ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ (Rekha Gupta) ಅವರನ್ನು ಪ್ರಶ್ನಿಸಲು ಯತ್ನಿಸಿದ ಇಬ್ಬರು ಮಹಿಳಾ ಪತ್ರಕರ್ತೆಯರನ್ನು (Journalists) ಪೊಲೀಸರು (Delhi Police) ವಶಕ್ಕೆ ಪಡೆದು, ಸಾಕೇತ್ ಪೊಲೀಸ್ ಠಾಣೆಯಲ್ಲಿ ದೈಹಿಕವಾಗಿ ಹಲ್ಲೆ ನಡೆಸಿ ಧಾರ್ಮಿಕವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಆರೋಪವನ್ನು ದೆಹಲಿ ಪೊಲೀಸರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ದೆಹಲಿಯಲ್ಲಿ ನಡೆದ ಪ್ರತಿಭಟಯೊಂದರಲ್ಲಿ ವರದಿ ಮಾಡಲು ತೆರಳಿದ್ದ ಇಬ್ಬರು ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಮೇಲೆ ದೆಹಲಿ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿ, ಧಾರ್ಮಿಕವಾಗಿ ನಿಂದಿಸಿದ್ದಾರೆ ಎಂದುʼ ಪತ್ರಕರ್ತೆಯರು ದೂರಿದ್ದಾರೆ. ʼವರದಿ ಮಾಡುತ್ತಿದ್ದ ವೇಳೆ ಸ್ಥಳದಲ್ಲಿದ್ದ ಪೊಲೀಸರು ನಮ್ಮ ಬಳಿ ಗುರುತಿನ ಚೀಟಿ ಕೇಳಿದರು. ನಾವು ಪತ್ರಕರ್ತೆಯರು ಎಂದು ಸ್ಪಷ್ಟಪಡಿಸಿದರೂ ಗುರುತಿನ ಚೀಟಿ ತೋರಿಸಿದರು ನಮ್ಮನ್ನು ತಡೆಯಲು ಯತ್ನಿಸಿದರು. ಈ ಘಟನೆಯನ್ನು ವೀಡಿಯೋ ಮಾಡವುವಾಗ ನಮ್ಮನ್ನು ತಡೆದ ಪೊಲೀಸರು ಬಲವಂತವಾಗಿ ಫೋನ್ ಕಸಿದುಕೊಳ್ಳಲು ಯತ್ನಿಸಿದರು, ನಂತರ ಪೊಲೀಸ್ ಠಾಣೆಗೆ ಕರೆದೊಯ್ದರುʼ ಎಂದು ವಿಡಿಯೊವೊಂದರಲ್ಲಿ ಪತ್ರಕರ್ತೆಯರು ವಿವರಿಸಿದ್ದಾರೆ.
ʼಪೊಲೀಸರು ನಮ್ಮನ್ನು ಠಾಣೆಗೆ ಕರೆದುಕೊಂಡು ಹೋಗಿ, ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ನಾವು ಯಾವ ಸಮುದಾಯಕ್ಕೆ ಸೇರಿದವರು ಎಂದು ಕೇಳಿದರು, ಹೇಳಿದ ಮೇಲೆ ಮತ್ತೆ ನಮ್ಮನ್ನು ಥಳಿಸಿದ್ದಾರೆʼ ಎಂದು ತಮ್ಮ ಕಾಲು ಮತ್ತು ತೋಳುಗಳಿಗೆ ಆದ ಗಾಯಗಳನ್ನು ತೋರಿಸುತ್ತಾ ಪತ್ರಕರ್ತೆಯರು ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಕ್ಕೆ ರಕ್ಷಣೆ ನೀಡಬೇಕಾದ ರಕ್ಷಕರೇ, ನಮ್ಮ ಧರ್ಮದ ಹೆಸರು ಕೇಳಿ ಈ ರೀತಿ ಕ್ರೂರವಾಗಿ ನಡೆದುಕೊಂಡಿರುವುದು ಅಮಾನವೀಯ. ಧರ್ಮದ ಹೆಸರು ಕೇಳಿ ಮತ್ತೆ ನಮ್ಮ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಇದು ಯಾವ ರೀತಿ ನ್ಯಾಯ ಪತ್ರಕರ್ತೆಯರಿಗೆ ರಕ್ಷಣೆ ಇಲ್ಲವೇ?ʼ ಎಂದು ಸಂತ್ರಸ್ತ ಮಹಿಳಾ ಪತ್ರಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ
ಆರೋಪ ತಳ್ಳಿ ಹಾಕಿದ ಪೊಲೀಸರು
ಈ ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸರು, ʼಪ್ರತಿಭಟನಾ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಆದ್ಯತೆಯಾಗಿದೆ. ಪೊಲೀಸರು ಯಾರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲಾ ಅಥವಾ ಧಾರ್ಮಿಕವಾಗಿ ನಿಂದಿಸಿಲ್ಲ. ಇಬ್ಬರು ಪತ್ರಕರ್ತೆಯರು ತಮ್ಮ ವಾಹನಗಳನ್ನ ವಿವಿಐಪಿ ಸ್ಥಳದಲ್ಲಿ ಪಾರ್ಕ್ ಮಾಡಿದ್ದರು, ಎಷ್ಟು ಬಾರಿ ಹೇಳಿದರು ಅವರು ತಮ್ಮ ವಾಹನಗಳನ್ನು ತೆರವುಗೊಳಿಸಲು ನಿರಾಕರಿಸಿದರು, ಹೀಗಾಗಿ ವಿವಿಐಪಿ ಮಾರ್ಗದ ಭದ್ರತೆ ಮತ್ತು ಸುರಕ್ಷತೆಗಾಗಿ ಇಬ್ಬರು ಪತ್ರಕರ್ತೆಯರನ್ನು ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತುʼ. ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧೆಗೆ 50 ಸಾವಿರ ರುಪಾಯಿಯ ಡಿಯೋರ್ ಸನ್ ಗ್ಲಾಸ್ ಗಿಫ್ಟ್ ನೀಡಿದ ಸಿಎಂ ವಿಜಯ್; ವಿಡಿಯೊ ವೈರಲ್
ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ
ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಎಪಿ ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವನ್ನು ಗುರಿಯಾಗಿಸಿಕೊಂಡು, ತೀವ್ರ ವಾಗ್ದಾಳಿ ನಡೆಸಿವೆ. ಶಾಹೀನ್ ಅವರ ವಿಡಿಯೋವನ್ನು ಹಂಚಿಕೊಂಡ ಕಾಂಗ್ರೆಸ್,ʼಬಿಜೆಪಿ ಸರ್ಕಾರದಲ್ಲಿ ಪ್ರಶ್ನೇ ಕೇಳಿದರೆ ಅದು ಅಪರಾಧವಾಗಿದೆʼ ಎಂದು ವ್ಯಂಗವಾಡಿದೆ. ʼಪತ್ರಕರ್ತರ ವಿರುದ್ಧ ಇಂತಹ ವರ್ತನೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.