ಚಂಬಾ,ಜು.24: ಹಿಮಾಚಲ ಪ್ರದೇಶದ ಚಂಬಾದಲ್ಲಿ ಭೂಕುಸಿತ ಉಂಟಾಗಿದ್ದು ಜನರು ಪ್ರಾಣಪಾಯದಿಂದ ಪಾರಗಾಲು ತೀವ್ರ ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಭೀಕರ ಭೂಕುಸಿತದ ನಡುವೆಯೂ ಏಳು ತಿಂಗಳ ಕಂದಮ್ಮನನ್ನು ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರು ರಕ್ಷಣೆ ಮಾಡಿದ ಘಟನೆ ನಡೆದಿದೆ. ತನ್ನ ಜೀವದ ಅಪಾಯದ ಹೊರತಾಗಿಯೂ ಮಗುವಿನ ಪ್ರಾಣ ಉಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಇವರನ್ನು ನೆಟ್ಟಿಗರು ರಿಯಲ್ ಹೀರೋ ಎಂದು ಕರೆದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಭೂಕುಸಿತ ಉಂಟಾಗಿದೆ. ಕಿರಿದಾದ ಬೆಟ್ಟ ಮಾರ್ಗಗಳು, ದೊಡ್ಡ ಬಂಡೆಗಳು ನೋಡನೋಡುತ್ತಿದ್ದಂತೆ ಉರುಳಿ ಬೀಳುತ್ತಿವೆ. ಭೂ ಕುಸಿತದಿಂದಾಗಿ ರಸ್ತೆಯೂ ಸಂಪೂರ್ಣ ಜಖಂಗೊಂಡಿದೆ. ಈ ಅಪಾಯದ ಪರಿಸ್ಥಿತಿಯಲ್ಲೂ ಆಂಬ್ಯುಲೆನ್ಸ್ ಸಿಬ್ಬಂದಿ, ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಇವರ ನಿಸ್ವಾರ್ಥ ಬದ್ಧತೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ವಿಡಿಯೋ ನೋಡಿ:
ಈ ವೀಡಿಯೊವನ್ನು ಶೇರ್ ಮಾಡಿದ ನಿಖಿಲ್ ಸೈನಿ ಎಂಬವರು ಸಿಬ್ಬಂದಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇವರು ಎಲ್ಲಾ ಖ್ಯಾತಿ ಪಡೆಯಲು ಅರ್ಹರು, ಚಂಬಾದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಯೊಬ್ಬರು 7 ತಿಂಗಳ ಮಗುವನ್ನು ಬಂಡೆ ಕಲ್ಲುಗಳ ಅಪಾಯಕಾರಿ ಪ್ರದೇಶದ ಮೂಲಕ ತನ್ನ ಸ್ವಂತ ಜೀವವನ್ನು ಪಣಕಿಟ್ಟು ರಕ್ಷಣೆ ಮಾಡಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಗಳು ಸಂಪೂರ್ಣ ಮುಚ್ಚಿ ಹೋಗಿದ್ದು ಬಂಡೆ ಕಲ್ಲುಗಳು, ಮರ- ಗಿಡಗಳು ಬಿದ್ದು ಹೋಗಿವೆ. ಮೇಲಿಂದ ಮತ್ತಷ್ಟು ಕಲ್ಲುಗಳು ಉರುಳುವ ಅಪಾಯ ಎದುರಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಜಾಕೆಟ್ ಧರಿಸಿದ್ದ ಆಂಬ್ಯುಲೆನ್ಸ್ ಸಿಬ್ಬಂದಿ, ಮಗುವನ್ನು ಕಾಳಜಿಯಿಂದ ಅಪ್ಪಿ ಕೊಂಡು ಅತ್ಯಂತ ಜಾಗರೂಕತೆಯಿಂದ ನಡೆದುಕೊಂಡು ಬರುತ್ತಿದ್ದಾರೆ.
ಈ ವೇಳೆ ಸ್ಥಳೀಯರು ಹಾಗೂ ಇತರ ತುರ್ತು ಸೇವಾ ಸಿಬ್ಬಂದಿ ಅವರಿಗೆ ಬೆಂಬಲ ನೀಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ನಿಜಕ್ಕೂ ಇವರು ಹೃದಯವಂತರು ಎಂದು ಬರೆದಿದ್ದಾರೆ. ಮತ್ತೊಬ್ಬರು ಇವರ ಈ ಧೈರ್ಯಕ್ಕೆ ಮೆಚ್ಚಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.