ನವದೆಹಲಿ, ಜೂ. 21: ಇತ್ತೀಚೆಗೆ ನಾಗರಿಕ ಪ್ರಜ್ಞೆ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನ ಬದಲಾಗುತ್ತಿಲ್ಲ...ಸಾರ್ವಜನಿಕ ಸ್ಥಳದಲ್ಲಿ ಮನ ಬಂದಂತೆ ವರ್ತಿಸುವುದು, ಪರಿಸರಕ್ಕೆ ಹಾನಿ ಮಾಡುವುದು, ಎಲ್ಲೆಂದರಲ್ಲಿ ಕಸ ಎಸೆಯುವುದು ಇಂತಹ ಕೃತ್ಯಗಳನ್ನು ಎಸಗುತ್ತಲೆ ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂತಹದ್ದೇ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಸಾರ್ವಜನಿಕ ರಸ್ತೆಗೆ ಕುಟುಂಬವೊಂದು ತಿಂದ ತ್ಯಾಜ್ಯವನ್ನು ಎಸೆದಿದ್ದು ಇದನ್ನು ನೋಡಿ ಯುವಕನೊಬ್ಬ ತರಾಟೆಗೆ ತೆಗೆದು ಕೊಂಡಿದ್ದಾನೆ. ಸದ್ಯ ಇದರ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಜನರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಜನರು ತಮ್ಮ ಮನೆ, ಸ್ಥಳ ಇತ್ಯಾದಿಯನ್ನು ಸ್ವಚ್ಛವಾಗಿಡಲು ಬಯಸುತ್ತಾರೆ. ಆದರೆ ಸಾರ್ವಜನಿಕ ಸ್ಥಳವನ್ನು ಕಸದ ತೊಟ್ಟಿಯಂತೆ ಬದಲಾಯಿಸುತ್ತಾರೆ. ಅದಕ್ಕೆ ತಕ್ಕಂತೆ ಕುಟುಂಬವೊಂದು ರಸ್ತೆಗೆ ಬಳಸಿದ ತಟ್ಟೆ ಎಸೆದಿದೆ. ಈ ಘಟನೆಯನ್ನು ಚಿತ್ರೀಕರಿಸಿದ ಯುವಕ, ಕುಟುಂಬವು ತಮ್ಮ ವಾಹನದಲ್ಲಿ ಆಹಾರವನ್ನು ತಿಂದು ಮುಗಿಸಿ ನಂತರ ಬಳಸಿದ ಕಾಗದದ ತಟ್ಟೆಗಳನ್ನು ರಸ್ತೆಗೆ ಎಸೆದಿದೆ ಎಂದು ಹೇಳಿಕೊಂಡಿದ್ದಾನೆ. ಈ ಪ್ರವೃತ್ತಿಯನ್ನು ಟೀಕಿಸಿದ ಯುವಕ ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡುತ್ತ ಅವರು ತಮ್ಮ ಕಾರನ್ನು ಸ್ವಚ್ಛವಾಗಿಡಲು ಬಯಸಿದ್ದಾರೆ ಎಂದು ಕಿಡಿಕಾರಿದ್ದಾನೆ.
ವಿಡಿಯೊ ನೋಡಿ:
ಯುವಕನು ಈ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ಆ ಕುಟುಂಬವನ್ನು ಪ್ರಶ್ನಿಸಿದ್ದಾನೆ. ನಿಮ್ಮ ಕಾರು ಕ್ಲೀನ್ ಆಗಿ ಇಟ್ಟುಕೊಳ್ಳಲು ರಸ್ತೆಯನ್ನು ಗಲೀಜು ಮಾಡುತ್ತೀರಾ? ಎಂದು ಕೇಳಿದ್ದಾನೆ. ಆದರೆ, ಚಾಲಕನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ತಲೆ ಅಲ್ಲಾಡಿಸುವ ಮೂಲಕ ಬೇಜವ್ದಾರಿ ಮೆರೆದಿದ್ದಾನೆ. ಮತ್ತೊಬ್ಬ ಸದಸ್ಯ ಅದೇ ಕಸದ ಪ್ಲೇಟ್ಗಳನ್ನು ಕಾರಿನ ಅಡಿಗೆ ತಳ್ಳಲು ಮುಂದಾಗಿದ್ದಾನೆ.
ಬೆಂಗಳೂರಿನ ಕಟ್ಟಡದ ಬಾಲ್ಕನಿಯಲ್ಲಿ ಓಪನ್ ಟಾಯ್ಲೆಟ್; ಮನೆಯ ಮಾಲಕ ಪ್ರಕೃತಿ ಪ್ರೇಮಿಯಾಗಿರಬೇಕೆಂದು ಕಾಲೆಳೆದ ನೆಟ್ಟಿಗರು
ʼʼಕಸ ಎಸೆದವರ ಪೈಕಿ ಓರ್ವ, ಇದು ನಿಮ್ಮ ತಂದೆಯ ರಸ್ತೆಯೇ ಎಂದು ಅಹಂಕಾರದಿಂದ ಮಾತನಾಡಿದ್ದಾನೆ. ಇದಕ್ಕೆ ನಾನು ಹೌದು, ಇದು ನನ್ನ ತಂದೆಯ ರಸ್ತೆ ಎಂದು ಹೇಳಿದ್ದೇನೆ. ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸೇರಿವೆ ಮತ್ತು ಅವುಗಳನ್ನು ಗೌರವದಿಂದ ನಡೆಸಿಕೊಳ್ಳಬೇಕುʼʼ ಎಂದು ವಿಡಿಯೊದಲ್ಲಿ ಹೇಳಿದ್ದಾನೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಈ ಬೇಜವಾಬ್ದಾರಿ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ನೆಟ್ಟಿಗರೊಬ್ಬರು ʼʼಎಷ್ಟೇ ಹಣ ಇರಬಹುದು. ಆದರೆ ಇಂತಹ ವರ್ತನೆ ತೋರುವುದು ನಾಚಿಕೆಗೇಡುʼʼ ಖಾರವಾಗಿ ಬರೆದಿದ್ದಾರೆ. ಮತ್ತೊಬ್ಬರು, ʼʼಇವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕುʼʼ ಎಂದು ತಿಳಿಸಿದ್ದಾರೆ.