ಲಖನೌ: ಊಟಕ್ಕೆ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದಕ್ಕೆ ಆಹಾರ ಮಾರಾಟಗಾರನೊಬ್ಬ ರೈಲು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿ ನಿಲ್ದಾಣದಲ್ಲಿ ಅಂಡಮಾನ್ ಎಕ್ಸ್ಪ್ರೆಸ್ನಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಮರಾದಲ್ಲಿ ಸೆರೆಯಾಗಿರುವ ಆಘಾತಕಾರಿ ವಿಡಿಯೊದಲ್ಲಿ, ರೈಲು ಬೋಗಿಯೊಳಗೆ ಮಾರಾಟಗಾರನು ಪ್ರಯಾಣಿಕನನ್ನು ಬೆಲ್ಟ್ನಿಂದ ಪದೇ ಪದೆ ಹೊಡೆಯುತ್ತಿರುವುದನ್ನು ನೋಡಬಹುದು. ಈ ದೃಶ್ಯವನ್ನು ಕಣ್ಣಾರೆ ನೋಡಿದ ಪ್ರಯಾಣಿಕರು ದಿಗ್ಭ್ರಮೆಗೊಂಡಿದ್ದಾರೆ. ಈ ಘಟನೆ ಆಗಸ್ಟ್ನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವರದಿಗಳ ಪ್ರಕಾರ, ಮಧ್ಯಪ್ರದೇಶದ ಬಿನಾ ನಿವಾಸಿ ನಿಹಾಲ್ (25) ಎಂದು ಗುರುತಿಸಲಾದ ಪ್ರಯಾಣಿಕ ಹಲ್ಲೆಗೊಳಗಾದಾತ. ಆಗಸ್ಟ್ 25ರಂದು ತನ್ನ ಕುಟುಂಬದೊಂದಿಗೆ ಕತ್ರಾಗೆ ಪ್ರಯಾಣಿಸುತ್ತಿದ್ದ. ನಿಹಾಲ್ ರೈಲಿನಲ್ಲಿ ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದ. ಅವರಿಗೆ 130 ರೂ. ಬಿಲ್ ನೀಡಲಾಯಿತು. ಭಾರತೀಯ ರೈಲ್ವೆ ಪಟ್ಟಿ ಮಾಡಿದ ಅಧಿಕೃತ ದರ ರೂ. 110 ಎಂದು ಉಲ್ಲೇಖಿಸಲಾಗಿತ್ತು. ಇದಕ್ಕೆ ಅವರು ಆಕ್ಷೇಪಿಸಿದಾಗ, ಮಾರಾಟಗಾರ ಆರಂಭದಲ್ಲಿ ಅಲ್ಲಿಂದ ಹೊರಟುಹೋಗಿದ್ದಾನೆ. ನಂತರ ಇತರೆ ಪುರುಷರ ಗುಂಪಿನೊಂದಿಗೆ ಹಿಂತಿರುಗಿದ ಹಿಂಸಾತ್ಮಕವಾಗಿ ವರ್ತಿಸಿದ್ದಾನೆ.
ಮಾರಾಟಗಾರನು ತನ್ನ ಬೆಲ್ಟ್ ತೆಗೆದು ನಿಹಾಲ್ ಮೇಲೆ ಥಳಿಸಲು ಪ್ರಾರಂಭಿಸಿದನು. ಹೊಡೆಯದಂತೆ ಪದೇ ಪದೇ ಮನವಿ ಮಾಡಿದರೂ ಅದನ್ನು ನಿರ್ಲಕ್ಷಿಸಿದನು. ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ಈ ಸಣ್ಣ ವಿಡಿಯೊದಲ್ಲಿ, ಭಯಭೀತರಾದ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಅವನನ್ನು ತಡೆಯಲು ವಿಫಲರಾದರು. ಆ ವ್ಯಕ್ತಿ ನಿಹಾಲ್ಗೆ ಬೆಲ್ಟ್ನಿಂದ ಹಲವು ಬಾರಿ ಹೊಡೆಯುವುದನ್ನು ತೋರಿಸುತ್ತದೆ.
