರಿಗೆ ಸಮೋಸ ನೀಡಲಾಯಿತು. ಈಗಾಗಲೇ ಹಣ ಪಾವತಿಸಿದ್ದರೂ ತಮ್ಮ ಆರ್ಡರ್ ಏಕೆ ವಿಳಂಬವಾಗಿದೆ ಎಂದು ಆರೋಪಿಗಳು ಪ್ರಶ್ನಿಸುವ ಮೂಲಕ ಘರ್ಷಣೆ ಭುಗಿಲೆದ್ದಿತು.
ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ
ʼʼನಾವು ಮೊದಲೇ ಹಣ ಪಾವತಿಸಿದ್ದರೂ ನಮಗೇಕೆ ಸಮೋಸ ನೀಡಿಲ್ಲʼʼ ಎಂದು ಆರೋಪಿಗಳು ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಆರೋಪಿಗಳು ಬೇಕರಿ ಮಾಲಕರಿಗೆ ಮನ ಬಂದಂತೆ ಬೈದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ದೃಶ್ಯ ಭಾರಿ ವೈರಲ್ ಆಗುತ್ತಿದ್ದು, ಕೇವಲ ಸಮೋಸಕ್ಕಾಗಿ ಇಷ್ಟೊಂದು ಮಟ್ಟಿಗೆ ಜಗಳ ಬೇಕಾ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಒಬ್ಬರು, ''ಇಷ್ಟು ತಾಳ್ಮೆ ಇಲ್ಲದ ಮನುಷ್ಯರಿಗೆ ಏನು ಹೇಳಬೇಕು?'' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.