ನವದೆಹಲಿ, ಜು. 12: ಮಾನವೀಯತೆ ಇನ್ನು ಜೀವಂತವಾಗಿ ಉಳಿದಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಸಾಮಾನ್ಯವಾಗಿ ಆನ್ಲೈನ್ ಮೂಲಕ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವರಿ ಬಾಯ್ಯಿಂದ ಖರೀದಿಮಾಡುವುದು ಗ್ರಾಹಕರ ಕೆಲಸ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಆರ್ಡರ್ ಮಾಡಿದ ವಸ್ತು ಪಡೆದಿದ್ದು ಮಾತ್ರವಲ್ಲದೆ ಡೆಲಿವರಿ ಬಾಯ್ ಮನಸ್ಥಿತಿ ಅರ್ಥೈಸಿಕೊಂಡು ಮಾನವೀಯತೆ ಮೆರೆದಿದ್ದಾರೆ. ಡೆಲಿವರಿ ಬಾಯ್ ಕಣ್ಣುಗಳು ಕೆಂಪಗಾಗಿದ್ದು ಗಮನಿಸಿ ಗ್ರಾಹಕ ಆತ ಅತ್ತಿದ್ದಾನೆಂದು ಭಾವಿಸಿ ವಿಚಾರಿಸಿದ್ದಾರೆ. ಆಗ ಆತನ ತಾಯಿ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ಕೇಳಿ ಗ್ರಾಹಕ ಡೆಲಿವರಿ ಬಾಯ್ಗೆ 4,000 ರುಪಾಯಿಯ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಅಂಕಿತ್ ಪಾಂಡೆ ಎಂಬ ವ್ಯಕ್ತಿ ತಮ್ಮ ಖಾತೆಯಲ್ಲಿ ಈ ಘಟನೆಯನ್ನು (Viral News) ಹಂಚಿಕೊಂಡಿದ್ದಾರೆ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡುವವರು ತಮಗೆ ಇಂತಹ ಸಾವಿರ ಸಮಸ್ಯೆ ಇದ್ದರೂ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡುತ್ತಾರೆ. ಅದೆ ರೀತಿ ಅಂಕಿತ್ ಪಾಂಡೆ ಕೂಡ ಜೊಮ್ಯಾಟೊ ಮೂಲಕ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿದ್ದರು. ಈ ಡೆಲಿವರಿ ಬಾಯ್ ಹಲವರು ಬಾರಿ ಇವರ ಮನೆಗೆ ಬಂದಿದ್ದರು. ಈ ಭಾರಿ ಪಾರ್ಸೆಲ್ ನೀಡಿದ ನಂತರ ಡೆಲಿವರಿ ಬಾಯ್ ಹಿಂಜರಿಕೆಯಿಂದ "ಭಯ್ಯ, ನಾನು ಒಂದು ಲೋಟ ನೀರು ಸಿಗಬಹುದೇ?ʼʼ ಎಂದು ಕೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ಅಂಕಿತ್ ಡೆಲಿವರಿ ಬಾಯ್ ಅನ್ನು ಪ್ರೀತಿಯಿಂದ ಮನೆ ಒಳಗೆ ಕರೆದು ನೀರು ನೀಡಿದ್ದಾರೆ. ಆದರೆ ಆ ಡೆಲಿವರಿ ಬಾಯ್ ಕಣ್ಣುಗಳು ಕೆಂಪ ಗಾಗಿದ್ದವು ಮತ್ತು ಆತ ಅತ್ತಿರುವುದು ಎದ್ದು ಕಾಣುತ್ತಿತ್ತು. "ಏನಾಗಿದೆ?ʼʼ ಎಂದು ಕೇಳಿದಾಗ ಅವರು ತಮ್ಮ ತಾಯಿ ಬೆಳಿಗ್ಗೆ ಮೆಟ್ಟಿಲುಗಳಿಂದ ಜಾರಿ ಬಿದ್ದು ಗಂಭೀರ ಸ್ಥಿತಿಯಲ್ಲಿ ಐಸಿಯುಗೆ ದಾಖಲಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದರು.