ಇದನ್ನೂ ಓದಿ: Viral Video: ಮಕ್ಕಳಿಗೆ ಆಟ ಇಲ್ಲ... ಪಾಠ ಇಲ್ಲ... ಟೀಚರ್ ಕಾಲಿಗೆ ಮಸಾಜ್ ಮಾಡೋದೊಂದೇ ಕೆಲಸ- ವಿಡಿಯೊ ನೋಡಿ
NCM ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಈ ದೃಶ್ಯಾವಳಿಯ ಶೀರ್ಷಿಕೆ ಹೀಗಿದೆ: ಭಾರತೀಯ ರೈಲ್ವೆಯ ಅಡುಗೆ ಮಾಫಿಯಾ ಮತ್ತೆ ಮುಷ್ಕರ ನಡೆಸುತ್ತಿದೆ. 110 ರೂ. ಬೆಲೆಯ ಊಟಕ್ಕೆ 130 ರೂ. ಪಾವತಿಸಲು ನಿರಾಕರಿಸಿದ ಕಾರಣ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಅಂಡಮಾನ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕನೊಬ್ಬನನ್ನು ಕ್ರೂರವಾಗಿ ಥಳಿಸಲಾಯಿತು. IRCTC ಅಡುಗೆ ಮಾರಾಟಗಾರರ ಹೆಸರಿನಲ್ಲಿ ರೈಲಿನಲ್ಲಿ ಮಾಫಿಯಾ ನಡೆಯುತ್ತಿದೆ. ಈ ಗೂಂಡಾಗಳಿಂದ ಪ್ರಯಾಣಿಕರ ಮೇಲೆ ಹಲ್ಲೆಗಳು ಈಗ ಬಹುತೇಕ ಸಾಮಾನ್ಯವಾಗುತ್ತಿದೆ ಎಂದು ಬರೆದು, ಪೋಸ್ಟ್ ಮಾಡಲಾಗಿದೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ರೈಲ್ವೆ ಆನ್ಬೋರ್ಡ್ ಮಾರಾಟಗಾರರಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಭಾರತೀಯ ರೈಲ್ವೆಯಷ್ಟು ಭ್ರಷ್ಟ ಇಲಾಖೆಯನ್ನು ನಾನು ಎಂದಿಗೂ ನೋಡಿಲ್ಲ. ಒಂದೇ ಒಂದು ರೈಲು ಕೂಡ ಉತ್ತಮ ಆಹಾರವನ್ನು ನೀಡುವುದಿಲ್ಲ. ನಾನು ಬಹಳ ಹಿಂದೆಯೇ ಆನ್ಬೋರ್ಡ್ನಲ್ಲಿ ತಿನ್ನುವುದನ್ನು ನಿಲ್ಲಿಸಿದೆ. ಆದರೆ ನನಗೆ ಬೇರೆ ದಾರಿ ಇಲ್ಲದಿದ್ದಾಗ ತಿನ್ನುತ್ತೇನೆ. ಸಾಕಷ್ಟು ಬಾರಿ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ. ಆಹಾರ ಮಾರಾಟಗಾರರು ಗೂಂಡಾಗಳಂತೆ ವರ್ತಿಸುತ್ತಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದು ಕೇವಲ ಹೆಚ್ಚಿನ ಶುಲ್ಕ ವಿಧಿಸುವುದಲ್ಲ, ಬೆದರಿಸುವಿಕೆ ಕೂಡ. ಈ ಗೂಂಡಾಗಳನ್ನು ತಡೆಯಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು IRCTC ಯಾವಾಗ ಕ್ರಮ ಕೈಗೊಳ್ಳುತ್ತದೆ? ನಾವು #EndRailwayMafia ಮಾಡುವ ಸಮಯ ಬಂದಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಇದು ಅತಿರೇಕದ ನಡವಳಿಕೆ ಮತ್ತು ಇಂತಹ ಘಟನೆಗಳು ಆಗಾಗ ನಡೆಯುತ್ತಿವೆ. ಈ ಘಟನೆಗಳನ್ನು ತಡೆಯಲು ರೈಲ್ವೆ ಸಚಿವರು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು.
