ಲಖನೌ, ಡಿ. 6: ಜನರ ಗುಂಪೊಂದು ದಲಿತ ಸಮುದಾಯದ ಯುವಕನೊಬ್ಬನಿಗೆ ಥಳಿಸಿ, ತೀವ್ರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣವು ರಾಜ್ಯದಲ್ಲಿ ಜಾತಿ ಆಧಾರಿತ ಹಿಂಸಾಚಾರದ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕನೊಬ್ಬನ ಮೇಲೆ ನಾಲ್ವರು ಯುವಕರ ಗುಂಪು ಬರ್ಬರವಾಗಿ ಥಳಿಸಿ ಚಪ್ಪಲಿಯಿಂದ ಹೊಡೆದಿದಿದೆ. ಬಳಿಕ ಬಟ್ಟೆಯನ್ನು ಬಿಚ್ಚಿಸಿ ಕಾಲು ಮುಟ್ಟಿ ಕ್ಷಮೆಯಾಚಿಸುವಂತೆ ಬಲವಂತ ಮಾಡಿದೆ ಎನ್ನಲಾಗಿದೆ. ಸದ್ಯ ಈ ಹೇಯ ಕೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, (Viral Video) ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದಲಿತ ಸಮುದಾಯದ ಯುವಕನೊಬ್ಬನನ್ನು ಥಳಿಸಿ, ಕಾಲು ಮುಟ್ಟುವಂತೆ ಮಾಡಿದ ಈ ಅಮಾನವೀಯ ಘಟನೆ ನವೆಂಬರ್ 22ರಂದು ಝಾನ್ಸಿಯ ಪ್ರೇಮ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಹರ್ಷ ವಾಲ್ಮೀಕಿ ಎನ್ನುವ ದಲಿತ ಸಮುದಾಯದ ಯುವಕನ ಮೇಲೆ ನಿಶಾಂತ್ ಸಕ್ಸೇನಾ, ಸುಕೃತ್, ಕನಿಷ್ಕ್, ರವೀಂದ್ರ ಮತ್ತು ಭಾನು ಪಾಲ್ ಎನ್ನುವ ಯುವಕರು ಹಲ್ಲೆ ನಡೆಸಿದ್ದಾರೆ.
ವಿಡಿಯೊ ನೋಡಿ:
ಮಾಹಿತಿಯ ಪ್ರಕಾರ ಹರ್ಷ ವಾಲ್ಮೀಕಿ ಹೋಟೆಲೊಂದರ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಯುವಕರ ಗುಂಪು ಸಿಗರೇಟ್ ನೆಪ ಹೇಳಿ ಕರೆದೊಯ್ದಿದೆ. ನಂತರ ಒಂದು ಕೋಣೆಯಲ್ಲಿ ಕೂಡಿಹಾಕಿ, ಮೊಬೈಲ್ ಕಸಿದುಕೊಂಡು ಹಿಂಸಿಸಿದೆ. ವೈರಲ್ ಆದ ವಿಡಿಯೊದಲ್ಲಿ ಆರೋಪಿಗಳು ಹರ್ಷ ವಾಲ್ಮೀಕಿಗೆ ಜಾತಿ ನಿಂದನೆಯನ್ನು ಮಾಡಿ ಚಪ್ಪಲಿಯಿಂದ ತಲೆಗೆ ಮತ್ತು ದೇಹಕ್ಕೆ ಪದೇ ಪದೆ ಹೊಡೆಯುವ ದೃಶ್ಯ ಕಂಡುಬಂದಿದೆ. ಇಷ್ಟೇ ಅಲ್ಲದೆ, ಪ್ರಾಣ ಬೆದರಿಕೆ ಹಾಕಿ ಆತನಿಗೆ ಬಟ್ಟೆಯನ್ನು ಬಿಚ್ಚುವಂತೆ ಮತ್ತು ಎಲ್ಲರ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಬಲವಂತ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬ ರವೀಂದ್ರ ಎನ್ನುವಾತ ಈ ಸಂಪೂರ್ಣ ದೌರ್ಜನ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾನೆ.
ಶಾಲೆಯಲ್ಲಿ ಚಿಕ್ಕ ಮಕ್ಕಳಿಂದ ಇಟ್ಟಿಗೆ ಹೊರಿಸಿದ ಶಿಕ್ಷಕಿ
ಸದ್ಯ ಈ ಎಲ್ಲ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಕಠಿಣವಾದ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನಿಶಾಂತ್ ಸಕ್ಸೇನಾ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂತಹ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಸರಿಯಾದ ಶಿಕ್ಷೆ ವಿಧಿಸಬೇಕು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕಾರಣ ಇಲ್ಲದೆ ಈ ರೀತಿಯಾಗಿ ನಡೆಸಿಕೊಳ್ಳುವುದು ತಪ್ಪು. ಇವರಿಗೂ ಇದೇ ರೀತಿ ಸರಿಯಾಗಿ ಥಳಿಸಬೇಕು ಎಂದು ಬರೆದುಕೊಂಡಿದ್ದಾರೆ.