ಚೆನ್ನೈ, ಜು. 29: ಇತ್ತೀಚೆಗೆ ಭಕ್ತಿಯ ಹೆಸರಿನಲ್ಲಿ ಜನರು ನಾನಾ ಸಾಹಸಕ್ಕೆ ಮುಂದಾಗುತ್ತಲೇ ಇರುತ್ತಾರೆ. ತಂತ್ರ ಜ್ಞಾನದ ಭರಟೆಯಲ್ಲೂ ಕೆಲವು ಜನರು ಮೂಢನಂಬಿಕೆಗಳತ್ತ ವಾಲುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬ ತನ್ನ ಜೀವವನ್ನು ಲೆಕ್ಕಿಸದೆ ಭಕ್ತಿಯನ್ನು ಪ್ರದರ್ಶಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ತಮಿಳುನಾಡಿನ ಪ್ರಸಿದ್ಧ ಅಣ್ಣಾಮಲೈಯಾರ್ ದೇವಸ್ಥಾನದ ಕಿರಿದಾದ ಮೋಕ್ಷ ಮಾರ್ಗದಲ್ಲಿ ಸಿಲುಕಿಕೊಂಡು ಭಕ್ತನೊಬ್ಬ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಇದೀಗ ಇದೇ ಜಾಗದಲ್ಲಿ ಮಹಿಳೆಯೊಬ್ಬರು ಹೊರ ಬರಲು ಪರದಾಡಿದ ದೃಶ್ಯ ಭಾರಿ ವೈರಲ್ (Viral News) ಆಗುತ್ತಿದೆ.
ಆಂಧ್ರ ಪ್ರದೇಶದ 36 ವರ್ಷದ ಮಣಿಕುಮಾರ್ ಮೃತ ವ್ಯಕ್ತಿ. ಆತ ಅರುಣಾಚಲ ಬೆಟ್ಟದ ಸುತ್ತಲಿನ ಪವಿತ್ರ ಗಿರಿವಾಲಂ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಜುಲೈ 24ರಂದು ಈ ಘಟನೆ ನಡೆದಿದೆ. ಯಾತ್ರಿಕರೊಬ್ಬರ ಮರಣದ ನಂತರ ಇದೀಗ ಮಹಿಳೆಯೊಬ್ಬಳು ಅಪಾಯಕ್ಕೆ ಸಿಲುಕಿದ ವಿಡಿಯೊ ವೈರಲ್ ಆಗುತ್ತಿದೆ. ಹಿಂದೆಯೇ ಅಪಾಯ ಸಂಭವಿಸಿದರೂ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕಿತ್ತು ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ವಿಡಿಯೊ ನೋಡಿ:
ಮಣಿಕುಮಾರ್ ಅರುಣಾಚಲ ಗಿರಿಗೆ ಅತ್ಯಂತ ಕಿರಿದಾದ ಬಂಡೆಗಳ ರಸ್ತೆಯ ಮೂಲಕ ಹೋಗಲು ಪ್ರಯತ್ನಿಸಿದ್ದಾನೆ. ಈ ಮಾರ್ಗವನ್ನು ಅನೇಕ ಭಕ್ತರು "ಮೋಕ್ಷ ಮಾರ್ಗ" ಅಥವಾ "ವಿಮೋಚನೆಯ ಮಾರ್ಗ" ಎಂದು ಕರೆಯುತ್ತಾರೆ. ಆದರೆ ಈ ಮಾರ್ಗವನ್ನು ದಾಟುವಾಗ, ಅವರು ಬಂಡೆಯ ನಡುವೆ ಸಿಲುಕಿಕೊಂಡಿದ್ದು ತೀವ್ರ ಉಸಿರಾಟದ ತೊಂದರೆ ಅನುಭವಿಸಿದರು.
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ಸ್ಥಳೀಯ ಭಕ್ತರ ಸಹಾಯದಿಂದ, ರಕ್ಷಣಾ ಪ್ರಯತ್ನದ ನಂತರ ಅವರನ್ನು ಹೊರೆತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೆ ಅವರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ, ಅದೇ ಕಿರಿದಾದ ಹಾದಿಯೊಳಗೆ ಮಹಿಳೆಯೊಬ್ಬಳು ಸಿಲುಕಿಕೊಂಡು ಉಸಿರಾಡಲು ಕಷ್ಟಪಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಕಲ್ಮಾ ಕಲಿಯಲು ಹೋಮ್ವರ್ಕ್ ಕೊಟ್ಟ ಶಿಕ್ಷಕಿ
ಅದೃಷ್ಟವಶಾತ್, ರಕ್ಷಣಾ ತಂಡಕ್ಕೆ ಅಂತಿಮವಾಗಿ ಗಂಭೀರ ಗಾಯಗಳಿಲ್ಲದೆ ಆಕೆಯನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು. ಈ ಹಿಂದೆಯೇ ಇಂತಹ ಘಟನೆ ನಡೆದಿದ್ದರೂ ಆಡಳಿತ ಮಂಡಳಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವ ಬಗ್ಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಮೋಕ್ಷ ಮಾರ್ಗ ಎಂದರೆ ಕಿರಿದಾದ ಬಂಡೆಯ ಮಾರ್ಗ. ಇದು ಇಡುಕ್ಕು ಪಿಳ್ಳಯಾರ್ ದೇವಾಲಯದ ಬಳಿ ಇದೆ. ವಿಶೇಷವಾಗಿ ಹುಣ್ಣಿಮೆಯ ದಿನ ಕಿರಿದಾದ ಜಾಗದಲ್ಲಿ ನುಸುಳಿ ಹೊರಬಂದರೆ ಜೀವನದ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಮೋಕ್ಷ ಸಿಗುತ್ತದೆ ಎಂಬುದು ಸ್ಥಳೀಯರ ನಂಬಿಕೆ.