ಈ ಗೂಂಡಾಗಳು ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿರುವ ರೀತಿ ನೋಡಿದರೆ, ಅವರಿಗೆ ಮಾಲೀಕರು ಸಂಪೂರ್ಣ ಬೆಂಬಲ ನೀಡುತ್ತಿರುವಂತೆ ತೋರುತ್ತದೆ. ರೈಲ್ವೆ ಅಥವಾ ಪೊಲೀಸರು ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಅವರಿಗೆ ಖಚಿತವಾಗಿದೆ. ಅವರಿಗೆ ಯಾವುದೇ ಭಯವಿಲ್ಲ. ಭ್ರಷ್ಟಾಚಾರ ಮತ್ತು ಹೊಣೆಗಾರಿಕೆ ಇಲ್ಲದಿರುವುದು ನಮ್ಮ ಅಧಃಪತನಕ್ಕೆ ಮೂಲ ಕಾರಣ ಎಂದು ಮತ್ತೊಬ್ಬರು ಹೇಳಿದರು. ರೈಲಿನ ಇನ್-ಹೌಸ್ ಕ್ಯಾಟರಿಂಗ್ ಸೇವೆಯಿಂದ ಆಹಾರವನ್ನು ಆರ್ಡರ್ ಮಾಡದಿರುವುದು ಉತ್ತಮ. ಇದರ ಬದಲು ಆನ್ಲೈನ್ನಲ್ಲಿ ಆರ್ಡರ್ ಮಾಡಬಹುದು ಎಂದು ಒಬ್ಬ ವ್ಯಕ್ತಿ ಸಲಹೆ ನೀಡಿದರು.
ಇನ್ನು ರೈಲು ಬಿನಾ ತಲುಪಿದ ನಂತರ, ನಿಹಾಲ್ ಸರ್ಕಾರಿ ರೈಲ್ವೆ ಪೊಲೀಸರಿಗೆ (GRP) ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಕರ್ತವ್ಯದಲ್ಲಿದ್ದ ಅಧಿಕಾರಿಗಳು ದೂರು ನೋಂದಾಯಿಸಲು ನಿರಾಕರಿಸಿದರು. ಈ ವಿಷಯವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿಗದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಇದೀಗ ರೈಲ್ವೆ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದಾರೆ ಮತ್ತು ಈ ವಿಷಯವನ್ನು ಪರಿಶೀಲಿಸಲು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಝಾನ್ಸಿ ವಿಭಾಗದ PRO ಮನೋಜ್ ಕುಮಾರ್ ಹೇಳಿದರು.
ಸೆಂಟ್ರಲ್ ರೈಲ್ವೆಯ ಅಧಿಕೃತ ಎಕ್ಸ್ ಖಾತೆಯು ನಂತರ ಈ ವಿಡಿಯೊ ಇತ್ತೀಚಿನದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಜನರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಪೋಸ್ಟ್ ಮಾಡಲಾಗುತ್ತಿರುವ ಹಳೆಯ ವಿಡಿಯೊ ಎಂದು ತಿಳಿಸಿದೆ. ಝಾನ್ಸಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಈ ರೀತಿಯ ಯಾವುದೇ ಘಟನೆಯ ಬಗ್ಗೆ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅನಗತ್ಯ ಗೊಂದಲವನ್ನು ಉಂಟುಮಾಡುವ ಹಳೆಯ ವಿಡಿಯೊಗಳನ್ನು ಹಂಚಿಕೊಳ್ಳದಂತೆ ಅದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಒತ್ತಾಯಿಸಿದೆ.