ಬೆಂಗಳೂರು: ರಾಜಧಾನಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನಲೆ, ಸಾರ್ವಜನಿಕರ ಹಾಗೂ ಉದ್ಯೋಗಿಗಳ ನಿದ್ದೆಗೆಡೆಸಿದೆ. ಬೆಳಿಗ್ಗೆ ಕೆಲಸಕ್ಕೆ ಹೊರಡುವ ಜನರು ಹಾಗೂ ಉದ್ಯೋಗಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹಲವು ಮೀಮ್ಗಳು ಹಾಗೂ ವಿವಿಧ ಕಥೆಗಳು ಸೋಶಿಯಲ್ ಮೀಡಿಯಾದಲ್ಲಿ ದಿನವೂ ವೈರಲ್ ಆಗುತ್ತಿರುತ್ತವೆ. ಇದೀಗ ಕಂಪನಿಯ ಬಾಸ್ ಒಬ್ಬರು ಹಂಚಿಕೊಂಡ ಫೋಟೋವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.
ಬೆಳಗ್ಗೆ 10. 15 ಆದರೂ ಖಾಲಿ ಇರುವ ಕಚೇರಿಯ ಫೋಟೋವನ್ನು ಹಂಚಿಕೊಂಡಿರುವ ಆಪ್ಲೆಂಡ್ ಎಐ ಸ್ಟುಡಿಯೋ ಸಂಸ್ಥೆಯ ಸಂಸ್ಥಾಪಕ ಬಾಲ ಪನ್ನೀರ್ಸೆಲ್ವಂ ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿ ನೌಕರರು ಅನುಭವಿಸುವ ಯಾತನೆಯನ್ನು ಬಿಚ್ಚಿಟ್ಟಿದ್ದಾರೆ. ಬಾಲ ಪನ್ನೀರ್ಸೆಲ್ವಂ ಅವರು ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಖಾಲಿ ಇರುವ ಆಸನಗಳ ಆಫೀಸ್ ಫೋಟೋ ಶೇರ್ ಮಾಡಿಕೊಂಡು ಬರೆದುಕೊಂಡಿರುವ ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.
ಸಮಸ್ಯೆ ನೌಕರರದ್ದಲ್ಲ, ಟ್ರಾಫಿಕ್ನದ್ದು
ತಮ್ಮ ಪೋಸ್ಟ್ನಲ್ಲಿ ಟ್ರಾಫಿಕ್ ದಟ್ಟಣೆಯ ಕುರಿತು ಬರೆದುಕೊಂಡಿರುವ ಅವರು ‘ಇಲ್ಲಿ ಸಮಸ್ಯೆ ನೌಕರದ್ದಲ್ಲ, ಪ್ರತಿದಿನ ಆಫೀಸ್ಗೆ ಬಂದು ತಲುಪಲು ಅವರು ಪಡುತ್ತಿರುವ ಶ್ರಮದ್ದು. ಹೆಚ್ಎಸ್ಆರ್ ಲೇಔಟ್ನಂತಹ ಪ್ರದೇಶದಲ್ಲಿ ಕೇವಲ 4 ಕಿಲೋಮೀಟರ್ ದೂರ ಕ್ರಮಿಸಲು ಸ್ಕೂಟರ್ನಲ್ಲಿ 20 ನಿಮಿಷ ಹಾಗೂ ಕಾರಿನಲ್ಲಾದರೆ 30 ನಿಮಿಷಕ್ಕೂ ಹೆಚ್ಚು ಸಮಯ ಬೇಕು. ಸಿಗ್ನಲ್ಗಳು, ಸಿಕ್ಕ ಸಿಕ್ಕಂತೆ ನುಗುವ ಬೈಕ್ಗಳುನ್ನು ತಪ್ಪಿಸಿಕೊಂಡು ಆಫೀಸ್ ತಲುಪುವಷ್ಟರಲ್ಲೇ ಉದ್ಯೋಗಿಗಳು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಆಯಾಸಗೊಂಡಿರುತ್ತಾರೆ. ಹೀಗಿರುವಾಗ ಅವರು ಆಫೀಸ್ನಲ್ಲಿ ಸಕ್ರೀಯರಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
‘ವೈಟ್ಫೀಲ್ಡ್ನಿಂದ ಹೆಚ್ಎಸ್ಆರ್ ಲೇಔಟ್ವರೆಗೆ 17 ಕಿಲೋಮೀಟರ್ ದೂರವಿದೆ, ಮಳೆ ಯಾವುದೇ ರಸ್ತೆ ತಡೆಯಿಲ್ಲದಿದ್ದರು ಮನೆಗೆ ತಲುಪಲು ಬರೋಬ್ಬರಿ 2 ಗಂಟೆಗಳ ಸಮಯ ಬೇಕಾಗುತ್ತದೆ’. ಎಂದು ತಮ್ಮ ಸ್ವಂತ ಅನುಭವವನ್ನು ವಿವರಿಸಿದ್ದಾರೆ. ‘ಸಂಜೆ 6 ಗಂಟೆ ನಂತರ ಆಫೀಸ್ನಿಂದ ಹೊರಟರೆ ಮನೆ ತಲುಪಲು ಎರಡು ಪಟ್ಟು ಸಮಯ ಬೇಕಾಗುತ್ತದೆ. 5 ಗಂಟೆಗೆ ಹೊರಟರು ಮನೆಗೆ ತಲುಪುವಷ್ಟರಲ್ಲಿ ಸುಸ್ತಾಗಿ ನಮ್ಮ ವೈಯಕ್ತಿಕ ಜೀವನವನ್ನು ಆನಂಧಿಸಲು ಸಾಧ್ಯವಾಗುತ್ತಿಲ್ಲಾ. ಇದರಿಂದಾಗಿ ಮರುದಿನ ಬೆಳಗ್ಗೆ ಮತ್ತೆ ತಡವಾಗಿ ಆಫೀಸ್ಗೆ ಬರಬೇಕಾಗುತ್ತದೆ. ಈ ನಗರದಲ್ಲಿ ಕಷ್ಟಪಟ್ಟು ಉತ್ತಮವಾಗಿ ಕೆಲಸ ಮಾಡಲು ಮನಸಿದ್ದರು ಟ್ರಾಫಿಕ್ ಸಮಸ್ಯೆಯಿಂದ ನಮ್ಮ ಸಾಮರ್ಥ್ಯ ಹಾಳಾಗುತ್ತಿದೆ’. ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಬಾಲ ಪನ್ನೀರ್ಸೆಲ್ವಂ ಅವರ ಈ ಪೋಸ್ಟ್ಗೆ ಅನೇಕ ಐಟಿ ನೌಕರರು ಹಾಗೂ ಬೆಂಗಳೂರಿನ ನಿವಾಸಿಗಳು ಬೆಂಬಲ ಸೂಚಿಸಿದ್ದಾರೆ. ದಿನನಿತ್ಯ ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವುದರಿಂದ ಕೆಲಸದ ಮೇಲಿನ ಗಮನ ಹಾಗೂ ದೈಹಿಕ ಆರೋಗ್ಯ ಹಾಳಾಗುತ್ತಿದೆ. ಎಂದು ಹಲವರು ಕಮೆಂಟ್ಗಳ ಮೂಲಕ ಬೇಸರ ಹೊರಹಾಕಿದ್ದಾರೆ.