ಭೋಪಾಲ್: ಕಸದ ವಾಹನದಲ್ಲಿ ಮೃತ ದೇಹವನ್ನು ಸಾಗಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಆಘಾತಕಾರಿ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು (Viral Video), ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕುತ್ಲಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಪತ್ತೆಯಾದ, 72 ಗಂಟೆ ಕಳೆದರೂ ವಾರಸುದಾರರು ಕಂಡುವರದ ಶವವನ್ನು ಅಂತ್ಯಕ್ರಿಯೆಗೆ ಕಳುಹಿಸಲಾಯಿತು. ಆದರೆ ಆಂಬ್ಯುಲೆನ್ಸ್ ಬಳಸುವ ಬದಲು, ದೇಹವನ್ನು ಕಬ್ಬಿಣದ ರಾಡ್ನಿಂದ ಎಳೆದುಕೊಂಡು ಹೋಗಿ ಕಸದ ಟ್ರ್ಯಾಕ್ಟರ್ಗೆ ತುಂಬಿಸಲಾಯಿತು.
ಮೃತದೇಹವನ್ನು ಯಾವುದೇ ಘನತೆ ಅಥವಾ ಕಾಳಜಿಯಿಲ್ಲದೆ ತೆರೆದ ಕಸದ ವಾಹನದಲ್ಲಿ ಸ್ಮಶಾನಕ್ಕೆ ಕಳುಹಿಸಲಾಯಿತು. ಈ ದೃಶ್ಯವು ನೋಡುಗರ ಎದೆ ಝಲ್ಲೆನಿಸಿದೆ. ಸಾವಿನ ನಂತರ ಮೃತದೇಹಕ್ಕೆ ಸೂಕ್ತ ಗೌರವ ಸಿಗದೇ ಇರುವುದು ಬೇಸರ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಈ ಸಮಯದಲ್ಲಿ ಕುತ್ಲಾ ಠಾಣೆಯ ಯಾವುದೇ ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ.
ವಿಡಿಯೊ ವೀಕ್ಷಿಸಿ:
ಸಾಮಾಜಿಕ ಸೇವಾ ಸಂಸ್ಥೆಯೊಂದು ಆಸ್ಪತ್ರೆಗೆ ಶವ ಸಂಸ್ಕಾರ ವಾಹನವನ್ನು ಒದಗಿಸಿದ್ದರೂ, ಅದನ್ನು ಈ ಗುರುತಿಸಲಾಗದ ಶವಕ್ಕೆ ಬಳಸಲಾಗದೇ ಇರುವುದು ದುರಂತವೇ ಸರಿ. ಇದು ಜಿಲ್ಲೆಯ ಪೊಲೀಸ್, ಆಡಳಿತ ಮತ್ತು ಆರೋಗ್ಯ ಇಲಾಖೆಯ ಸೂಕ್ಷ್ಮತೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಇನ್ನು ಈ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಗುರುತಿಸಲಾಗದ ಮೃತದೇಹವನ್ನು ಸಾಗಿಸಲು ನಗರಸಭೆಯಿಂದ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕರಣದಲ್ಲೂ ಅದೇ ರೀತಿ ಮಾಡಿರಬಹುದು. ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದಿರಬಹುದು ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.