ದಿಸ್ಪುರ, ಜು. 29: ಅಸ್ಸಾಂನಲ್ಲಿ ಪ್ರವಾಹ (Assam Flood) ಪರಿಸ್ಥಿತಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಜನ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಮೃತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಪ್ರವಾಹದ ತೀವ್ರತೆಗೆ ಕೆಲವರು ಕೊಚ್ಚಿಹೋಗಿದ್ದು ಅವರನ್ನು ರಕ್ಷಿಸಲು ವಿಪತ್ತು ನಿರ್ವಹಣಾ ತಂಡ ಕೆಲಸ ಮಾಡುತ್ತಿದೆ. ಈ ನಡುವೆ ಹೃದಯ ವಿದ್ರಾವಕ ವಿಡಿಯೊವೊಂದು ವೈರಲ್ (Viral News) ಆಗಿದ್ದು, ವ್ಯಕ್ತಿಯೊಬ್ಬರು ಜೀವದ ಹಂಗು ತೊರೆದು ಮುಳುಗುತ್ತಿರುವ ಕರುವನ್ನು ತಮ್ಮ ಎದೆಗೆ ಅಪ್ಪಿಕೊಂಡು ರಕ್ಷಿಸಿದ್ದಾರೆ.
ಅಸ್ಸಾಂ ಭೀಕರ ಪ್ರವಾಹದಲ್ಲಿ ಮನುಷ್ಯರಷ್ಟೆ ಅಲ್ಲದೆ ಸಾಕು ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಅಸಹಾಯಕ ಕರುವೊಂದನ್ನು ಜೀವದ ಹಂಗು ತೊರೆದು ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ. ಕುತ್ತಿಗೆಯ ಆಳದವರೆಗೆ ನಿಂತಿರುವ ನೀರಿನಲ್ಲಿ ಅವರು ಕರುವೊಂದನ್ನು ಬಿಗಿಯಾಗಿ ಹಿಡಿದುಕೊಂಡಿರುವುದು ಕಂಡು ಬಂದಿದೆ.
ವಿಡಿಯೊ ನೋಡಿ:
ಕರು ನೀರಿನಲ್ಲಿ ಹೆದರಿಕೊಂಡು ತೇಲಾಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕರುವನ್ನು ರಕ್ಷಿಸಿದ್ದಾರೆ. ನೀರು ಅವರ ಕುತ್ತಿಗೆವರೆಗೆ ತಲುಪಿದ್ದರೂ ಬೆದರದೆ ಅದರ ಜೀವ ಉಳಿಸಿದ್ದಾರೆ. ಕರುವನ್ನು ಸುರಕ್ಷಿತವಾಗಿ ದಡಕ್ಕೆ ತರಲು ಹೆಣಗಾಡುತ್ತಿರುವಾಗ, ಸುತ್ತಮುತ್ತಲಿನ ಜನರು ಅವರಿಗೆ ಸಹಾಯ ಮಾಡಿದ್ದಾರೆ.
ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿದ ಪದವೀಧರ
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬರು ʼʼನಿಜಕ್ಕೂ ಹೃದಯಸ್ಪರ್ಶಿ ದೃಶ್ಯʼʼ ಎಂದು ಬರೆದಿದ್ದಾರೆ. ಅಸ್ಸಾಂನ 622 ಗ್ರಾಮಗಳು ತೀವ್ರ ಪ್ರವಾಹದಿಂದ ಪ್ರಭಾವಿತವಾಗಿದ್ದು, ವಾಯುಪಡೆ, ಎನ್ಡ್ಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ನಾಗರಿಕ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಿವೆ. ಶಿವಸಾಗರ್ ಜತೆಗೆ, ಚಾರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ಸೋನಿತ್ಪುರ ಮುಂತಾದ ನಗರಗಳು ಪ್ರವಾಹದಿಂದ ತೀವ್ರವಾಗಿ ತೊಂದರೆಗೆ ಸಿಲುಕಿದೆ.