ದಾವಣಗೆರೆ, ಸೆ. 8: ಇತ್ತೀಚೆಗೆ ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಭೇಟಿ ನೀಡುವ ಅನೇಕ ಘಟನೆಗಳು (Viral News) ನಡೆದಿವೆ. ಇದೀಗ ರಕ್ಷಿಸಲು ಮುಂದಾದ ಅರಣ್ಯ ಅಧಿಕಾರಿ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದಾವಣಗೆರೆಯ ಹೆದ್ದಾರಿಯಲ್ಲಿ ಕಾರ್ ಡಿಕ್ಕಿ ಹೊಡೆದು ಚಿರತೆಯೊಂದು ಗಂಭೀರ ಗಾಯಗೊಂಡು ಬಿದ್ದಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಚಿರತೆ ರಕ್ಷಿಸಲು ಮುಂದಾದ ಅರಣ್ಯ ಅಧಿಕಾರಿ ಮೇಲೆ ದಾಳಿ ಮಾಡಿದೆ.
ಅರಣ್ಯ ಇಲಾಖೆ ತಂಡವು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ವೈದ್ಯಕೀಯ ಚಿಕಿತ್ಸೆಗಾಗಿ ಕೊಂಡೊಯ್ಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ತಂಡದ ಸದಸ್ಯರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಚಿರತೆ ಇದ್ದಕ್ಕಿದ್ದಂತೆ ಅಧಿಕಾರಿಯ ಮೇಲೆ ದಾಳಿ ಮಾಡಲು ಮುಂದಾಯಿತು.
ವಿಡಿಯೊ ನೋಡಿ:
ರಾಷ್ಟ್ರೀಯ ಹೆದ್ದಾರಿ 48ರ ಆನಗೋಡು ಸಮೀಪ ಈ ಘಟನೆ ನಡೆದಿದೆ. ಕಾರು ಡಿಕ್ಕಿಯಾಗಿ ಚಿರತೆಯೊಂದು ತೀವ್ರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿತ್ತು. ಚಿರತೆಯನ್ನು ರಕ್ಷಿಸಿ ಚಿಕಿತ್ಸೆಗೆ ಒಯ್ಯಲು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಅರಣ್ಯಾಧಿಕಾರಿಗಳು ಡಾರ್ಟ್ ಬಳಸಿ ಅರವಳಿಕೆ ಮದ್ದನ್ನು ಚಿರತೆಗೆ ನೀಡಿದ್ದರು. ಆದರೆ ಮದ್ದು ಪೂರ್ತಿಯಾಗಿ ಕೆಲಸ ಮಾಡುವ ಮೊದಲೇ ಅಧಿಕಾರಿಗಳು ಹತ್ತಿರಕ್ಕೆ ತೆರಳಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಚಿರತೆ ಇದ್ದಕ್ಕಿದ್ದಂತೆ ಒಬ್ಬ ಅಧಿಕಾರಿಯ ಮೇಲೆ ದಾಳಿ ಮಾಡಿದೆ.
ಏಕಾಏಕಿ ಅಧಿಕಾರಿಯ ಮೇಲೆ ಹಾರಿ, ಅವರನ್ನು ನೆಲಕ್ಕೆ ಕೆಡವಿದೆ. ಜತೆಯಲ್ಲಿದ್ದ ಸಹೋದ್ಯೋಗಿಗಳು ತಕ್ಷಣವೇ ಕೋಲಿನಿಂದ ಚಿರತೆಯನ್ನು ಬೆದರಿಸಿ, ಗಮನ ಬೇರೆಡೆಗೆ ಸೆಳೆದರು. ಇದರಿಂದ ಅಧಿಕಾರಿ ಅಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ಹೊರತಾಗಿಯೂ, ಅರಣ್ಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಅಂತಿಮವಾಗಿ ಚಿಕಿತ್ಸೆಗಾಗಿ ಚಿರತೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.