ಡೆಹ್ರಾಡೂನ್, ಜೂ. 4: ಇತ್ತೀಚೆಗೆ ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ದೇಶದಲ್ಲಿ ಅನೇಕ ಅನಾಚಾರಗಳು ನಡೆಯುತ್ತಿವೆ. ಅದರಲ್ಲೂ ನದಿ, ಕೆರೆ ಹಾಗೂ ಸಮುದ್ರದಂತಹ ಜಲಮೂಲಗಳಿಗೆ ಹಾನಿಯಾಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಇದಕ್ಕೆ ಪೂರಕ ಎಂಬಂತೆ ಉತ್ತರಾಖಂಡದ ಬದರಿನಾಥದ ಸಮೀಪವಿರುವ ಪವಿತ್ರ ಸರಸ್ವತಿ ನದಿಗೆ ಪ್ರವಾಸಿಗರು ತ್ಯಾಜ್ಯ ಎಸೆದಿದ್ದಾರೆ. ಅನೇಕರು ಈ ವಿಡಿಯೊ (Viral News) ನೋಡಿ ಇದೇನಾ ಹಿಂದೂ ಸಂಸ್ಕೃತಿ? ಎಂದು ಕಿಡಿಕಾರಿದ್ದಾರೆ. ಭಾರತದಲ್ಲಿ ನಾಗರಿಕ ಪ್ರಜ್ಞೆ ಮರೆಯಾಗಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಇನ್ನಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮದ ಅತ್ಯಂತ ಪೂಜ್ಯ ನದಿಗಳಲ್ಲಿ ಒಂದಾದ ಸರಸ್ವತಿ ನದಿಗೆ ಪ್ರವಾಸಿಗರು ತ್ಯಾಜ್ಯ ಎಸೆದಿದ್ದಾರೆ. ಇಂತಹ ಪವಿತ್ರ ಸ್ಥಳದಲ್ಲಿ ಪ್ರವಾಸಿಗರು ಈ ರೀತಿ ಬೇಕಾಬಿಟ್ಟಿಯಾಗಿ ವರ್ತಿಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಲವರು ಪ್ರವಾಸಿಗರ ನಡವಳಿಕೆ ಮತ್ತು ಪವಿತ್ರ ಸ್ಥಳದಲ್ಲಿ ಪರಿಸರ ಶಿಸ್ತಿನ ಕೊರತೆಯನ್ನು ಪ್ರಶ್ನಿಸಿದರೆ, ಅನೇಕರು ಹಿಂದೂ ಭಕ್ತಿ ಇದೇನಾ? ಎಂದು ಕೇಳಿದ್ದಾರೆ.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಮಹಿಳೆ ದೂರದ ನಿಂತು ಹರಿಯುವ ನದಿಗೆ ಕಸವನ್ನು ಎಸೆಯುತ್ತಿರುವುದು ಕಂಡುಬಂದಿದೆ. ಈ ನದಿಯಲ್ಲಿ ಪ್ಲಾಸ್ಟಿಕ್ ತಾಜ್ಯಗಳು ಹರಿದು ಹೋಗುತ್ತಿರುವ ದೃಶ್ಯ ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ದೇವರ ಹೆಸರಿನಲ್ಲಿಯೂ ಇಂತವರಿಗೆ ಭಯ ಇಲ್ಲ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.
ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!
ಆಧ್ಯಾತ್ಮಿಕವಾಗಿ ಮಹತ್ವದ್ದಾಗಿರುವ ಸ್ಥಳದಲ್ಲಿಯೂ ಬೇಕಾಬಿಟ್ಟಿಯಾಗಿ ವರ್ತಿಸುವ ಇಂತಹವರ ಬಗ್ಗೆ ಅನೇಕರು ನಿರಾಶೆ ವ್ಯಕ್ತಪಡಿಸಿದ್ದಾರೆ. ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಪವಿತ್ರ ಧಾರ್ಮಿಕ ಸ್ಥಳವನ್ನು ರಕ್ಷಿಸಲು ಕಠಿಣ ನಿಯಮ ಜಾರಿಗೆ ತರಬೇಕು ಎಂದು ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ʼʼಈ ಮಹಿಳೆಯನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕುʼʼ ಎಂದು ಸಲಹೆ ನೀಡಿದ್ದಾರೆ.