ಅವರು ಊರಿಗೆ ಹೋಗಲು ಒಂದು ರೈಲು ರಾತ್ರಿ 11 ಗಂಟೆಗೆ ನಿಗದಿಯಾಗಿತ್ತು. ಅದರಲ್ಲಿ ಪ್ರಯಾಣಿಸಿದರೆ ಊರು ತಲುಪಲು ಕನಿಷ್ಠ 30 ಗಂಟೆ ಬೇಕಾಗುತ್ತಿತ್ತು. ನಾನು ಬದುಕಿರುವಾಗಲೇ ತಾಯಿಯನ್ನು ಕೊನೆಯದಾಗಿ ನೋಡಲು ಸಾಧ್ಯ ವಾಗುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಬೇಸರ ಹೊರಹಾಕಿದ್ದರು.
ರೈಲು ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ
ಇದನ್ನು ಕೇಳಿದ ಅಂಕಿತ್, ತನಗಾಗಿ ತಂದಿದ್ದ ಆಹಾರವನ್ನೇ ಮೊದಲು ಆತನಿಗೆ ತಿನ್ನಲು ನೀಡಿದ್ದಾರೆ. ನಂತರ ತಕ್ಷಣವೇ ತಮ್ಮ ಮೊಬೈಲ್ ತೆಗೆದು ಸುಮಾರು 4,000 ರುಪಾಯಿಯ ವಿಮಾನದ ಟಿಕೆಟ್ ಅನ್ನು ಆತನಿಗೆ ಬುಕ್ ಮಾಡಿಕೊಟ್ಟಿದ್ದಾರೆ. ಡೆಲಿವರಿ ಬಾಯ್ ತಾವು ಇದುವರೆಗೆ ವಿಮಾನ ನಿಲ್ದಾಣಕ್ಕೆ ಹೋಗಿಲ್ಲ ಎಂದಾಗ ಅಂಕಿತ್ ತನ್ನ ಸ್ನೇಹಿತ ಸಹಾಯ ಮಾಡುತ್ತಾನೆ ಎಂದು ಹೇಳಿ ಧೈರ್ಯ ತುಂಬಿದ್ದಾರೆ.
ಊರು ತಲುಪಿ ತಾಯಿಯನ್ನು ನೋಡಿದ ನಂತರ ಡೆಲಿವರಿ ಬಾಯ್, ಅಂಕಿತ್ ಅವರಿಗೆ ಕರೆ ಮಾಡಿ ತಾಯಿ ಅಪಾಯದಿಂದ ಪಾರಾಗಿದ್ದು, ಕೆಲವೇ ದಿನದಲ್ಲಿ ಮನೆಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅಂಕಿತ್ ತನಗಾಗಿ ಖರ್ಚು ಮಾಡಿದ್ದ 4,000 ರುಪಾಯಿ ಗೂಗಲ್ ಪೇ ಮೂಲಕ ವಾಪಸ್ ಕಳುಹಿಸಿದ್ದಾರೆ. ಆದರೆ ಅಂಕಿತ್ ಹಣ ತಾವಿಟ್ಟುಕೊಳ್ಳದೆ ಅವರ ತಾಯಿಗಾಗಿ ಖರ್ಚು ಮಾಡಲು ಹೇಳಿ ಮಾನವೀಯತೆ ಮೆರೆದಿದ್ದಾರೆ
ಆ ವ್ಯಕ್ತಿ ತಮ್ಮ ಪೋಸ್ಟ್ ಅನ್ನು ಮುಗಿಸುತ್ತಾ, "ಕೆಲವೊಮ್ಮೆ, ಯಾರೊಬ್ಬರ ಜೀವನವನ್ನು ಬದಲಾಯಿಸಲು ಲಕ್ಷಾಂತರ ರುಪಾಯಿಗಳನ್ನು ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಒಂದು ಲೋಟ ನೀರು, ಊಟ ಸಾಕು...ದಯೆಯಿಂದಿರಿ, ನೀವು ಯಾವಾಗ ಯಾರೊಬ್ಬರ ಪವಾಡವಾಗಬಹುದುʼʼ ಎಂದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದೆ.