ಇಂದೋರ್,ಜು.31: ವೃದ್ಧಾಶ್ರಮದಲ್ಲಿ ವೃದ್ಧ ಮಹಿಳೆಯರ ಮೇಲೆ ಹದಿಹರೆಯದ ಬಾಲಕನೊಬ್ಬ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಇಂದೋರ್ನಲ್ಲಿ ನಡೆದಿದೆ. ಮರದ ಕೋಲಿನಿಂದ ಬಾಲಕ ಮನ ಬಂದಂತೆ ಥಳಿಸಿದ್ದಾನೆ. ಈ ಘಟನೆ ಮಾರಿಮಾತಾ ನೀರಿನ ಟ್ಯಾಂಕ್ ಬಳಿಯ ಮಹಾರಾಣಾ ಪ್ರತಾಪ್ ವೆಲ್ಫೇರ್ ಸೊಸೈಟಿಯ ವೃದ್ಧಾಶ್ರಮದಲ್ಲಿ ನಡೆದಿದೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ 14 ವರ್ಷದ ಬಾಲಕನೊಬ್ಬ ವಿಶ್ರಾಂತಿ ಪಡೆಯುತ್ತಿದ್ದ ವೃದ್ಧ ಮಹಿಳೆಯರನ್ನು ಮರದ ಕೋಲಿನಿಂದ ಮನಬಂದಂತೆ ಹೊಡೆಯುವುದನ್ನು ತೋರಿಸುತ್ತದೆ. ಇದನ್ನು ತಡೆಯಲು ಬಂದ ಇತರರಿಗೂ ಹೊಡೆಯಲು ಮುಂದಾಗಿದ್ದಾನೆ. ವಿಚಾರಣೆಯ ಸಮಯದಲ್ಲಿ, ಬಾಲಕನ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ನೋಡಿ:
ಪೊಲೀಸರ ಪ್ರಕಾರ, ಬಾಲಕ ಸುಮಾರು ಐದು ತಿಂಗಳ ಹಿಂದೆ ತನ್ನ ತಾಯಿಯೊಂದಿಗೆ ವೃದ್ಧಾ ಶ್ರಮಕ್ಕೆ ಬಂದಿದ್ದನು. ಅವನ ತಾಯಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದು ಕೆಲವು ದಿನಗಳ ನಂತರ ಸಾವನ್ನಪ್ಪಿದ್ದರು. ಅಂದಿನಿಂದ, ಬಾಲಕ ಈ ವೃದ್ದಾಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಂಗಂಗಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಬಾಲಕನು ವೃದ್ಧ ಮಹಿಳೆಯೊಂದಿಗೆ ಈ ಹಿಂದೆ ಜಗಳವಾಡಿದ್ದನು. ಇದೇ ಕಾರಣದಿಂದ ಆತ ಕೋಲಿನಿಂದ ಹೊಡೆಯಲು ಮುಂದಾಗಿದ್ದಾನೆ. ಅವನನ್ನು ತಡೆಯಲು ಪ್ರಯತ್ನಿಸಿದ ಇತರ ಜನರೊಂದಿಗೂ ಆತ ಜಗಳವಾಡಿದ್ದಾನೆ. ಈ ಘಟನೆಯನ್ನು ಅರಿತ ಜಿಲ್ಲಾಡಳಿತ, ಸದ್ಯ ವೃದ್ಧಾಶ್ರಮವನ್ನು ಸೀಲ್ ಮಾಡಲು ನಿರ್ಧಾರ ಮಾಡಿದೆ.
ಈ ವೃದ್ಧಾಶ್ರಮದಲ್ಲಿದ್ದ ಒಟ್ಟು 30 ವೃದ್ಧರ ಪೈಕಿ ಆರೋಗ್ಯ ವಂತರನ್ನು ಗಾಂಧಿನಗರದ ನಿರಾಶ್ರಿತ ಆಶ್ರಮ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದೆ. ಬಾಲಕನಿಗೆ ಕೌನ್ಸೆಲಿಂಗ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನನ್ನು ವೃದ್ಧಾಶ್ರಮದಿಂದ ಹೊರಗೆ ಕರೆತಂದು ಹೆಚ್ಚಿನ ಮೇಲ್ವಿಚಾರಣೆಗಾಗಿ ಮಕ್ಕಳ ಆರೈಕೆ ಸಂಸ್ಥೆಗೆ ಕಳುಹಿಸಲಾಗುತ್ತದೆ.